ಕದ್ದು ಮುಚ್ಚಿ ಲವ್ವಿಡವ್ವಿ ಮಾಡುತ್ತಿದ್ದ ಜೆಡಿಎಸ್- ಬಿಜೆಪಿ ಈಗ ಅಧಿಕೃತವಾಗಿ ಹಾರ ಬದಲಿಸಿಕೊಂಡಿವೆ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು, ಸೆಪ್ಟೆಂಬರ್ 23: ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರವೀಗ ಪರ-ವಿರೋಧದ ಚರ್ಚೆಗೆ ನಾಂಧಿ ಹಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ನೀತಿಗಳಿಗೆ ಜೆಡಿಎಸ್ನ ಸಮ್ಮತಿಯೂ ಇದೆಯೇ ಎಂದು ಪ್ರಶ್ನಿಸಿದೆ.
'ಕೇವಲ ಕುಟುಂಬದ ಹಿತಾಸಕ್ತಿಗಾಗಿ ಜಾತ್ಯಾತೀತತೆಯನ್ನು ವಿಸರ್ಜಿಸಿರುವ ಜೆಡಿಎಸ್ ತನ್ನ ಅಲ್ಪಸಂಖ್ಯಾತ ಮತದಾರರಿಗೆ ಏನೆಂದು ಉತ್ತರಿಸುತ್ತದೆ? ಬಿಜೆಪಿಯ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ನೀತಿಗಳಿಗೆ ಜೆಡಿಎಸ್ ಸಮ್ಮತಿಯೂ ಇದೆಯೇ?' ಎಂದು ಕಾಂಗ್ರೆಸ್ ಕೇಳಿದೆ.

'ಹಿಂದೆ ಜೆಡಿಎಸ್ ಪಕ್ಷದಲ್ಲೇ ಇದ್ದ ಸಂಸದ ಡ್ಯಾನಿಷ್ ಅಲಿ ಅವರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿದ ಬಿಜೆಪಿ ಸಂಸದನ ಮಾತನ್ನು ಜೆಡಿಎಸ್ ಕೂಡ ಅನುಮೋದಿಸುತ್ತದೆಯೇ? ಜಾತ್ಯಾತೀತ ಮತದಾರರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಯ್ತೆ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಜೆಡಿಎಸ್ ಬಿಜೆಪಿಯ ಬಿ ಟೀಮ್ ಆಗಿಯೇ ವರ್ತಿಸುತ್ತಿತ್ತು, ವಿರೋಧ ಪಕ್ಷವಾಗಿದ್ದರೂ ಬಿಜೆಪಿಯ ದುರಾಡಳಿತವನ್ನು ಪ್ರಶ್ನಿಸುವ, ವಿರೋಧಿಸುವ ಕೆಲಸ ಮಾಡಿರಲೇ ಇಲ್ಲ. ಕದ್ದು ಮುಚ್ಚಿ ಲವ್ವಿಡವ್ವಿ ಮಾಡುತ್ತಿದ್ದ ಜೆಡಿಎಸ್ ಹಾಗೂ ಬಿಜೆಪಿ ಈಗ ಅಧಿಕೃತವಾಗಿ ಹಾರ ಬದಲಿಸಿಕೊಂಡಿವೆ ಅಷ್ಟೇ. ಜೆಡಿಎಸ್ ನವರ ಕಣ್ಣೀರಿನಂತೆ ಅವರ ಜಾತ್ಯತೀತತೆಯ ಮುಖವಾಡವೂ ನಕಲಿ' ಎಂದು ಆರೋಪಿಸಿದೆ.
'ಈ ಮೈತ್ರಿ ಯಾರ 'ಸಂತೋಷ'ಕ್ಕೆ ಬಿಜೆಪಿ? ಬಿಜೆಪಿಯ ಅಗೋಚರ ಸರ್ವಾಧಿಕಾರಿ ಬಿಎಲ್ ಸಂತೋಷ್ ಅವರ ಮೇಲೆ ಹಿಗ್ಗಾಮುಗ್ಗಾ ಮಾತಿನ ದಾಳಿ ಮಾಡಿದ್ದ ಕುಮಾರಸ್ವಾಮಿಯವರನ್ನು ಬಿಜೆಪಿ ಕ್ಷಮಿಸಿಬಿಟ್ಟಿತೇ? ಅಥವಾ ಆಗ ಆಡಿದ್ದು ಕೇವಲ ನಾಟಕವೇ? ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿ ಈಗ ಅದೇ ಫ್ಯಾಮಿಲಿ ಪಾರ್ಟಿಯ ಮೊರೆ ಹೋಗಿದ್ದು ಯಾವ ನೈತಿಕತೆಯಲ್ಲಿ?' ಎಂದು ಪ್ರಶ್ನಿಸಿದೆ.
'ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತತೆಯನ್ನು ಕಿತ್ತು ಹಾಕಿದೆ. ಜೆಡಿಎಸ್ ತನ್ನ ಹೆಸರಿನಲ್ಲಿದ್ದ ಜಾತ್ಯಾತೀತತೆಯನ್ನು ಅನಧಿಕೃತವಾಗಿ ಕಿತ್ತು ಹಾಕಿದೆ. ಜೆಡಿಎಸ್ ನಲ್ಲಿನ ಅಲ್ಪಸಂಖ್ಯಾತ ಮುಖಂಡರು ಪಕ್ಷದ ಹೊಸಿಲಿನ ಹೊರಗೆ ಕಾಲಿಟ್ಟಿದ್ದಾರೆ, ಜೆಡಿಎಸ್ ಪಕ್ಷವನ್ನು ಮುಗಿಸಲೆಂದೇ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಕನಸು ನನಸಾಗುವ ಕಾಲ ಬಂದಿದೆ. ಕರ್ನಾಟಕದ ಪಾಲಿಗೆ ಇನ್ನು ಜಾತ್ಯಾತೀತ ತತ್ವದ ಜೆಡಿಎಸ್ ಮುಗಿದ ಅಧ್ಯಾಯ' ಎಂದು ಕಾಂಗ್ರೆಸ್ ಕಟುಕಿದೆ.
'ಜೆಡಿಎಸ್ ಪಕ್ಷಕ್ಕೆ ರಾಜ್ಯಾಧ್ಯಕ್ಷ ಅಂತ ಒಬ್ಬರಿದ್ದರು ಈ ಚಿತ್ರದಲ್ಲಿ ಅವರೆಲ್ಲಿದ್ದಾರೆ? ಪಕ್ಷದ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳುವುದಕ್ಕೆ ರಾಜ್ಯಾಧ್ಯಕ್ಷರ ಅಭಿಪ್ರಾಯ ಬೇಕಿಲ್ಲವೇ? ಅವರ ಉಪಸ್ಥಿತಿ ಬೇಕಿಲ್ಲವೇ? ರಾಜ್ಯಾಧ್ಯಕ್ಷ ಹುದ್ದೆ ಎನ್ನುವುದು ಕುಮಾರಸ್ವಾಮಿಯವರ ಕುಟುಂಬ ಕೈ ಒರೆಸಲು ಇಟ್ಟುಕೊಂಡಿರುವ ಟಿಶ್ಯೂ ಪೇಪರ್ ಮಾತ್ರವೇ? ವಿಮಾನದ ಟಿಕೆಟ್ ಬುಕ್ ಮಾಡಲೊಬ್ಬರು, ಹೋಟೆಲ್ ರೂಮ್ ಬುಕ್ ಮಾಡಲೊಬ್ಬರು ಹಾಗೂ ತಮ್ಮ ಪುತ್ರ ಜೊತೆಗಿದ್ದರೆ ಸಾಕೇ?' ಎಂದು ಕಾಂಗ್ರೆಸ್ ಕೇಳಿದೆ.












Click it and Unblock the Notifications