ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ ವಿರೋಧವಿದೆ: ಎಚ್.ಡಿ.ದೇವೇಗೌಡರು
ಮೈಸೂರು, ಡಿಸೆಂಬರ್ 2: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ. ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಗುರುವಾರ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಬಿಜೆಪಿಗೆ ಲಾಭ ಆಗುತ್ತೋ ಬಿಡುತ್ತೋ ಅನ್ನೋ ಪ್ರಶ್ನೆ ಅಲ್ಲ. ಇದನ್ನು ಜಾರಿ ಮಾಡಲು ಹೊರಟರೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ನಾನು ಸಂವಿಧಾನದಲ್ಲಿ ಏನಿದೆಯೋ ಅದಕ್ಕೆ ನಾವು ಬದ್ದ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ ವಿರೋಧವಿದೆ ಎಂದರು.
ಎಲೆಕ್ಷನ್ ಅಖಾಡಕ್ಕೆ ದೊಡ್ಡಗೌಡ್ರು..!ಮುಂದಿನ ತಿಂಗಳಿಂದ ಪ್ರಚಾರ
ವಿಧಾನಸಭಾ ಎಲೆಕ್ಷನ್ ಅಖಾಡ ರಂಗೇರುತ್ತಿದೆ. ಮೂರು ಪಕ್ಷಗಳು ಸಾಕಷ್ಟು ತಯಾರಿಯಲ್ಲಿ ತೊಡಗಿವೆ. ಜೆಡಿಎಸ್ ಪಕ್ಷವೂ ಸಹ ಪಂಚರತ್ನ ಯಾತ್ರೆ ಮಾಡಿದೆ. ದೊಡ್ಡಗೌಡ್ರು ಕೂಡ ಅಖಾಡಕ್ಕೆ ಧುಮುಕೋ ಮಾತುಗಳನ್ನಾಡಿದ್ದಾರೆ. ಯಾವಾಗಿನಿಂದ ಪ್ರಚಾರಕ್ಕೆ ಬರುತ್ತಾರೆ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮುಂದಿನ ತಿಂಗಳಿಂದ ಪ್ರಚಾರಕ್ಕೆ ಹೋಗುವೆ. ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನಯಾತ್ರೆ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಸೂಚನೆ ನೀಡಿದ್ದೇನೆ. ಶಾಸಕರು, ಮಾಜಿ ಶಾಸಕರಿಗೆ ಸಂಘಟನೆ ಜವಾಬ್ದಾರಿ ನೀಡಲಾಗಿದೆ ಅಂತ ದೇವೇಗೌಡ ಪುನರುಚ್ಚರಿಸಿದ್ದಾರೆ.ಜೆಡಿಎಸ್ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿ ದಿನ ಪಟ್ಟಿ ಬದಲಾವಣೆಯಾಗುತ್ತಿರುತ್ತದೆ. ಜೆಡಿಎಸ್ ಗೆ ಎಲ್ಲೆಡೆ ಉತ್ತಮ ವಾತಾವರಣ ಇದೆ. ಜನ ಬೆಂಬಲ ನೀಡುತ್ತಾರೆ ಅಂತ ದೇವೇಗೌಡ ತಿಳಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ. ಆಗಾಗ ಬದಲಾವಣೆಯೂ ಆಗುತ್ತದೆ. ನಿತ್ಯ ಪಂಚರತ್ನ ಯಾತ್ರೆ ಸಂಚರಿಸಿದ ಬಳಿಕ ಯಾತ್ರೆ ನಡುವೆ ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ಸಮೀಕ್ಷೆಯೂ ನಡೆಯುತ್ತಿದೆ. ಅದನ್ನು ಆಧರಿಸಿ ಅಭ್ಯರ್ಥಿ ನಿರ್ಧಾರ ಆಗುತ್ತದೆ ಎಂದು ತಿಳಿಸಿದ್ದಾರೆ. ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವಲಿಂಗೇಗೌಡ ಅವರು ಕುಮಾರಸ್ವಾಮಿ ಜತೆ ಮಾತನಾಡಿದ್ದಾರೆ. ಇನ್ನೂ ಸಮಸ್ಯೆ ಬಗೆಹರಿದಿಲ್ಲ, ಆದರೆ ಮುಂದೆ ಎಲ್ಲವೂ ಸರಿ ಆಗಲಿದೆ. ಹಾಸನದಲ್ಲಿ ಶಾಸಕ ಪ್ರೀತಂ ಗೌಡಗೆ ಬಿ.ಎಸ್.ಯಡಿಯೂರಪ್ಪ ಸರಕಾರವಿದ್ದಾಗ ಎಲ್ಲ ಶಕ್ತಿ ಕೊಟ್ಟಿದೆ. ಯಾವ್ಯಾವ ಕೆಲಸ ಕೊಟ್ಟಿದ್ದಾರೆ? ಅದರಿಂದ ಎಷ್ಟು ಹಣ ಸಂಪಾದಿಸಿದ್ದಾರೆ? ಅವರ ಶಕ್ತಿಗೆ ಯಡಿಯೂರಪ್ಪ ಹಾಗೂ ಅವರ ಮಕ್ಕಳೇ ಕಾರಣ. ಅವರ ಯಾವುದೇ ಬೆದರಿಕೆಗೆ ನಾವು ಬಗ್ಗುವುದಿಲ್ಲ, ಎಂದು ಗುಡುಗಿದರು. ಇನ್ನೂ ಹಾಸನ ಟಿಕೆಟ್ಗೆ ಪಕ್ಷದಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಾರೆ.
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ನೀಡಲಿಲ್ಲ. ಮೇಕೆದಾಟುಗೆ ಅವಕಾಶ ಕೊಡದ ಮೋದಿ ಸಮುದ್ರಕ್ಕೆ ಹರಿಯುವ ನೀರು ಬಳಸಲು ಕೊಡ್ತಾರೆ. ತಮಿಳುನಾಡು ಸರ್ಕಾರ ಸಮುದ್ರಕ್ಕೆ ಹರಿಯುವ ಕಾವೇರಿ ನೀರು ಬಳಸೋಕೆ ಅನುಮತಿ ಕೊಟ್ಟಿದ್ದಾರೆ. ಸೇಲಂ ಜಿಲ್ಲೆ ಸೇರಿ ಆಸುಪಾಸಿನ ಜಿಲ್ಲೆಗಳಲ್ಲಿ 4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೆ ಈ ನೀರು ಬಳಕೆಯಾಗುತ್ತಿದೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಎಐಎಡಿಎಂಕೆಗೆ ಅನುಕೂಲವಾಗಲಿ ಅಂತಾನೆ ಅಲ್ಲಿ ನೀರಾವರಿ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಬಿಡಲ್ಲ. ಮೇಕೆದಾಟು ವಿಚಾರವಾಗಿ ಬಹಳ ಹಿಂದೆ ಪ್ರಧಾನಿಗೆ ಪತ್ರ ಬರೆದಿದ್ದೆ. ಈ ಪತ್ರಕ್ಕೆ ಈ ತನಕ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ರಾಜ್ಯಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವೆ ಎಂದು ಎಚ್.ಡಿ. ದೇವೇಗೌಡರುಹೇಳಿದರು.












Click it and Unblock the Notifications