ಕುಮಾರಸ್ವಾಮಿ ಸಿಎಂ ಆಗಲಿ ಎಂದು ಬರಿಗಾಲಿನಲ್ಲಿ ಪಾದಯಾತ್ರೆ
ಬೆಂಗಳೂರು ಏಪ್ರಿಲ್ 4: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಬೆಂಗಳೂರಿನಿಂದ ಚಾಮುಂಡಿ ಬೆಟ್ಟದ ತನಕ ಬರಿಗಾಲಿನ ಪಾದಯಾತ್ರೆ ಆರಂಭವಾಗಿದೆ.
ಬೆಂಗಳೂರಿನ ಜೆಡಿಎಸ್ ಕಾರ್ಯಕರ್ತರು ಬುಧವಾರ ಬೆಂಗಳೂರಿನಿಂದ ಮೈಸೂರಿನ ಚಾಮುಂಡಿ ಬೆಟ್ಟದ ತನಕ ಬರಿಗಾಲಿನ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಕೇಶ್ ಎಂ.ದೇಶರ್ಲಾ ನೇತೃತ್ವದ ತಂಡ ಪಾದಯಾತ್ರೆ ನಡೆಸುತ್ತಿದೆ.
ಬುಧವಾರ ಬೆಂಗಳೂರಿನ ಕಮ್ಮನಹಳ್ಳಿ ವೃತ್ತದಿಂದ ಆರಂಭವಾದ ಪಾದಯಾತ್ರೆ ಮೊದಲು ವಿಧಾನಸೌಧ ತಲುಪಿತು. ನಂತರ ಮೈಸೂರಿನತ್ತ ಸಾಗಿತು. ನೂರಾರು ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿ ಎಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

'ರಾಜ್ಯ ಕಂಡ ಜನ ಮೆಚ್ಚಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಇನ್ನೊಮ್ಮೆ ಅಧಿಕಾರದ ಗದ್ದುಗೇ ಏರಲಿ ಎನ್ನುವುದು ನಮ್ಮ ಆಶಯವಾಗಿದೆ. ಅವರ ಆಡಳಿತಾವಧಿಯಲ್ಲಿ ರಾಜ್ಯ ಕಂಡ ಅಭಿವೃದ್ದಿ ಇನ್ನೊಮ್ಮೆ ನಮ್ಮ ಪಾಲಿಗೆ ಬರಲಿ ಎನ್ನುವುದು ನಮ್ಮ ಗುರಿಯಾಗಿದೆ' ಎಂದು ರಾಕೇಶ್ ಹೇಳಿದರು.
'ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿ. ಈ ಮೂಲಕ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿ ಎನ್ನುವ ಆಶಯದಿಂದ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಪಡೆಯಲು ಹೊರಟಿದ್ದೇವೆ' ಎಂದರು.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ 12ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮೂರು ಪಕ್ಷಗಳು ಬಿರುಸಿನಿಂದ ಚುನಾವಣಾ ಪ್ರಚಾರವನ್ನು ನಡೆಸುತ್ತಿವೆ.












Click it and Unblock the Notifications