9 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಿಸಿದ ಜೆಡಿಎಸ್, ಪಟ್ಟಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ 26: ಅಂತೂ-ಇಂತೂ ಜೆಡಿಎಸ್ ಪಕ್ಷ ತನ್ನ ಪಾಲಿನ ನಿಗಮ ಮಂಡಳಿ ಸ್ಥಾನಗಳಿಗೆ ಅಧ್ಯಕ್ಷರುಗಳ ನೇಮಿಸಿದೆ. ಅಧ್ಯಕ್ಷರ ನೇಮಕಾತಿ ಪಟ್ಟಿಗೆ ಸಿಎಂ ಕುಮಾರಸ್ವಾಮಿ ಅಂಕಿತ ಹಾಕಿದ್ದಾರೆ.
ಎಂಟು ಮಂದಿ ಶಾಸಕರು ಹಾಗೂ ಒಬ್ಬ ಜೆಡಿಎಸ್ ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ನೀಡಿದೆ. ಕಾಂಗ್ರೆಸ್ ಪಕ್ಷ ನಿಗಮ ಮಂಡಳಿಗೆ ನೇಮಕ ಮಾಡಿ ತಿಂಗಳುಗಳೇ ಕಳೆದಿದೆ ಆದರೆ ಜೆಡಿಎಸ್ ತಡವಾಗಿ ನೇಮಕ ಮಾಡಿದೆ.
ಶಿವರಾತ್ರಿಗೆ ಮುನ್ನಾ ನಿಗಮ ಮಂಡಳಿಗೆ ನೇಮಕ ಮಾಡುವ ನಿರೀಕ್ಷೆ ಇತ್ತು. ಜೊತೆಗೆ ಉಳಿದ ಎರಡು ಸಚಿವ ಸ್ಥಾನವನ್ನೂ ಜೆಡಿಎಸ್ ತುಂಬುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗೆ ಮಾಡಿಲ್ಲ. ಜೆಡಿಎಸ್ ಖಾತೆಯಲ್ಲಿನ ಎರಡು ಸಚಿವ ಸ್ಥಾನಗಳು ಹಾಗೆಯೇ ಇವೆ.

ಒಂಬತ್ತು ನಿಗಮ ಮಂಡಳಿಗಳೂ ಸಹ ಶಕ್ತಿಯುತ ನಿಗಮ ಮಂಡಳಿಗಳೇ ಜೆಡಿಎಸ್ ಪಾಲಿಗೆ ದೊರೆತಿವೆ. ಎಂಟು ಜನ ಶಾಸಕರನ್ನು ಮಂಡಳಿಗೆ ನೇಮಿಸಿದ್ದು, ಒಬ್ಬ ಜೆಡಿಎಸ್ ಮುಸ್ಲಿಂ ಮುಖಂಡರನ್ನು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ನೇಮಿಸಲಾಗಿದೆ.
ಗುರ್ಮಿಟ್ಕಲ್ ಶಾಸಕ ನಾಗನಗೌಡ ಕುಂದನೂರು ಅವರನ್ನು ಕೊಳಗೆರೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಅವರನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿಸಲಾಗಿದೆ.
ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಎಂಎಸ್ಐಎಲ್ಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಿರಾ ಶಾಸಕ ಸತ್ಯನಾರಾಯಣ ಅವರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅಧ್ಯಕ್ಷರನ್ನಾಗಿಸಲಾಗಿದೆ.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರಕ್ಕೆ (ಬಯಪಾ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಳವಳ್ಳಿ ಶಾಸಕ ಅನ್ನದಾನಿ ಅವರನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ.
ಅರಸಿಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಅವರನ್ನು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಿರಿಯಾಪಟ್ಟಣ ಶಾಸಕ ಕೆ.ಮಹದೇವ ಅವರನ್ನು ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮೊಹಮ್ಮದ್ ಜಫ್ರುಲ್ಲಾ ಖಾನ್ ಅವರನ್ನು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿಸಲಾಗಿದೆ. ಇವರು ಶಾಸಕರಲ್ಲ ಆದರೆ ಜೆಡಿಎಸ್ನ ಮುಖಂಡರು.












Click it and Unblock the Notifications