Jan Ki Baat Suvarna News Survey: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಅಲೆಗೆ ಕೊಚ್ಚಿಹೋದ ವಿಪಕ್ಷಗಳು!
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಜನ್ ಕೀ ಬಾತ್ ಮತ್ತು ಸುವರ್ಣನ್ಯೂಸ್ ಮಹಾ ಸಮೀಕ್ಷೆ ಹೊರಬಿದ್ದಿದೆ. ಈ ಸಮೀಕ್ಷೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸರಳ ಬಹುಮತ ದೊರೆಯಲಿದೆ ಎಂದು ತಿಳಿಸಿದೆ.
ಅಧಿಕಾರದ ಗದ್ದುಗೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ.

ಇದೀಗ ಮತದಾನಕ್ಕೆ ಕೆಲವೇ ದಿನಗಳ ಮುನ್ನ ಜನ್ ಕೀ ಬಾತ್-ಸುವರ್ಣನ್ಯೂಸ್ನ 2ನೇ ಹಂತದ ಮಹಾ ಸಮೀಕ್ಷೆ ಹೊರಬಂದಿದ್ದು, ಆಡಳಿತರೂಢ ಬಿಜೆಪಿ ಕರ್ನಾಟಕದಲ್ಲಿ ಮೊದಲ ಬಾರಿ ತನ್ನ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.
ಒಂದು ವೇಳೆ ಸರಳ ಬಹುಮತ ಪಡೆಯದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದೇ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಜನ್ ಕೀ ಬಾತ್ ಸಮೀಕ್ಷೆಯ ಮೊದಲ ಹಂತದಲ್ಲಿ ಬಿಜೆಪಿಗೆ 98ರಿಂದ 109 ಸ್ಥಾನಗಳು ಬರಲಿವೆ ಎಂದು ಹೇಳಿತ್ತು.

ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಅಲೆ
ಕಿತ್ತೂರು ಕರ್ನಾಟಕದ ಜಿಲ್ಲೆಗಳಾದ ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಬಿಜೆಪಿ ಅಲೆಗೆ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೊಚ್ಚಿಹೋಗಲಿವೆ ಎಂದು ಹೇಳಲಾಗಿದೆ.
ಆರು ಜಿಲ್ಲೆಗಳ ಒಟ್ಟು 50 ಸ್ಥಾನಗಳಲ್ಲಿ ಆಡಳಿತರೂಢ ಬಿಜೆಪಿ 31 ಸ್ಥಾನಗಳಲ್ಲಿ ಗೆದ್ದು ಬೀಗಲಿದೆ ಎಂದು ತಿಳಿಸಿದ್ದು, ವಿಪಕ್ಷ ಕಾಂಗ್ರೆಸ್ 18 ಸ್ಥಾನಗಳಿಗೆ ತೃಪ್ತಿ ಪಡಲಿದೆ. ಇನ್ನು ಜೆಡಿಎಸ್ ಕೇವಲ 1 ಸ್ಥಾನದಲ್ಲಿ ಜಯ ಗಳಿಸಲಿದೆ ಎಂದು ಜನ್ ಕೀ ಬಾತ್ ಸುವರ್ಣನ್ಯೂಸ್ ಮಹಾ ಸಮೀಕ್ಷೆ ಹೇಳಿದೆ.

ಬಿಜೆಪಿಗೆ 100ರಿಂದ 114 ಸ್ಥಾನ
ಜನ್ ಕೀ ಬಾತ್ ಸುವರ್ಣನ್ಯೂಸ್ ಮಹಾ ಸಮೀಕ್ಷೆಯ 2ನೇ ಹಂತದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಪಕ್ಷ 100ರಿಂದ 114 ಸ್ಥಾನಗಳಲ್ಲಿ ಗೆಲುವು ಬಾರಿಸಲಿದೆ ಎಂದು ಭವಿಷ್ಯ ನುಡಿದಿದೆ. ಕರ್ನಾಟಕದಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು 113 ಸ್ಥಾನಗಳನ್ನು ಗೆಲ್ಲಬೇಕಿದೆ. ಹೀಗಾಗಿ ಬಿಜೆಪಿ 114 ಸ್ಥಾನಗಳನ್ನು ಪಡೆಯಲಿದ್ದು, ಸರಳ ಬಹುಮತದಿಂದ ಏಕಾಂಗಿಯಾಗಿ ಸರ್ಕಾರ ರಚಿಸಲಿದೆ.
ಇನ್ನು ಈ ಬಾರಿ ಅಧಿಕಾರಕ್ಕೇರುವ ಆಸೆಯಲ್ಲಿದ್ದ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರ ಸೇರಿದಂತೆ ಇನ್ನಿತರ ವಿಷಯಗಳ ಮೇಲೆ ಆರೋಪ ಮಾಡುತ್ತಿದ್ದ ವಿಪಕ್ಷ ಕಾಂಗ್ರೆಸ್ 86ರಿಂದ 98 ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಜನ್ ಕೀ ಬಾತ್ ಸುವರ್ಣನ್ಯೂಸ್ ಮಹಾ ಸಮೀಕ್ಷೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಭದ್ರಕೋಟೆ ನಿರ್ಮಿಸಿಕೊಂಡಿದ್ದ ಜೆಡಿಎಸ್ ಪಕ್ಷ 20ರಿಂದ 26 ಸ್ಥಾನಗಳಲ್ಲಿ ಜಯ ಗಳಿಸಲಿದ್ದರೆ, ಪಕ್ಷೇತರ ಅಭ್ಯರ್ಥಿಗಳು ಗರಿಷ್ಠ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿದೆ.
ಜನ್ ಕೀ ಬಾತ್ ಸುವರ್ಣನ್ಯೂಸ್ ಮಹಾ ಸಮೀಕ್ಷೆ: ಇತರೆ ಪ್ರದೇಶವಾರು ಸಮೀಕ್ಷೆ ವಿವರ
ಹಳೆ ಮೈಸೂರು ವಿಭಾಗ: ಒಟ್ಟು 57 ಕ್ಷೇತ್ರಗಳಲ್ಲಿ ಕಾಂಗ್ರೆಸ್ 26 ಸ್ಥಾನಗಳಲ್ಲಿ ಗೆಲುವು ಗಳಿಸಲಿದ್ದರೆ, ಜೆಡಿಎಸ್ 17 ಸ್ಥಾನಗಳನ್ನು ಪಡೆಯಲಿದೆ. ಇನ್ನು ಆಡಳಿತರೂಢ ಬಿಜೆಪಿ ಪಕ್ಷ 14 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಿದೆ.
ಕಲ್ಯಾಣ ಕರ್ನಾಟಕ: ಒಟ್ಟು 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ 21 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದರೆ, ಬಿಜೆಪಿ ಪಕ್ಷ 16 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲಿದೆ. ಇನ್ನು ಜೆಡಿಎಸ್ ಪಕ್ಷಕ್ಕೆ 3 ಸ್ಥಾನಗಳು ದೊರಕಲಿವೆ.
ಮಧ್ಯ ಕರ್ನಾಟಕ: ಒಟ್ಟು 26 ಸ್ಥಾನಗಳಲ್ಲಿ ಬಿಜೆಪಿ 13 ಸ್ಥಾನಗಳನ್ನು ಪಡೆಯಲಿದ್ದರೆ, ವಿಪಕ್ಷ ಕಾಂಗ್ರೆಸ್ 11 ಸ್ಥಾನ ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಕಾಣಲಿದೆ.
ಗ್ರೇಟರ್ ಬೆಂಗಳೂರು: ಒಟ್ಟು 32 ಸ್ಥಾನಗಳಲ್ಲಿ ಬಿಜೆಪಿ ಬಿಜೆಪಿ 15 ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನು ಜೆಡಿಎಸ್ 3 ಸ್ಥಾನಗಳನ್ನು ಪಡೆದುಕೊಳ್ಳಲಿದೆ.












Click it and Unblock the Notifications