Breaking; ಸಿದ್ದರಾಮಯ್ಯರನ್ನು ತಮ್ಮ ಕ್ಷೇತ್ರಕ್ಕೆ ಆಹ್ವಾನಿಸಿದ ಸಚಿವ!
ಬೆಂಗಳೂರು, ನವೆಂಬರ್ 13; "ಕೋಲಾರ ಸಹ ಸಿದ್ದರಾಮಯ್ಯಗೆ ಸಹ ಸೇಫ್ ಅಲ್ಲ. ನಾನು ಅವರನ್ನು ಚಿಕ್ಕನಾಯಕನಹಳ್ಳಿಗೆ ಸ್ವಾಗತಿಸುತ್ತೇನೆ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.
ಭಾನುವಾರದ ಸಿದ್ದರಾಮಯ್ಯ ಕೋಲಾರ ಭೇಟಿ ಚರ್ಚೆಗೆ ಕಾರಣವಾಗಿದೆ. ಅವರು ಕೋಲಾರ ಕ್ಷೇತ್ರದಿಂದಲೇ ಮುಂದಿನ ಚುನಾವಣಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಈ ಕುರಿತು ಮಾತನಾಡಿದ ಜೆ. ಸಿ. ಮಾಧುಸ್ವಾಮಿ, "ಕಳೆದ ಚುನಾವಣೆಯಲ್ಲಿ ಅವರು ಚುನಾವಣೆ ಗೆಲ್ಲುವುದು ಕಷ್ಟ ಎಂಬುದು ಸಾಬೀತಾಗಿದೆ. ಆದ್ದರಿಂದ ಮತ್ತೆ ಅವರು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ" ಎಂದು ಜೆ. ಸಿ. ಮಾಧುಸ್ವಾಮಿ ಹೇಳಿದರು.

"ನಾನು ತಿಳಿದ ಹಾಗೆ ಅವರಿಗೆ ಕೋಲಾರ ಸೇಫ್ ಆದ ಜಾಗವಲ್ಲ. ಇನ್ನೂ ನಾಲ್ಕು ಸ್ಥಳ ಹೇಳಿದರಲ್ಲ ಅದರಲ್ಲಿ ಒಂದು ನೋಡಬಹುದು. ನಾವು ಅವರಿಗೆ ಯಾಕೆ ಸೇಫ್ ಜಾಗ ಹೇಳೋಣ, ಮಾಡಿಕೊಡೋಣ?" ಎಂದು ಸಚಿವರು ಪ್ರಶ್ನಿಸಿದರು.
ಸಿದ್ದರಾಮಯ್ಯ ಕ್ಷೇತ್ರ ಯಾವುದು?; ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ? ಎಂಬುದು ಬಹು ಚರ್ಚಿತ ವಿಚಾರ.
2018ರ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಬಾದಾಮಿಯಿಂದ ಅವರು ಕಣಕ್ಕಿಳಿದಿದ್ದರು. ಮೈಸೂರಿನಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿದ್ದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಈಗಾಗಲೇ ಪತ್ರ ಬರೆಯಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸಿ. ಸಿದ್ದರಾಮಯ್ಯ ಈಗಾಗಲೇ ಚಿಕ್ಕನಾಯಕನಹಳ್ಳಿಗೆ ಆಹ್ವಾನ ನೀಡಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದರಿಂದ ಇಡೀ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನೆಲೆ ಕಳೆದುಕೊಳ್ಳುತ್ತದೆ ಎಂದು ವೈ. ಸಿ. ಸಿದ್ದರಾಮಯ್ಯ ಪತ್ರದಲ್ಲಿ ವಿವರಣೆ ನೀಡಿದ್ದಾರೆ.
ಸಿದ್ದರಾಮಯ್ಯ ಚಾಮರಾಜಪೇಟೆ, ಹೆಬ್ಬಾಳ, ವರುಣ, ಮತ್ತೆ ಬಾದಾಮಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿಲ್ಲ.












Click it and Unblock the Notifications