Jagadish Shettar Joins Congress: ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲರಾದ ಜಗದೀಶ್ ಶೆಟ್ಟರ್
ಬೆಂಗಳೂರು ಏಪ್ರಿಲ್ 17: ಬಿಜೆಪಿ ತೊರೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದರು. ಇಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷಾಂತರಗೊಂಡಿದ್ದಾರೆ. ಈ ವೇಳೆ ಕೆಸಿ ವೇಣುಗೋಪಾಲ್, ಡಿಕೆ ಶಿವಕುಮಾರ್ ಭಾಗಿಯಾಗಿದ್ದರು.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, 'ನಾನು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಹಿರಿಯ ನಾಯಕನಾಗಿ ನನಗೆ ಆದ ಬೇಸರವನ್ನು ಬಿಜೆಪಿಯಲ್ಲಿ ಯಾರೂ ಅರ್ಥ ಮಾಡಿಕೊಂಡಿಲ್ಲ. ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದವನು ನಾನು. ಉತ್ತರ ಕರ್ನಾಟಕದಲ್ಲಿ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ' ಎಂದರು.

'ನಾನು ಒಪ್ಪಿಕೊಳ್ಳುತ್ತೇನೆ. ಭಾರತೀಯ ಜನತಾ ಪಕ್ಷ ಎಲ್ಲಾ ಸ್ಥಾನಮಾನ ಕೊಟ್ಟಿದೆ. ಆದರೆ ಅದು ಕೊಟ್ಟ ಸ್ಥಾನ ಮಾನಕ್ಕೆ ತಕ್ಕಂತೆ ನಾನು ಕೆಲಸ ಮಾಡಿದ್ದೇನೆ. ಆರು ಬಾರಿ ನಾನು ಹುಬ್ಬಳ್ಳಿ ಜನರ ಆಶೀರ್ವಾ ಪಡೆದಿದ್ದೇನೆ. ಇದು ಏಳನೇ ಬಾರಿ ನಾನು ಸ್ಪರ್ಧೆ ಮಾಡಬೇಕಿತ್ತು. ಆದರೆ ಟಿಕೆಟ್ ನೀಡಲಿಲ್ಲ' ಎಂದು ಬೇಸರಗೊಂಡರು.
'ಒಬ್ಬ ಹಿರಿಯ ನಾಯಕರಿಗೆ ನೀಡಬೇಕಾದ ಗೌರವ ಅಲ್ಲಿ ನನಗೆ ಸಿಗಲಿಲ್ಲ. ನಿಮಗೆ ಉನ್ನತ ಸ್ಥಾನವನ್ನು ನೀಡುತ್ತೇವೆ ಎಂದು ಪಕ್ಷದ ಹಿರಿಯ ನಾಯಕರು ಯಾರೂ ಕೂಡ ನನಗೆ ಹೇಳಿಲ್ಲ. ಈ ಮಾತನ್ನು ಒಂದು ವಾರಕ್ಕೆ ಮುಂಚೆ ಹೇಳಬೇಕಿತ್ತು. ಆದರೆ ಯಾರೂ ಕೂಡ ಹೇಳಲಿಲ್ಲ. ನಾನು ಸಂಘ ಪರಿವಾರದಿಂದ ಬಂದ ವ್ಯಕ್ತಿ. ಈ ರೀತಿ ಹಿನ್ನೆಲೆ ಒಂದಿರುವ ವ್ಯಕ್ತಿಯಿಂದ ಪಕ್ಷ ಕಡೆಗಣಿಸಿದ್ದು ಬೇಸರವಾಗಿದೆ' ಎಂದರು.
'ಒಬ್ಬ ಚಿಕ್ಕ ಬಾಲಕನಿಗೆ ಹೇಳೋ ರೀತಿಯಲ್ಲಿ ನಮಗೆ ಟಿಕೆಟ್ ಇಲ್ಲ ಎಂದು ಪಕ್ಷ ಹೇಳಿದೆ. ಹಿರಿಯ ನಾಯಕರು ನಡೆದುಕೊಂಡ ರೀತಿ ನನಗೆ ಬೇಸರವಾಗಿದೆ' ಎಂದರು. 'ಪಕ್ಷ ಮುಖ್ಯ ವ್ಯಕ್ತ ಮುಖ್ಯವಲ್ಲ ಎಂದು ಪಕ್ಷವನ್ನು ನಾವು ಕಟ್ಟಿದೆವು. ಆದರೆ ಇದು ಬಿಜೆಪಿಯಲ್ಲಿ ಉಲ್ಟಾ ಆಗಿದೆ. ಹೀಗಾಗಿ ನಾನು ಸಂತೃಪ್ತ ಮನಸ್ಸಿನಿಂದ ಕಾಂಗ್ರೆಸ್ ಸೇರಿದ್ದೇನೆ' ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, 'ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಪಕ್ಷದ ನೀತಿಯನ್ನು ಒಪ್ಪಿಕೊಂಡು ಬರುತ್ತಿದ್ದಾರೆ. ಶೆಟ್ಟರ್ ಬಿಜೆಪಿ ಪಕ್ಷ ಕಟ್ಟಿ ಬೆಳಸಿದವರು. ಶೆಟ್ಟರ್ ಜೊತೆಗೆ ಹಲವಾರು ನಾಯಕರು ಬರುತ್ತಿದ್ದಾರೆ. ಜಗದೀಶ್ ಶೆಟ್ಟರ್ ಉತ್ತಮ ನಾಯಕ. ಅವರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡುತ್ತಿದ್ದೇನೆ' ಎಂದರು.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟಂತಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾನುವಾರ ತಮ್ಮ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ಶಿರಸಿ- ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ನೀಡಿದರು.
ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಪರ್ವ ಶುರುವಾಗಿದೆ. ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅವರು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಬೇರೆಯವರಿಗೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ 67 ವರ್ಷದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ಆಡಳಿತ ಒಪ್ಪಿಗೆ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಇದನ್ನು ಒಪ್ಪದ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶೆಟ್ಟರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿಗೂ ಗುಡ್ ಬೈ ಹೇಳಿದ್ದಾರೆ.












Click it and Unblock the Notifications