ಮುಖ್ಯಮಂತ್ರಿಗಳ ಸ್ಥಾನದಲ್ಲಿ ಇರುವವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ: ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು ಜನವರಿ 06: ಮುಖ್ಯಮಂತ್ರಿಗಳ ಸ್ಥಾನದಲ್ಲಿ ಇರುವವರ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳುವ ಮೂಲಕ ತಮ್ಮ ತಪ್ಪನ್ನು ತಿದ್ದುಕೊಳ್ಳಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಾಯಿ ಮರಿ ಥರ ಇರುತ್ತಾರೆ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿಗಳಾಗಿ, ಹಣಕಾಸು ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದೀರಿ. ಅಲ್ಲದೇ, ಈಗ ವಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದೀರಿ. ಇಂತಹ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ನೀವು, ರಾಜ್ಯದ ಪ್ರಮುಖ ಸಾಂವಿಧಾನಿಕ ಹುದ್ದೆಯಲ್ಲಿರುವ ಹಾಗೂ ನಿಮಗಿಂತಲೂ ಹೆಚ್ಚು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ದಿಪರ ಆಡಳಿತ ನೀಡುತ್ತಿರುವ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಹಗುರ ಹೇಳಿಕೆಯನ್ನು ನೀಡಿರುವುದು ನಿಮಗೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.

ಕಾಮನ್ ಮ್ಯಾನ್ ಸಿಎಂ ಎಂದೇ ಹೆಸರು ಪಡೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಬಗ್ಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ ಸಫಲರಾಗಿದ್ದಾರೆ. ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿರುವುದರಿಂದ ನಿಮಗೆ ತಡೆದುಕೊಳ್ಳಲು ಆಗುತ್ತಿಲ್ಲ ಎನ್ನುವುದು ಇಂತಹ ಹಗುರ ಮಾತುಗಳಿಂದ ಸ್ಪಷ್ಟವಾಗುತ್ತಿದೆ ಎಂದಿದ್ದಾರೆ. ನಾಯಿ ಮರಿಗೆ ಹೋಲಿಸುವ ಮುನ್ನ ತಾವುಗಳು ತಮ್ಮ ಹೈಕಮಾಂಡ್ನ ನಾಯಕರ ಮುಂದೆ ನಡೆದುಕೊಳ್ಳುವ ಪರಿಯನ್ನ ಪರಾಮರ್ಶಿಸಿಕೊಳ್ಳಬೇಕು. ಅಲ್ಲದೇ, ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳುವ ಮೂಲಕ ಸಾಂವಿಧಾನಿಕ ಹುದ್ದೆಗೆ ಹಾಗೂ ಜನಪ್ರಿಯ ಮುಖ್ಯಮಂತ್ರಿಗಳಿಗೆ ತೋರಿಸಿದ ಅಪಮಾನವನ್ನ ತಿದ್ದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನರೇಂದ್ರ ಮೋದಿ ಮುಂದೆ ನೀವು ನಾಯಿ ಮರಿ ತರ ಇರ್ತೀರಿ, ಮೋದಿ ಮುಂದೆ ಬೊಮ್ಮಾಯಿ ಗಡಗಡ: ಸಿದ್ದರಾಮಯ್ಯ
ಸಿಎಂ ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಮುಂದೆ ನೀವು ನಾಯಿ ಮರಿ ತರ ಇರ್ತೀರಿ, ಮೋದಿ ಕಂಡರೆ ಗಡಗಡ ಅಂತೀರಿ ಎಂದು ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ 5499 ಕೋಟಿ ರೂ.ವಿಶೇಷ ಅನುದಾನ ನೀಡಬೇಕಿತ್ತು. ಆದರೆ, ನಿರ್ಮಲಾ ಸೀತಾರಾಮನ್ ನಾವು ಕೊಡಲು ಸಾಧ್ಯವಿಲ್ಲಎಂದು ಪತ್ರ ಬರೆಯುತ್ತಾರೆ. ಸಿಎಂಗೆ ನಿಜಕ್ಕೂ ತಾಖತ್ತಿದ್ದರೆ ಕೇಂದ್ರದಿಂದ ಅನುದಾನ ತರಬೇಕಿತ್ತು. ಆದರೆ, ನಿಮ್ಮ ದಮ್ಮು, ತಾಖತ್ತು ಎಲ್ಲಿ ಹೋಯಿತಪ್ಪ ಬೊಮ್ಮಾಯಿ ಎಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುವುದು ಸೂರ್ಯ ಪೂರ್ವದಲ್ಲಿ ಹುಟ್ಟುವಷ್ಟೇ ಸತ್ಯ. ಕೇವಲ ತಾಲೂಕಿನ 40 ಕೆರೆಗಳಿಗೆ ಮಾತ್ರವಲ್ಲರಾಜ್ಯದ ಎಲ್ಲಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಅಧಿಕಾರ ಪಡೆದ ವರ್ಷದಲ್ಲೆ ಮಾಡುತ್ತೇವೆ. ಮಾತು ಕೊಟ್ಟಂತೆ ನಮ್ಮ ಅವಧಿಯಲ್ಲಿ ನೀರಾವರಿಗೆ ಆದ್ಯತೆ ನೀಡಲಾಗಿದೆ. ಆದರೆ, ಇಂದಿನ ಸರಕಾರಕ್ಕೆ ಕೇವಲ 100ಲಕ್ಷ.ಕೋಟಿ ರೂಗಳನ್ನು ಮೂರು ವರ್ಷದಲ್ಲಿ ನೀರಾವರಿಗಾಗಿ ಬಳಕೆ ಮಾಡಲಾಗಿಲ್ಲ. ಕೃಷ್ಣ, ಮಹದಾಯಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿಲ್ಲ. ಮೇಕೆದಾಟು ಯೋಜನೆ ಜಾರಿಗೊಳಿಸುವುದನ್ನು ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತುಗಳೇನಾದವು. ಬಿಜೆಪಿಯಿಂದ ಇತಿಹಾಸದಲ್ಲೆ ದಾಖಲೆಯಾಗುವಷ್ಟು ಸಾಲವಾಗಿದೆ ಎಂದರು












Click it and Unblock the Notifications