ಶಾಮನೂರು ಕುಟುಂಬದ ಮೂಲಕವೇ ಜಗದೀಶ್ ಶೆಟ್ಟರ್ಗೆ ಕಾಂಗ್ರೆಸ್ ಗಾಳ: ಮಹತ್ವದ ಕಾರಣ ತಿಳಿಯಿರಿ
ಬೆಂಗಳೂರು, ಏಪ್ರಿಲ್ 17: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ ( Karnataka Elections 2023 ) ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಎರಡು ದಿನಗಳ ಹಿಂದೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ( Laxman Savadi ) ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಇಂದು ( ಸೋಮವಾರ ) ಬೆಳಿಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ( Jagadish Shettar ) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಆರು ಬಾರಿ ಶಾಸಕರಾಗಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿರುವ ಶೆಟ್ಟರ್ ಕಾಂಗ್ರೆಸ್ ಕೈ ಹಿಡಿದರು.

ಭಾನುವಾರ ಸಂಜೆ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ರಣದೀಪ್ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸಿ ತಮ್ಮ ಷರತ್ತುಗಳನ್ನು ಶೆಟ್ಟರ್ ವಿವರಿಸಿದ್ದಾರೆ. ಷರಿತ್ತಿನ ಪ್ರಕಾರ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತವಾಗಿದೆ.
ಇದೇ ವೇಳೆ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷವು ತನಗೆ ಅವಮಾನ ಮಾಡಿದೆ ಮತ್ತು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕರು ನನಗೆ ಅವಮಾನ ಮಾಡಿದ್ದಾರೆ. ನನ್ನನ್ನು ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಕೆಲವು ನಾಯಕರು ಬಿಜೆಪಿ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಇದು ನನಗೆ ನೋವು ತಂದಿದೆ ಎಂದೂ ವಾಗ್ದಾಳಿ ನಡೆಸಿದ್ದಾರೆ.

ಶಾಮನೂರು ಕುಟುಂಬದ ಮೂಲಕ ಶೆಟ್ಟರ್ಗೆ ಗಾಳ
ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕಾಂಗ್ರೆಸ್ ಅಲರ್ಟ್ ಆಗಿತ್ತು. ಶೆಟ್ಟರ್ ಅವರನ್ನು ಕಾಂಗ್ರೆಸ್ ಕರೆತರುವ ಪ್ರಯತ್ನಗಳನ್ನು ಕಾಂಗ್ರೆಸ್ ಗುಟ್ಟಾಗಿ ನಡೆಸಿತ್ತು ಎಂದು ತಿಳಿದುಬಂದಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೂಲಕ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಸಂಪರ್ಕಿಸಿತ್ತು. ದಾವಣಗೆರೆ ದಕ್ಷಿಣ ಶಾಸಕರಾಗಿರುವ ಶಿವಶಂಕರಪ್ಪ ಅವರ ಹಿರಿಯ ಪುತ್ರ ಗಣೇಶ್ ಅವರಿಂದ ಶೆಟ್ಟರ್ಗೆ ಕರೆ ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಶಾಮನೂರು- ಶೆಟ್ಟರ್ ಕುಟುಂಬದ ನಂಟು
ಶಾಮನೂರು ಕುಟುಂಬದ ಮೂಲಕ ಶೆಟ್ಟರ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಕಾಂಗ್ರೆಸ್ ನಾಯಕತ್ವ ಯಶಸ್ವಿಯಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಎರಡನೇ ಪುತ್ರ ಗಣೇಶ್ ಅವರ ಮಗಳು ಅಂಚನಾ ಶಾಮನೂರು ಮತ್ತು ಜಗದೀಶ್ ಶೆಟ್ಟರ್ ಅವರ ಮೊದಲನೇ ಪುತ್ರ ಪ್ರಶಾಂತ್ ಶೆಟ್ಟರ್ 2014ರಲ್ಲಿ ಮದುವೆಯಾದರು. ಈ ಹತ್ತಿರದ ನೆಂಟಸ್ತಿಕೆಯನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರು ಶಾಮನೂರು ಕುಟುಂಬದ ಮೂಲಕ ಶೆಟ್ಟರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ.
ಶೆಟ್ಟರ್ ಕೈ ಸೇರ್ಪಡೆ ಬಗ್ಗೆ ಸಿಎಂ ಪ್ರತಿಕ್ರಿಯೆ
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, 'ಜಗದೀಶ್ ಶೆಟ್ಟರ್ ಹಿರಿಯ ನಾಯಕರಾಗಿದ್ದು, ಪಕ್ಷ ತೊರೆಯುವುದರಿಂದ ಪರಿಣಾಮ ಬೀರಲಿದೆ. ನವದೆಹಲಿಯಲ್ಲಿ ಪ್ರಮುಖ ಸ್ಥಾನ ಮತ್ತು ಅವರ ಕುಟುಂಬದ ಸದಸ್ಯರಿಗೆ ವಿಧಾನಸಭೆ ಟಿಕೆಟ್ ನೀಡುವ ಮೂಲಕ ನಾವು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದೇವೆ. ಆದರೆ ಶೆಟ್ಟರ್ ಅವರು ತಮ್ಮ ವಿಧಾನಸಭೆ ಟಿಕೆಟ್ ಬಗ್ಗೆ ತುಂಬಾ ಪಟ್ಟು ಹಿಡಿದಿದ್ದರು ಮತ್ತು ನಮ್ಮ ಷರತ್ತುಗಳನ್ನು ಒಪ್ಪಲಿಲ್ಲ. ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಅವರ ಪ್ರಭಾವವನ್ನು ನಾವು ಮೀರಿ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ.












Click it and Unblock the Notifications