'ಡಿ ಕೆ ಶಿವಕುಮಾರ್ ಹೆಣ್ಣು ಮಗಳನ್ನು ಕಿಡ್ನಾಪ್ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ'
ಬೆಂಗಳೂರು, ಏಪ್ರಿಲ್ 17: ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದು, ಸದ್ಯ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ವಾಕ್ ಸಮರ ಜೋರಾಗಿದ್ದು, ಇದೀಗ ಡಿ ಕೆ ಶಿವಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹೆಣ್ಣುಮಕ್ಕಳನ್ನು ಅಪಹರಿಸಿ (ಕಿಡ್ನಾಪ್) ಅವರ ಅಪ್ಪ-ಅಮ್ಮನಿಂದ ಜಮೀನು ಲಪಟಾಯಿಸಿರುವುದು ನಿಜ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಹೆಣ್ಣು ಮಗಳ ಆಯಾ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದ್ದ ಜಮೀನು ಬರೆಸಿಕೊಳ್ಳಲು ನೀವು ಏನೆಲ್ಲಾ ಮಾಡಿದರಿ ಎನ್ನುವ ಮಾಹಿತಿಯೂ ನನ್ನ ಬಳಿ ಇದೆ. ಭೂಮಿ ಖರೀದಿ ಮಾಡುತ್ತೇವೆ ಚೆಕ್ ಕೊಟ್ಟಿದ್ದೀರಿ. ಆಮೇಲೆ ನೀವು ಕೊಟ್ಟ ಚೆಕ್ ನಗದು ಆಗಿಲ್ಲ. ಚೆಕ್ ಡಿಸ್ ಆನರ್ ಮಾಡಿರುವ ದಾಖಲೆ ಇದೆ.
ಎಲ್ಲ ಇಟ್ಟಿದ್ದೇನೆ ಎಂದರು. ಸೋಮವಾರದ ದಿನ ಮೊದಲ ಬಾರಿಗೆ ಈ ವಿಷಯವನ್ನು ಹೇಳಿದ್ದೇನೆ. ಅವರು ನನ್ನನ್ನು ಚರ್ಚೆಗೆ ಕರೆದಿದ್ದಾರೆ. ದಯಮಾಡಿ ಬನ್ನಿ ಚರ್ಚೆಗೆ, ನಾನೂ ಸಿದ್ದನಿದ್ದೇನೆ. ನಿಮ್ಮ ಬಗ್ಗೆ ಕಂತೆಗಟ್ಟಲೇ ದಾಖಲೆ ಇಟ್ಟಿದ್ದೇನೆ ಎಂದು ಸವಾಲು ಹಾಕಿದರು.
ನಿಮ್ಮ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು. ದಾಖಲೆಗಳು ಬೇಕಾದಷ್ಟಿವೆ. ಈಗ ಶಾಂತಿನಗರ ಹೌಸಿಂಗ್ ಸೊಸೈಟಿ ವಿಷಯಕ್ಕೆ ಬನ್ನಿ. ಒರಿಜಿನಲ್ ಸೊಸೈಟಿಯನ್ನೇ ಡೂಪ್ಲಿಕೇಟ್ ಮಾಡಿ, ಡೂಪ್ಲಿಕೇಟ್ ಸೊಸೈಟಿಯನ್ನೇ ಒರಿಜಿನಲ್ ಮಾಡಿಕೊಳ್ಳಲಿಲ್ವಾ.? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನ ಮೂಲಕ ಕೊಂಡುಕೊಂಡು ಯಾವಾಗ ಏನು ಬೇಕಾದರೂ ಏನು ಬೇಕಾದರೂ ಮಾಡುವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

ಒಕ್ಕಲಿಗ ನಾಯಕತ್ವದ ತೆಗೆದುಕೊಳ್ಳೋದಕ್ಕೆ ಕುಮಾರಸ್ವಾಮಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಡಿಕೆಶಿ ಟೀಕಿಸಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು; ನಾನು ಒಕ್ಕಲಿಗ ನಾಯಕತ್ವ ತೆಗೋತಿನಿ ಎಂದು ಹೇಳಿದ್ದೀನಾ..? ನಾನು ರಾಜಕಾರಣದಲ್ಲಿ ನನ್ನ ಕೈಲಾದ ಮಟ್ಟಿಗೆ ಜಾತಿಯನ್ನು ಮೀರಿ ಜನರ ಸೇವೆ ಮಾಡುತ್ತಿದ್ದೇನೆ. ರಾಜ್ಯದ ನಾನಾ ಕಡೆಗಳಿಂದ ಜನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ. ನನ್ನ ಕೈಲಾಗುವಷ್ಟನ್ನೇ ಮಾಡುತ್ತಿದ್ದೇನೆ ಎಂದರು.
ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆ ಎಂದು ಡಿಕೆಶಿ ಮಾಡಿರುವ ಟೀಕೆಗೆ ಕುರಿತು ಮಾತನಾಡಿ, ಅವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ದೊಡ್ಡಾಲಹಳ್ಳಿಯಲ್ಲಿ ಹುಟ್ಟುವಾಗ ಸತ್ಯ ಹರಿಶ್ಚಂದ್ರ ಬಂದು, ʼನೀನು ಸತ್ಯನೇ ನುಡಿಬೇಕುʼ ಎಂದು ಹೇಳಿ ಹೋಗಿದ್ದಾರೆ. ನಮಗೆ ಸುಳ್ಳು ಹೇಳಿ ಎಂದು ಹೇಳಿದ್ದಾರೆ ಎಂದು ತಿರುಗೇಟು ಕೊಟ್ಟರು. ನನ್ನ ಹೇಳಿಕೆ ಬಗ್ಗೆ ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿರುವ ಶಿವಕುಮಾರ್ ತನ್ನ ಹೆತ್ತ ತಾಯಿಯನ್ನೇ ಅಪಮಾನಿಸಿದ್ದಾರೆ. ಖಾಸಗಿ ವಾಹನಿಯೊಂದರಲ್ಲಿ ಮಾತನಾಡಿರುವ ಅವರು, ಹೆತ್ತ ತಾಯಿಯ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ನೋಡಿ.. ಆ ಮಹಾನುಭಾವ. ಅವರಿಗೆ ಸಲಹೆ ಬೇರೆ ಕೊಡುತ್ತಾರೆ ಎಂದು ಕಟುವಾಗಿ ಟೀಕಿಸಿದರು.
ಪ್ರತೀ ಕುಟುಂಬದಲ್ಲಿ ಹೆತ್ತ ತಾಯಿ, ಹೆಂಡತಿ, ಮಗಳ ಮೇಲೆ ಹೇಗೆ ಕಣ್ಣಿಟ್ಟಿರಬೇಕು ಎಂದು ಆ ವ್ಯಕ್ತಿ ಹೇಳಿದ್ದಾರೆ. ಮನೆಯಿಂದ ಹೊರಗೆ ಹೋಗಿ ಬರುವವರೆಗೂ ಅವರ ಮೇಲೆ ಕಣ್ಣಿಟ್ಟಿರಬೇಕು. ಅವರ ಚಟುವಟಿಕೆಗಳ ಮೇಲೆಯೂ ಕಣ್ಣಿಟ್ಟಿರಬೇಕು ಎಂದು ಹೇಳುತ್ತಾರೆ ಮಹಾನುಭಾವ. ಇದು ಆ ವ್ಯಕ್ತಿಯ ಮಾನಸಿಕತೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಇಂಥ ವ್ಯಕ್ತಿಯಿಂದ ಕಲಿಯಬೇಕಾ? ಎಂದು ಕಿಡಿಕಾರಿದರು.












Click it and Unblock the Notifications