ತಾಯಿಗೆ ಸ್ವಂತ ಮಗನಿಂದಲೇ ಮೋಸ, ಜನತಾ ದರ್ಶನದಲ್ಲಿ ನ್ಯಾಯ ಕೊಡಿಸಿದ ಸಿಎಂ ಸಿದ್ದರಾಮಯ್ಯ!
ಈಗಿನ ಕಾಲದಲ್ಲಿ ಜನ್ಮ ನೀಡಿದ ತಂದೆ-ತಾಯಿಗೆ ಮಕ್ಕಳು ಮೋಸ ಮಾಡುವುದು ಎಲ್ಲೆಲ್ಲು ಕೇಳಿಬರುವ ಆರೋಪ. ಅದ್ರಲ್ಲೂ ಆಸ್ತಿ ವಿಚಾರ ಬಂತು ಅಂದ್ರೆ ಕೆಲ ಮಕ್ಕಳು ಹೆತ್ತವರಿಗೇ ಮೋಸ ಮಾಡಿ ಹಣ ಮಾಡಲು ಮುಂದಾಗುತ್ತಾರೆ. ಇದೆ ರೀತಿಯ ಘಟನೆಯೊಂದು ಇಂದು ಸಿಎಂ ಸಿದ್ದರಾಮಯ್ಯ ಅವರು ನಡೆಸಿದ 'ಜನತಾ ದರ್ಶನ'ದಲ್ಲಿ ಬಯಲಿಗೆ ಬಂದಿದೆ. ಒಬ್ಬ ತಾಯಿಗೆ ಆಕೆ ಮಗನಿಂದಲೇ ಅನ್ಯಾಯ ಆಗಿದ್ದನ್ನು ತಿಳಿದ ಸಿಎಂ ಮಾಡಿದ್ದೇನು ಗೊತ್ತಾ?
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಅದರಲ್ಲೂ ಕಲಿಯುಗದಲ್ಲಿ ಹಣ ಇಲ್ಲದೆ ಏನೂ ಆಗಲ್ಲ ಅಂತಾರೆ ಜನ. ಇದೇ ಕಾರಣಕ್ಕೆ ಹಣ ಮಾಡಲು ತಪ್ಪು ದಾರಿ ತುಳಿಯುವ ಜನರೇ ಹೆಚ್ಚು. ಇದೇ ರೀತಿ ಆಸ್ತಿ ವಿಚಾರದಲ್ಲಿ ಸ್ವತಃ ತನ್ನ ತಾಯಿಗೆ ಮೋಸ ಮಾಡಿದ್ದ ಮಗನಿಗೆ ಸಿಎಂ ಸಿದ್ದರಾಮಯ್ಯ ಬುದ್ಧಿ ಕಲಿಸಲು ಮುಂದಾಗಿದ್ದರು. ಹಾಗಾದರೆ ಈ ಘಟನೆಯಲ್ಲಿ ಆಗಿದ್ದು ಏನು? 'ಜನತಾ ದರ್ಶನ'ದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾದ ವಿಚಿತ್ರ ಸವಾಲು ಎಂತಹದ್ದು? ಮುಂದೆ ಓದಿ.

ಮಗನಿಂದಲೇ ತಾಯಿಗೆ ಮಹಾಮೋಸ?
ಈ ಸ್ಟೋರಿಯಲ್ಲಿ ಮಗರಾಯನೇ ವಿಲನ್. ತುಮಕೂರು ಜಿಲ್ಲೆಯ, ತಿಪಟೂರು ತಾಲೂಕಿನ ನಿವಾಸಿ ಮಹದೇವಮ್ಮ ಅವರಿಗೆ ಆಸ್ತಿಯಲ್ಲಿ ಪಾಲು ಕೊಡದೆ ಮಗನೆ ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ವಿಭಾಗ ಪತ್ರ ಕೊಡಿಸಿ ರಕ್ಷಣೆ ನೀಡುವಂತೆ ವೃದ್ಧೆ ಮಹದೇವಮ್ಮ ಅವರು ಮನವಿ ಮಾಡಿದರು. ಆಗ ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ಜಿಲ್ಲಾ ರಕ್ಷಣಾಧಿಕಾರಿಗೆ ಕಾಲ್ ಮಾಡಿದರು. ಮಹದೇವಮ್ಮ ಅವರಿಗೆ, ನ್ಯಾಯ ಕೊಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಹದೇವಮ್ಮ ಅವರಿಗೆ ಮಗ ಆಸ್ತಿಯಲ್ಲಿ ಪಾಲು ಕೊಡದೇ ಮೋಸ ಮಾಡಿದ್ದಾನೆ, ವಿಭಾಗ ಪತ್ರವನ್ನು ಕೊಡಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದರು.
— Karnataka Congress (@INCKarnataka) November 27, 2023
ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕರೆ ಮಾಡಿದ ಸಿಎಂ ಮಹದೇವಮ್ಮ ಅವರಿಗೆ ನ್ಯಾಯ ಕೊಡಿಸುವಂತೆ ಸೂಚಿಸಿದರು.#ಸಿಎಂಜನತಾದರ್ಶನ pic.twitter.com/qbd3Snp8kd
ವೃದ್ಧಾಪ್ಯ ವೇತನ ಮಂಜೂರಾತಿಗೆ ಆದೇಶ
ಒಂದುಕಡೆ ಮಗನಿಂದ ಆಸ್ತಿ ವಿಚಾರದಲ್ಲಿ ಮೋಸ ಹೋದ ವೃದ್ಧೆಗೆ ಸಿಎಂ ಸಿದ್ದರಾಮಯ್ಯ ಅವರು ಸಹಾಯ ಮಾಡಿದಂತೆ ವೃದ್ಧಾಪ್ಯ ವೇತನ ಮಂಜೂರಾತಿಗೆ ಪರದಾಡುತ್ತಿದ್ದ ಹಿರಿಯ ಜೀವಕ್ಕೂ ನೆರವಾದರು ಸಿಎಂ. ಬೆಂಗಳೂರಿನ ಸಿಎಂ ಸಿದ್ದರಾಮಯ್ಯರ ಗೃಹ ಕಚೇರಿಯಲ್ಲಿ ಇಂದು ನಡೆದ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ, ವೃದ್ಧಾಪ್ಯ ವೇತನ ಮಂಜೂರಾತಿಗಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವೃದ್ಧರೊಬ್ಬರು ಸಿಎಂ ಸಿದ್ದರಾಮಯ್ಯರ ಬಳಿ ನೋವು ಹೇಳಿಕೊಂಡರು.

ಸ್ಥಳದಲ್ಲೇ ಬಗೆಹರಿದ ಸಮಸ್ಯೆ
ಪಿಂಚಣಿ ವಿಚಾರದಲ್ಲಿ ವೃದ್ಧನಿಗೆ ಆದ ಸಮಸ್ಯೆಯನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಆ ಬಗ್ಗೆ ಕ್ರಮಕ್ಕೆ ಮುಂದಾದರು. ಸಾಮಾಜಿಕ ಭದ್ರತೆ & ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ ತೊಂದರೆ ಇದ್ದರೆ ತಕ್ಷಣ ಬಗೆಹರಿಸಿ, ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಸೂಚಿಸಿದರು. ಅಸಹಾಯಕ ಬಡ ವೃದ್ಧರೊಬ್ಬರ ಸಮಸ್ಯೆ ಈ ಮೂಲಕ ಸ್ಥಳದಲ್ಲೇ ಬಗೆಹರಿದಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
"ಜನತಾ ದರ್ಶನ"
— CM of Karnataka (@CMofKarnataka) November 27, 2023
- ಜನರ ಬಳಿಗೆ ಸರ್ಕಾರ
ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವೃದ್ಧರೊಬ್ಬರು ಜನತಾ ದರ್ಶನದಲ್ಲಿ ಮುಖ್ಯಮಂತ್ರಿ @siddaramaiah ಅವರ ಬಳಿ ನೋವು ತೋಡಿಕೊಂಡರು.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ ತೊಂದರೆ ಇದ್ದರೆ ತಕ್ಷಣ ಬಗೆಹರಿಸಿ, ಸಿಬ್ಬಂದಿಯಿಂದ… pic.twitter.com/cXcESumGpv
ಸಿಎಂ ಫೈನಲ್ ವಾರ್ನಿಂಗ್!
ಅನೇಕ ಸಮಸ್ಯೆಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ನೀಡಲು ಸಾಧ್ಯ. ಆದ್ರೆ ಕೆಲ ಅರ್ಜಿಗಳು ಕೂಡಲೇ ತೀರ್ಮಾನ ಆಗಲ್ಲ, ಸಮಯ ಅಗತ್ಯ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದ್ರೆ ಅದು ಬೆಳೆಯುತ್ತ ಹೋಗುತ್ತದೆ. ಇಂದು ಬಂದಿರುವ ಅರ್ಜಿಗಳಲ್ಲಿ ಬಹುತೇಕ ಕಂದಾಯ, ಪೊಲೀಸ್ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುಟಿ ಇತ್ಯರ್ಥ ಸೇರಿದಂತೆ ವಸತಿ, ಉದ್ಯೋಗಕ್ಕೆ ಸಂಬಂಧಿಸಿದೆ ಎಂದಿದ್ದಾರೆ ಸಿಎಂ.
ಅರ್ಜಿಗಳ ಸಂಖ್ಯೆ ಎಷ್ಟು?
ಇಂದು 'ಜನತಾ ದರ್ಶನ' ಕಾರ್ಯಕ್ರಮದಲ್ಲಿ 3,500 ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಅರ್ಜಿ ಪರಿಶೀಲಿಸಿ ಕಾನೂನು ರೀತಿಯ ಪರಿಹಾರ ನೀಡಬೇಕು. ಸಾಧ್ಯವಾಗದಿದ್ರೆ ಕೂಡಲೇ ಹಿಂಬರಹ ನೀಡಬೇಕು. ತಳಹಂತದ ಅಧಿಕಾರಿಗಳು ಅರ್ಜಿ ಇತ್ಯರ್ಥಪಡಿಸಿದ್ದಾರಾ? ಇಲ್ವಾ? ಎಂಬ ಬಗ್ಗೆ ನನ್ನ ಕಚೇರಿಗೆ ಮಾಹಿತಿ ನೀಡ್ಬೇಕು ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಮೂಲಕ ಸೂಕ್ತವಾಗಿ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications