Kalyan Rajya Pragathi Paksha : ಜನಾರ್ದನ ರೆಡ್ಡಿ ಪಕ್ಷ ಘೋಷಣೆ; ಸಿಎಂ ಪ್ರತಿಕ್ರಿಯೆ
ಬೆಂಗಳೂರು, ಡಿಸೆಂಬರ್ 25; ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾನುವಾರ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. 2023ರ ಚುನಾವಣೆ ಹತ್ತಿರವಾಗುತ್ತಿರುವಾಗ 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟು ಹಾಕಿದೆ.
ಜನಾರ್ದನ ರೆಡ್ಡಿ ಡಿಸೆಂಬರ್ 25ರ ಭಾನುವಾರ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳು ಬಸವರಾಜ ಬೊಮ್ಮಾಯಿಗೆ ಈ ಕುರಿತು ಪ್ರಶ್ನೆ ಮಾಡಿವೆ. ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ ಎಂದಾಗ, "ಮಾಡಲಿ ಅದರ ಬಗ್ಗೆ ನೋ ಕಮೆಂಟ್" ಎಂದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ" ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಮಾಜಿ ಸಚಿವ ಜನಾರ್ದನ ರೆಡ್ಡಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆಯನ್ನು ಕೂಡಾ ಮಾಡಿದ್ದಾರೆ. ಕಳೆದ ವಾರ ಹೊಸ ಮನೆ ಗೃಹ ಪ್ರವೇಶ ನಡೆದಿತ್ತು.
ಬಳ್ಳಾರಿ ಜನಾರ್ದನ ರೆಡ್ಡಿ ಅವರ ತವರು ಜಿಲ್ಲೆಯ. ಆದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ನೀಡುವಾಗ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಷರತ್ತು ಹಾಕಿದೆ. ಆದ್ದರಿಂದ ಜನಾರ್ದನ ರೆಡ್ಡಿ ಬಳ್ಳಾರಿ ಪಕ್ಕದ ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ. ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆ ಇದೆ.
ಹೊಸ ಮನೆ ಗೃಹ ಪ್ರವೇಶದ ಬಳಿಕ ಫೇಸ್ಬುಕ್ ಪೋಸ್ಟ್ ಹಾಕಿದ್ದ ಅವರು, "ನಾನು ಬಳ್ಳಾರಿಗೆ ಆಗಮಿಸಲು ಆಗದ ಕಾರಣ ಸಾರ್ವಜನಿಕ ಬದುಕಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು, ಇಂದು ಗಂಗಾವತಿಯಲ್ಲಿ ನನ್ನ ಹೊಸ ನಿವಾಸದ ಗೃಹಪ್ರವೇಶದ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನನ್ನ ಹುಟ್ಟೂರು ಬಳ್ಳಾರಿಗೆ ಹತ್ತಿರದಲ್ಲಿರುವ ಗಂಗವತಿಯಲ್ಲಿ ನನ್ನ ಹೊಸ ನಿವಾಸದ ಗೃಹಪ್ರವೇಶವು ಗೋಪೂಜೆ, ದೇವತಾ ಪೂಜೆ, ರುದ್ರಾಭಿಷೇಕ, ಶಿವಪಂಚಾಕ್ಷರಿ ಪೂಜೆ, ಹೋಮ, ಮಂತ್ರಗಳ ಮೂಲಕ ಶಾಸ್ತ್ರೋಕ್ತವಾಗಿ ಸರಳವಾಗಿ ನೆರವೇರಿತು" ಎಂದು ಹೇಳಿದ್ದರು.
ಒಂದು ವಾರದಿಂದ ವಿವಿಧ ದೇವಾಲಯ, ಮಠಗಳಿಗೆ ಜನಾರ್ದನ ರೆಡ್ಡಿ ಭೇಟಿ ನೀಡುತ್ತಿದ್ದರು. ಗಂಗಾವತಿ ಪಟ್ಟಣದ ಚೆನ್ನ ಬಸವತಾತನವರ ಮಠಕ್ಕೆ ಭೇಟಿ ನೀಡಿ, ಸ್ವಾಮಿಗಳ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಗದ್ದುಗೆಯ ಬಳಿ ಕೆಲ ಸಮಯ ಧ್ಯಾನವನ್ನು ಮಾಡಿದ್ದರು.
ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಿಯ ಸನ್ನಿಧಿಯಲ್ಲಿ ತಾಯಿಗೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದರು. ಗದಗದ ಶ್ರೀ ಪುಟ್ಟರಾಜ ಗವಾಯಿಗಳ ಮಠ ಹಾಗೂ ಶ್ರೀ ತೋಂಟದಾರ್ಯ ಸಂಸ್ಥಾನಮಠಕ್ಕೆ ಭೇಟಿ ಕೊಟ್ಟಿದ್ದರು.
ಹುಬ್ಬಳ್ಳಿಯ ಸಿದ್ಧಾರೂಡ ಮಠದಕ್ಕೆ ಭೇಟಿ ನೀಡಿದ್ದರು. ತುಮಕೂರಿನ ಪ್ರಸಿದ್ಧ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ ದರ್ಶನ ಪಡೆದು ಧ್ಯಾನ ಮಾಡಿದ್ದರು. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದಿದ್ದರು.












Click it and Unblock the Notifications