ಜನಾರ್ದನ ರೆಡ್ಡಿ, ಎಚ್ಡಿಕೆ ಗಣಿಗಾರಿಕೆಗೆ ಹೊಸ ತಿರುವು! ಸಿಡಿಯುತ್ತಾ ರೆಡ್ಡಿ ಬಾಂಬ್
ಕುಮಾರಸ್ವಾಮಿ ಮತ್ತು ಜನಾರ್ದನ ರೆಡ್ಡಿ ರಾಜಕೀಯ ಮೇಲಾಟಕ್ಕೆ ಭಾಷ್ಯ ಬರೆದಿದ್ದ ಜಂತಕಲ್ ಮೈನಿಂಗ್ ಹಗರಣ ಹೊಸ ತಿರುವು ಪಡೆದುಕೊಂಡಿದೆ. ಜೂನ್ 13ರಂದು ತನಿಖೆಗೆ ಹಾಜರಾಗಬೇಕೆಂದು ವಿಶೇಷ ತನಿಖಾ ದಳ, ಜನಾರ್ದನ ರೆಡ್ಡಿಗೆ ನೊಟೀಸ್ ನೀಡಿದೆ.
ಯಡಿಯೂರಪ್ಪ, ಎಚ್ಡಿಕೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮತ್ತು ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ರಾಜಕೀಯ ಮೇಲಾಟಕ್ಕೆ ಭಾಷ್ಯ ಬರೆದಿದ್ದ ಜಂತಕಲ್ ಮೈನಿಂಗ್ ಹಗರಣ ಹೊಸ ತಿರುವು ಪಡೆದುಕೊಂಡಿದೆ.
ವಿಶೇಷ ತನಿಖಾ ದಳ (SIT) ಜನಾರ್ದನ ರೆಡ್ಡಿಯವರನ್ನು ಜೂನ್ 13ರಂದು ತನಿಖೆಗೆ ಹಾಜರಾಗಬೇಕೆಂದು ನೋಟಿಸ್ ನೀಡುವ ಮೂಲಕ, ಅಸೆಂಬ್ಲಿ ಚುನಾವಣೆ ಹತ್ತಿರ ಬರುತ್ತಿರುವ ಈ ವೇಳೆ, ಅಕ್ರಮ ಗಣಿಗಾರಿಕೆ ಪ್ರಕರಣ ಬಿಜೆಪಿ ಮತ್ತು ಜೆಡಿಎಸ್ ನಡುವೆ ರಾಜಕೀಯ ರಣರಂಗವಾಗುವ ಸಾಧ್ಯತೆ ಇಲ್ಲದಿಲ್ಲ.
ಜಂತಕಲ್ ಮೈನಿಂಗ್ ಕೇಸ್, ಎಚ್ಡಿಕೆಗೆ ಜಾಮೀನು
ಮೇ 19ರಂದು ಅಕ್ರಮ ಗಣಿಗಾರಿಕೆ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ, ಹದಿನೈದು ದಿನದೊಳಗೆ ಅಂದು ನಾನು ಮಾಡಿದ್ದ ಆರೋಪಕ್ಕೆ ಸೂಕ್ತ ದಾಖಲೆ ಒದಗಿಸುವುದಾಗಿ ತನಿಖಾ ದಳದ ಮುಂದೆ ಕಾಲಾವಕಾಶ ಕೇಳಿದ್ದರು.
ಹದಿನೈದು ದಿನದ ಬದಲು, ಮೂವತ್ತು ದಿನದ ಕಾಲವಾಕಾಶ ನೀಡಿರುವ ತನಿಖಾ ದಳ, ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಮೂಲಕ, ಜಂತಕಲ್ ಮೈನಿಂಗ್ ಪ್ರಕರಣ ಹೊಸ ತಿರುವು ಪಡೆಯುವತ್ತ ಸಾಗುತ್ತಿದೆ. ಜೂನ್ 13ರಂದೇ ರೆಡ್ಡಿ ವಿಚಾರಣೆಯ ಬಳಿಕ, ಲೋಕಾಯುಕ್ತ ವಿಶೇಷ ತನಿಖಾ ದಳ ತನ್ನ ತೀರ್ಪನ್ನು ನೀಡುವ ಸಾಧ್ಯತೆಯಿದೆ.
ತನಿಖಾಧಿಕಾರಿಗಳನ್ನು ರೆಡ್ಡಿ ಎದುರಿಸಬೇಕಾಗಿದೆ
ರಾಜಕೀಯ ಮುಖಂಡರಿಗೆ ಈ ಪ್ರಕರಣ ಬ್ಯಾಕ್ ಡೇಟೆಡ್ ಆಗಿದ್ದರೂ, ತನಿಖಾ ದಳಕ್ಕೆ ಹಿಡಿದ ಕೆಲಸವನ್ನು ಮುಗಿಸಬೇಕಲ್ಲ. ಹಾಗಾಗಿ, ಜನಾರ್ದನ ರೆಡ್ಡಿ ಮಂಗಳವಾರ (ಜೂ 13) ದಾಖಲೆ ಸಮೇತ ತನಿಖಾಧಿಕಾರಿಗಳನ್ನು ಎದುರಿಸಬೇಕಾಗಿದೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮತ್ತು ಜೈಲಿನಿಂದ ಹೊರಗೆ ಬಂದ ನಂತರ ತನ್ನ ಹಿಂದಿನ ರಾಜಕೀಯ ಹಿಡಿತ ಸಾಧಿಸಲು ರೆಡ್ಡಿಗೆ ಈ ಪ್ರಕರಣ ಪ್ರಮುಖವಾದದ್ದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿ ಗಂಭೀರವಾಗಿ ಪರಿಗಣಿಸಬೇಕಾಗಿದೆ
ಒಂದು ವೇಳೆ ರೆಡ್ಡಿ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲವಾದರೆ, ಬಿಜೆಪಿ ಮುಖಂಡರು ತನ್ನ ಮೇಲೆ ವೃಥಾ ಆರೋಪ ಮಾಡಿ, ತನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆಂದು ಕುಮಾರಸ್ವಾಮಿ ರಾಜಕೀಯ ಮೈಲೇಜ್ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿರುವುದರಿಂದ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನುವ ಮಾಹಿತಿಯಿದೆ.
ಜಂತಕಲ್ ಮೈನಿಂಗ್ ಹಗರಣ
ಜಂತಕಲ್ ಮೈನಿಂಗ್ ಸಂಬಂಧ ಸಾಧ್ಯವಾಗುವ ಎಲ್ಲಾ ದಾಖಲೆ, ವಿಡಿಯೋ, ಹೇಳಿಕೆಗಳನ್ನು ಜನಾರ್ದನ ರೆಡ್ಡಿ ಕ್ರೋಢೀಕರಿಸಿಕೊಂಡು, ತನಿಖಾ ದಳದ ಮುಂದೆ ಹಾಜರಾಗಲು ಸರ್ವಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
ಕುಮಾರಸ್ವಾಮಿ ಆರೋಪ
ಜಂತಕಲ್ ಅಕ್ರಮ ಅದಿರು ಕೇಸಿನಲ್ಲಿ ಜಾಮೀನು ಸಿಕ್ಕನಂತರ ಕುಮಾರಸ್ವಾಮಿ, ಬಿಜೆಪಿ ಮತ್ತು ಯಡಿಯೂರಪ್ಪನವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ರಾಜ್ಯಾದ್ಯಂತ ಪ್ರವಾಸ ಮಾಡಿ, ನಾನು ಹೋಗುತ್ತಿರುವ ವೇಗಕ್ಕೆ ಸ್ಪಂಧಿಸಲಾಗದೇ, ಬಿಜೆಪಿ ವಾಮಮಾರ್ಗದ ಮೂಲಕ ನನ್ನನ್ನು ಕಟ್ಟಿಹಾಕಲು ತಂತ್ರಗಾರಿಕೆ ಹಣೆಯುತ್ತಿದೆ ಎಂದು ಕುಮಾರಾಸ್ವಾಮಿ ಆರೋಪಿಸಿದ್ದರು.
ಸರಿಯಾದ ಸಿದ್ದತೆ ಮೂಲಕ ವಿಚಾರಣೆಗೆ ರೆಡ್ಡಿ
ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಸಮೇತ ತಿರುಗೇಟು ನೀಡುವ ಅವಶ್ಯಕತೆಯಲ್ಲಿರುವ ಬಿಜೆಪಿ, ತನಿಖಾ ದಳದ ಮುಂದೆ ಜನಾರ್ದನ ರೆಡ್ಡಿ ಸರಿಯಾದ ಸಿದ್ದತೆಯ ಮೂಲಕ ಹಾಜರಾಗಲು ಎಲ್ಲಾ ಪೂರ್ವತಯಾರಿ ನಡೆಸುತ್ತಿದೆ ಎನ್ನುವ ಮಾಹಿತಿಯಿದೆ.