ಇಬ್ಬರು ಅತೃಪ್ತರನ್ನು ಸೆಳೆಯಲು ಬಿಜೆಪಿ, ಜೆಡಿಎಸ್ ನಾಮುಂದು ತಾಮುಂದು
ಈ ರಾಜಕೀಯವೇ ಹೀಗೆ.. ಒಂದು ಪಕ್ಷದ ಅತೃಪ್ತರಿಂದ ತಮ್ಮ ತಮ್ಮ ಪಕ್ಷಗಳಿಗೆ ಏನು ಲಾಭವಾಗುತ್ತದೆ ಅನ್ನೋದೇ ಇಲ್ಲಿ ಲೆಕ್ಕಾಚಾರ. ಹಾವು, ಮುಂಗುಸಿಯಂತೆ ಕಿತ್ತಾಡತ್ತಿರುವವರು ಒಮ್ಮೆಲೇ ಒಂದಾಗಿ ಬಿಡುತ್ತಾರೆ.
ಮೂರು ವರ್ಷಗಳ ನಂತರ ಹೆಚ್ಚುಕಮ್ಮಿ ಪೂರ್ಣ ಪ್ರಮಾಣದ ಸಂಪುಟ ಪುನಾರಚನೆ ನಡೆಸಿದ ಸಿದ್ದರಾಮಯ್ಯನವರಿಗೆ, ಅಂಬರೀಶ್ ರಾಜೀನಾಮೆ, ಶ್ರೀನಿವಾಸ್ ಪ್ರಸಾದ್, ಖಮರುಲ್ ಇಸ್ಲಾಂ ವಾಕ್ ಪ್ರಹಾರ ಮತ್ತು ಬಂಡಾಯದ ಕಾವು ಈಗಾಗಲೇ ಬಿಸಿಮುಟ್ಟಿಸಿದೆ. (ಬಿಜೆಪಿಗೆ ಬಂದ್ರೆ, ಅಂಬಿಗೆ ಮಂಡ್ಯದಿಂದ ಟಿಕೆಟ್)
ಖುದ್ದು ಸಿಎಂ ದೂರವಾಣಿ ಮೂಲಕ ರಾಜೀನಾಮೆ ವಾಪಸ್ ತೆಗೆದುಕೊಳ್ಳಿ ಎಂದು ಮಾಡಿದ ಮನವಿಗೂ ಅಂಬರೀಶ್ 'ಆಗಕ್ಕಿಲ್ಲಾ' ಎಂದಿದ್ದಾರೆ. ಅತ್ತ ಸಚಿವ ಸ್ಥಾನ ಕಳೆದುಕೊಂಡಿರುವ ಶ್ರೀನಿವಾಸ್ ಪ್ರಸಾದ್ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪ್ರೀತಿಯ ಮಹಾಪೂರವನ್ನೇ ಹರಿಸಲಾರಂಭಿಸಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಆಗಲಿ ಅಂಬರೀಶ್ ಆಗಲಿ ಸದ್ಯಕ್ಕೆ ಕಾಂಗ್ರೆಸ್ ತೊರೆಯುವ ಬಗ್ಗೆ ಎಲ್ಲೂ ಮಾತನಾಡದಿದ್ದರೂ, ಇಬ್ಬರೂ ಮುಖಂಡರು ಪಕ್ಷದ ವಿರುದ್ದ ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನುವ ಮಾಹಿತಿಯಿದೆ.
ಮೈಸೂರು ಭಾಗದಲ್ಲಿ ಪ್ರಮುಖ ನಾಯಕರಾಗಿರುವ ಶ್ರೀನಿವಾಸ್ ಪ್ರಸಾದ್ ಮತ್ತು ಅಂಬರೀಶ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಭಾನುವಾರ (ಜೂ 19) ಆಖಾಡಕ್ಕಿಳಿದಿರುವ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಪ್ರಯತ್ನವನ್ನು ಮತ್ತಷ್ಟು ಮುಂದುವರಿಸಿದೆ. (ಕೈ ವಿರುದ್ಧ ಹಳೇ ಮೈಸೂರಿನಲ್ಲಿ ಬಂಡಾಯದ ಕಹಳೆ)
ಶ್ರೀನಿವಾಸ್ ಪ್ರಸಾದ್ ಮತ್ತು ಅಂಬರೀಶ್ ನಿವಾಸಕ್ಕೆ ದೇವೇಗೌಡರು ಈಗಾಗಲೇ ತಮ್ಮ ಪ್ರತಿನಿಧಿಯನ್ನು ಕಳುಹಿಸಿ, ಅಧಿಕೃತವಾಗಿಯೇ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.
ಇದರ ಮಧ್ಯೆ, ಕಾಂಗ್ರೆಸ್ ಪಕ್ಷದ ಮೇಲೆ ಸಿಟ್ಟಾಗಿರುವ ಶ್ರೀನಿವಾಸ್ ಪ್ರಸಾದ್ ಅವರನ್ನು ಯಡಿಯೂರಪ್ಪ ಕೂಡಾ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ. ಮುಂದೆ ಓದಿ.
ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದ ಬಿಜೆಪಿ ಮುಖಂಡ
ಸಂಪುಟದಿಂದ ಕೈಬಿಟ್ಟ ನಂತರ ಮಾಧ್ಯಮದವರ ಮುಂದೆ ಕಣ್ಣೀರಿಟ್ಟದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು, ಬಿಎಸ್ವೈ ಆದೇಶದಂತೆ ಭಾನುವಾರ ಬಿಜೆಪಿ ಮುಖಂಡ ರಾಮದಾಸ್ ಭೇಟಿ ಮಾಡಿ, ಪಕ್ಷಕ್ಕೆ ಬರುವಂತೆ ಮೊದಲ ಸುತ್ತಿನ ಆಹ್ವಾನ ನೀಡಿದ್ದರು. ಅದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದರು ಎನ್ನುವ ಮಾಹಿತಿಯಿದೆ.
ಗೌಡ್ರು, ಎಚ್ಡಿಕೆ ದೂರವಾಣಿ ಮೂಲಕ ಆಹ್ವಾನ
ಬಿಜೆಪಿ ಗಾಳ ಹಾಕುವ ಸುದ್ದಿ ಬರುತ್ತಿದ್ದಂತೆಯೇ, ದೇವೇಗೌಡ್ರು ಮತ್ತು ಕುಮಾರಸ್ವಾಮಿ ಶ್ರೀನಿವಾಸ್ ಪ್ರಸಾದ್ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ಪಕ್ಷದ ರಾಯಭಾರಿಯಾಗಿ ಜಿ ಟಿ ದೇವೇಗೌಡರನ್ನು ರಾಮದಾಸ್ ಭೇಟಿಯಾಗುವ ಮುನ್ನವೇ ದೊಡ್ಡ ಗೌಡ್ರು ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಕಳುಹಿಸಿದ್ದರು.
ಅಮಿತ್ ಶಾ
ರಾಜ್ಯದ ಇಬ್ಬರು ಪ್ರಭಾವಿ ಕಾಂಗ್ರೆಸ್ ಮುಖಂಡರನ್ನು ತಮ್ಮ ಪಕ್ಷದತ್ತ ಸೆಳೆಯಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡಾ ಉತ್ಸುಕರಾಗಿದ್ದಾರೆ ಎನ್ನುವ ಮಾಹಿತಿಯಿದೆ. ಪಕ್ಕಾ ರಾಜಕೀಯ ಲಾಭ ನಷ್ಟದ ಮೇಲೆಯೇ ಕೆಲಸ ಮಾಡುವ ಅಮಿತ್ ಶಾ ಅವರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದೇಶ್ವರ್, ಸಂಸದ ಪ್ರತಾಪ್ ಸಿಂಹ
ರಾಮದಾಸ್ ಅಲ್ಲದೇ, ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಸೋಮವಾರ ಕೇಂದ್ರ ಸಚಿವ ಸಿದ್ದೇಶ್ವರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ಮುಖಂಡರ ದಂಡೇ ಹರಿದು ಬಂದಿತ್ತು. ಯಡಿಯೂರಪ್ಪನವರು ನೀಡಿರುವ ಸಂದೇಶವನ್ನು ಶ್ರೀನಿವಾಸ್ ಪ್ರಸಾದ್ ಅವರಿಗೆ ತಲುಪಿಸುವ ಕೆಲಸವನ್ನು ಈ ಮುಖಂಡರು ಮಾಡಿದ್ದಾರೆ ಎನ್ನುವ ಮಾಹಿತಿಯಿದೆ.
ಮತ್ತೊಮ್ಮೆ ರಾಯಭಾರಿಯನ್ನು ಕಳುಹಿಸಿದ ಜೆಡಿಎಸ್
ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಚಿಕ್ಕಮಾದು ಮತ್ತು ಅಂಬರೀಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಶರವಣ ಅವರನ್ನು ದೇವೇಗೌಡ್ರು ಕಳುಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಅಂಬಿ ಮತ್ತು ಶ್ರೀನಿವಾಸ್ ಪ್ರಸಾದ್ ಯಾವ ಪಕ್ಷದ ಕಡೆ ಒಲವು ತೋರಲಿದ್ದಾರೆ ಅಥವಾ ಕಾಂಗ್ರೆಸ್ಸಿನಲ್ಲೇ ಮುಂದುವರಿಯಲಿದ್ದಾರಾ, ರಾಜಕೀಯದಿಂದಲೇ ದೂರವಾಗಲಿದ್ದಾರಾ ಎನ್ನುವುದು ಕಾದು ನೋಡಬೇಕಿದೆ.