ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

ಬೆಂಗಳೂರು, ಅಕ್ಟೋಬರ್ 18: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 409ರ ಅಡಿ ಜನಾರ್ದನ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ ಕೊಂಚ ನಿರಾಳರಾಗಿದ್ದ ಜನಾರ್ದನ ರೆಡ್ಡಿ ಮತ್ತೆ ತೊಂದರೆಗೆ ಸಿಲುಕಿದ್ದಾರೆ.

ಐಪಿಸಿ ಸೆಕ್ಷನ್ 409 ಕ್ರಿಮಿನಲ್ ವಿಶ್ವಾಸದ್ರೋಹ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಇದರ ಅಡಿಯಲ್ಲಿ ವಿಚಾರಣೆ ನಡೆದು ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿದೆ. ಈ ಸೆಕ್ಷನ್ ಅಡಿ ಜನಾರ್ದನ ರೆಡ್ಡಿ ಅವರ ವಿಚಾರಣೆ ನಡೆಸುವಂತೆ ಸಿಬಿಐ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹೀಗಾಗಿ ವಿಚಾರಣೆ ಬಳಿಕ ಇತರೆ ಸೆಕ್ಷನ್‌ಗಳಲ್ಲದೆ ಸೆಕ್ಷನ್ 409ರ ಅಡಿ ಜನಾರ್ದನ ರೆಡ್ಡಿ ಅವರು ತಪ್ಪಿತಸ್ಥರು ಎಂದು ಸಾಬೀತಾದರೆ ಅವರು ದೊಡ್ಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಶುಕ್ರವಾರ ಆದೇಶ ಪ್ರಕಟಿಸಿದ ನ್ಯಾ. ಬಿಎ ಪಾಟೀಲ ಅವರ ಏಕಸದಸ್ಯ ನ್ಯಾಯಪೀಠ, ಸೆಕ್ಷನ್ 409ಅನ್ನು ವಿಚಾರಣೆ ವೇಳೆ ಪರಿಗಣಿಸುವಂತೆ ಸೂಚಿಸಿತು.

ಹೈಕೋರ್ಟ್‌ಗೆ ಹೋಗಿದ್ದ ಸಿಬಿಐ

ಹೈಕೋರ್ಟ್‌ಗೆ ಹೋಗಿದ್ದ ಸಿಬಿಐ

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, 2013ರಲ್ಲಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಐಪಿಸಿ ಸೆಕ್ಷನ್ 409ರ ಅಡಿ ಕೂಡ ಆರೋಪ ದಾಖಲಿಸಿತ್ತು. ಅದರಿಂದ ತಮಗೆ ವಿನಾಯಿತಿ ನೀಡಬೇಕೆಂದು ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯವು 2018ರ ಸೆ. 18ರಂದು ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.

ಆರೋಪದಲ್ಲಿ ಬದಲಾವಣೆ ಮಾಡುವಂತಿಲ್ಲ

ಆರೋಪದಲ್ಲಿ ಬದಲಾವಣೆ ಮಾಡುವಂತಿಲ್ಲ

ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ಶುರುವಾಗಿ, ಸಾಕ್ಷಿಗಳ ವಿಚಾರಣೆ ಕೂಡ ನಡೆಯುತ್ತಿರುವ ಹಂತದಲ್ಲಿ ಆರೋಪಗಳಲ್ಲಿ ಬದಲಾವಣೆ ಮಾಡಲು ಅಥವಾ ಸೇರಿಸಲು ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಹಾಗಾಗಿ ಈ ತೀರ್ಪು ಕಾನೂನುಬಾಹಿರ ಎಂದು ಸಿಬಿಐ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದರು.

ಆರೋಪಪಟ್ಟಿಯಲ್ಲಿ ಸೆಕ್ಷನ್ ದಾಖಲು

ಆರೋಪಪಟ್ಟಿಯಲ್ಲಿ ಸೆಕ್ಷನ್ ದಾಖಲು

ರೆಡ್ಡಿ ವಿರುದ್ಧದ ಆರೋಪ ಪಟ್ಟಿಯಲ್ಲಿ ಸೆಕ್ಷನ್ 409ರ ಅಡಿಯಲ್ಲಿ ವಿಶ್ವಾಸದ್ರೋಹದ ಪ್ರಕರಣವನ್ನು ಕೂಡ ದಾಖಲಿಸಲಾಗಿತ್ತು. ಇದನ್ನು ಕೈಬಿಟ್ಟ ಅಧೀನ ನ್ಯಾಯಾಲಯದ ಆದೇಶಕ್ಕೆ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ತಡೆ ನೀಡಿತ್ತು. ಸೆಪ್ಟೆಂಬರ್‌ನಲ್ಲಿ ತಡೆ ನೀಡಿದ್ದ ಸಂದರ್ಭದಲ್ಲಿಯೇ ಏಕಸದಸ್ಯ ಪೀಠವು ಐಪಿಸಿ ಸೆಕ್ಷನ್ 409 ಸೇರಿದಂತೆ ಆರೋಪಿಗಳ ವಿರುದ್ಧ ದಾಖಲಾದ ಮೂಲ ಪ್ರಕರಣದ ವಿಚಾರಣೆ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

ಆರೋಪ ಸಾಬೀತಾದರೆ....

ಆರೋಪ ಸಾಬೀತಾದರೆ....

ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಆರಂಭವಾಗಲಿದ್ದು, ಜನಾರ್ದನ ರೆಡ್ಡಿ ಅವರ ವಿರುದ್ಧದ ಈ ಆರೋಪ ಸಾಬೀತಾಗದೆ ಇದ್ದರೆ ಮಾತ್ರ ಅವರಿಗೆ ಕೊಂಚ ನಿರಾಳತೆ ಸಿಗಲಿದೆ. ಉಳಿದ ಸೆಕ್ಷನ್‌ಗಳ ಅಡಿ ದಾಖಲಾದ ಆರೋಪಗಳಿಂದ ಗಂಭೀರ ಶಿಕ್ಷೆ ವಿಧಿಸಲಾಗುವುದಿಲ್ಲ. ಒಂದು ವೇಳೆ ಈ ಸೆಕ್ಷನ್ ಅಡಿ ಅವರ ಮೇಲಿನ ಆರೋಪ ಸಾಬೀತಾದರೆ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಬೇಲೆಕೇರಿ ಬಂದರು ಪ್ರಕರಣ

ಬೇಲೆಕೇರಿ ಬಂದರು ಪ್ರಕರಣ

2009ರ ಜನವರಿ 1ರಿಂದ 2010ರ ಮೇ 31ರ ಅವಧಿಯಲ್ಲಿ ಮೆಸರ್ಸ್ ಡ್ರೀಮ್ ಲಾಜಿಸ್ಟಿಕ್ ಕಂಪೆನಿಯು ಬೇಲೆಕೇರಿ ಬಂದರು ಮೂಲಕ 9.16 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಅನ್ವಯ ಸಿಬಿಐ, ಜನಾರ್ದನ ರೆಡ್ಡಿ ಮತ್ತು ಇತರರ ವಿರುದ್ಧ 2012ರ ಸೆ. 13ರಂದು ಎಫ್‌ಐಆರ ದಾಖಲಿಸಿ ತನಿಖೆ ನಡೆಸಿತ್ತು. 2013ರಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+