ಬಜೆಟ್ ಬಗ್ಗೆ ಬಿಜೆಪಿ ಟೀಕೆಗೆ ಕುಮಾರಸ್ವಾಮಿ ಪ್ರತ್ಯುತ್ತರ
ಬೆಂಗಳೂರು, ಜುಲೈ 05: ಅಧಿಕಾರಕ್ಕೆ ಬಂದಾಗಿನಿಂದಲೂ ಸಾಲಮನ್ನಾ ಬಗ್ಗೆ ಬೆನ್ನ ಹಿಂದೆ ಬಿಜೆಪಿಯವರು ಸಾಲಮನ್ನಾ ಮಾಡಿದ ಮೇಲೆ ಕೃತಜ್ಞತೆಯನ್ನು ಸಲ್ಲಿಸುವ ಬದಲಿಗೆ ಟೀಕೆ ಮಾಡುತ್ತಿದ್ದಾರೆ ಇದು ಅವರ ರೈತರೆಡೆಗಿನ ಬದ್ಧತೆ ತೋರುತ್ತದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿಯಲ್ಲಿ ತಮ್ಮ ಬಜೆಟ್ ಅನ್ನು ಸಮರ್ಥನೆ ಮಾಡಿಕೊಂಡ ಕುಮಾರಸ್ವಾಮಿ ಅವರು, ಬಜೆಟ್ ಅನ್ನು ಟೀಕಿಸಿದ ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ಬಜೆಟ್: ಸಿದ್ದರಾಮಯ್ಯ VS ಎಚ್ ಡಿ ಕುಮಾರಸ್ವಾಮಿ
ಹಾಸನ ಬಜೆಟ್, ಅಣ್ಣ-ತಮ್ಮಂದಿರ ಬಜೆಟ್ ಎಂಬ ಬಿಜೆಪಿಗರ ಟೀಕೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಹಾಸನಕ್ಕೆ 150 ಕೋಟಿ ಕೊಟ್ಟಿರಬಹುದು ಅಷ್ಟೆ ಅದನ್ನೇ ದೊಡ್ಡದು ಮಾಡಿ ಹೇಳುತ್ತಿದ್ದಾರೆ. ಅಷ್ಟಕ್ಕೂ ಹಾಸನದ ಶಾಸಕ ರೇವಣ್ಣ ಅಲ್ಲ ಬಿಜೆಪಿಯವರು ಎಂದು ಅವರು ಹೇಳಿದರು.
ಇದು ಅಣ್ಣ-ತಮ್ಮಂದಿರ ಬಜೆಟ್: ಯಡಿಯೂರಪ್ಪ ಕಟು ಟೀಕೆ
ಸಿದ್ದರಾಮಯ್ಯ ಅವರ ಬಜೆಟ್ನಲ್ಲಿ ಘೋಷಿಸಿದ್ದ ಎಲ್ಲಾ ಅಂಶಗಳನ್ನೂ ಮುಂದುವರೆಸುತ್ತಿದ್ದು, ಅವರ ಬಜೆಟ್ ಗಾತ್ರ 2,09,000 ಕೋಟಿ ಆಗಿತ್ತು. ನಮ್ಮ ಬಜೆಟ್ ಗಾತ್ರ 2,18,488 ಕೋಟಿ ಆಗಿದೆ ಎಂದು ಅವರು ಹೇಳಿದರು.
ಕರಾವಳಿಗೆ ಸಿದ್ದರಾಮಯ್ಯ ಬಜೆಟ್ ಮುಂದುವರಿಕೆ
ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳಿಗೆ ಹಾಗೂ ಕರಾವಳಿ ಜಿಲ್ಲೆಗಳಿಗೆ ಅನುದಾನ ನೀಡಿಲ್ಲ ಎಂಬುದು ತಪ್ಪು ಮಾಹಿತಿ ಎಂದ ಅವರು, ಸಿದ್ದರಾಮಯ್ಯ ಅವರ ಬಜೆಟ್ನಲ್ಲಿ ಅಲ್ಪಸಂಖ್ಯಾತ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ನೀಡಲಾಗಿದ್ದ ಅನುದಾನವನ್ನು ಮುಂದುವರೆಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಸಾಲಮನ್ನಾಕ್ಕೆ ನಾಲ್ಕು ಹಂತದಲ್ಲಿ ಹಣ ಬಿಡುಗಡೆ
ರೈತರ ಸಾಲಮನ್ನಾಕ್ಕೆ ಹಣ ಎಲ್ಲಿಂದ ತರುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಈಗಾಗಲೇ ಬ್ಯಾಂಕರ್ಗಳ ಬಳಿ ಮಾತನಾಡಿದ್ದೇವೆ. ನಮ್ಮ ಮನವಿಗೆ ಅವರು ಒಪ್ಪಿದ್ದಾರೆ. ನಾಲ್ಕು ಹಂತದಲ್ಲಿ ಸಾಲಮನ್ನಾದ 34000 ಕೋಟಿ ಬಿಡುಗಡೆ ಆಗುತ್ತದೆ. ಒಂದು ತಿಂಗಳ ಅವಧಿಯಲ್ಲಿ ರೈತರಿಗೆ ಋಣಮುಕ್ತ ಪತ್ರ ತಲುಪುತ್ತದೆ ಎಂದು ಅವರು ಹೇಳಿದರು.
ಟ್ರಾಫಿಕ್ ನಿವಾರಣೆಗೆ 15000 ಕೋಟಿ ಮೀಸಲು
ಬಿಜೆಪಿ ಶಾಸಕ ಅಶೋಕ್ ಅವರ ಬೆಂಗಳೂರು ಅಭಿವೃದ್ಧಿ ನಿರ್ಲಕ್ಷ ಟೀಕೆಗೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಅಶೋಕ ಚಕ್ರವರ್ತಿ ಅವರು ನಗರ ಉಸ್ತುವಾರಿಯಾಗಿದ್ದಾಗ ಏನು ಮಾಡಿದ್ದಾರೆಂದು ಗೊತ್ತಿದೆ ಎಂದ ಅವರು, ನಗರದ ಟ್ರಾಫಿಕ್ ನಿವಾರಣೆಗೆಂದು 15000 ಕೋಟಿ ಎಲೆವೇಟೆಡ್ ರಸ್ತೆ ನಿರ್ಮಾಣಕ್ಕೆಂದೇ ಮೀಸಲಿಟ್ಟಿದ್ದೇವೆ ಅದನ್ನು ಹೊರತಾಗಿ ಕೋಟ್ಯಂತರ ಹಣ ನಗರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ ಎಂದರು.
ಉತ್ತರ ಕರ್ನಾಟಕ ಕೈಗಾರಿಕೆಗೆ ಒತ್ತು
ಉತ್ತರ ಕರ್ನಾಟದ ಜಿಲ್ಲೆಗಳಿಗೆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದ್ದೇವೆ ಎಂದ ಅವರು ಗುಲ್ಬರ್ಗ, ಧಾರವಾಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಿದ್ದೇವೆ. ಸಾಲಮನ್ನಾ ಆದ ನಂತರ ಉತ್ತರ ಕರ್ನಾಟಕದ ಯಾವ ಜಿಲ್ಲೆಗೆ ಎಷ್ಟು ಲಾಭವಾಗಲಿದೆ ಎಂದು ಗೊತ್ತಾಗಲಿದೆ ಎಂದರು. ಆದರೆ ಉ.ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಬಿಜೆಪಿ ಟೀಕೆಗೆ ಕಾಮಾಲಿಗೆ ಕಣ್ಣಿಗೆ ಹಳದಿಯೇ ಕಾಣುತ್ತದೆ ಎಂದು ಕಾಲೆಳೆದರು.
ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ
ಇಂಧನ ಸುಂಕ ಏರಿಸಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಕೇರಳದಲ್ಲಿ ಪೆಟ್ರೋಲ್ ಬೆಲೆ 78.28 ಪೈಸೆ ಇದೆ, ತಮಿಳುನಾಡಿನಲ್ಲಿ 80.05, ಆಂಧ್ರಪ್ರದೇಶದಲ್ಲಿ 81 ಇದೆ ಸುಂಕ ಏರಿಕೆಯಾದರೂ ಸಹ ನಮ್ಮ ರಾಜ್ಯದಲ್ಲಿ 77.99 ಇದೆ. ದ.ಭಾರತದಲ್ಲಿ ಕಡಿಮೆ ದರ ಇರುವುದು ನಮ್ಮಲ್ಲಿಯೇ ಎಂದರು. ನಾಲ್ಕು ವರ್ಷದಲ್ಲಿ 200 ಪಟ್ಟು ಇಂಧನ ಬೆಲೆ ಏರಿಸಿರುವ ಕೇಂದ್ರದ ವಿರುದ್ಧ ಟೀಕೆ ಮಾಡುವುದು ಬಿಟ್ಟು ಬಿಜೆಪಿಯವರು ನಮ್ಮ ಮೇಲೆ ಟೀಕೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕೇಂದ್ರದಿಂದ ನಯಾ ಪೈಸೆ ಕೊಡಲಿಲ್ಲ
ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಲು ನಯಾ ಪೈಸೆ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ. ಹಾಗಿದ್ದರೂ ಸಹಿತ ಆರ್ಥಿಕ ಶಿಸ್ತು ಮೀರದೆ ರೈತರ ಸಾಲಮನ್ನಾ ಮಾಡಿದ್ದೇನೆ. ನಾನೂ ಸಹ ನೋಟ್ ಪ್ರಿಂಟ್ ಮಾಡಲು ಸಾಧ್ಯವಿಲ್ಲ ಹಾಗಾಗಿ ಕೆಲವು ದರಗಳನ್ನು ಏರಿಸಲೇಬೇಕಾಗಿದೆ ಎಂದು ಸಮಜಾಯಿಶಿ ನೀಡಿದರು. 25000 ಕೋಟಿ ನೆರವನ್ನು ಮೋದಿ ಅವರ ಬಳಿ ಕೇಳಿದ್ದೆ ಆದರೆ ಅದನ್ನೂ ನೀಡುವ ಯೋಗ್ಯತೆ ಅವರಿಗಿಲ್ಲ ಎಂದು ಅವರು ಕಟು ಶಬ್ದ ಬಳಸಿದರು.
ಅಕ್ಕಿಯ ಪ್ರಮಾಣ ಕಡಿಮೆ ಬೇಳೆ ಹೆಚ್ಚಳ
ಅನ್ನಭಾಗ್ಯದ ಅಕ್ಕಿಯಪ್ರಮಾಣ ಕಡಿಮೆ ಮಾಡಿದ್ದೇವಾದರೂ ಬೇಳೆ ಕಾಳು ಮತ್ತು ಎಣ್ಣೆ ಪ್ರಮಾಣದಲ್ಲಿ ಏರಿಕೆ ಮಾಡಿದ್ದೇವೆ. ಅಲ್ಲದೆ ಸಿದ್ದರಾಮಯ್ಯ ಅವರು ಘೋಷಿಸಿದ್ದ ಯಾವುದೇ ಯೋಜನೆಯನ್ನು ಹಿಂಪಡೆದಿಲ್ಲ ಅಥವಾ ಮೊಟಕು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸೋಮವಾರ ಬಜೆಟ್ ಮೇಲೆ ಚರ್ಚೆ
ಸೋಮವಾರದಿಂದ ಬಜೆಟ್ ಮೇಲೆ ಚರ್ಚೆ ಪ್ರಾರಂಭವಾಗುತ್ತದೆ. ಬಿಜೆಪಿಯವರು ಅವರ ಅನುಮಾನಗಳನ್ನು ಕೇಳಲಿ, ನಾನೂ ಸಿದ್ಧನಿದ್ದೇನೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತೇವೆ. ಅವರು ಬೀದಿಗಿಳಿಯುವುದಾದರೆ ನಾನೂ ಬೀದಿಗೆ ಇಳಿಯಲು ಸಿದ್ಧನಿದ್ದೇನೆ ಎಂದು ಎಚ್ಡಿಕೆ ಹೇಳಿದರು.
ಸರ್ಕಾರವನ್ನೂ ಯಾರೂ ಬೀಳಿಸಲು ಸಾಧ್ಯವಿಲ್ಲ
ನಾವು ಎಲ್ಲಾ ಕ್ಷೇತ್ರಗಳಿಗೂ ಅನುದಾನ ನೀಡಿದ್ದೇವೆ ಯಾವುದನ್ನೂ ನಿರ್ಲಕ್ಷಿಸಿಲ್ಲ, ಬಿಜೆಪಿಯ ಪೊಳ್ಳು ಮಾತುಗಳನ್ನು ನಂಬಬೇಡಿ. ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸನ್ನು ಸಮ್ಮಿಶ್ರ ಸರ್ಕಾರ ಕಂಡಿದೆ. ಸಮ್ಮಿಶ್ರ ಸರ್ಕಾರವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾವು ಒಗ್ಗಟ್ಟಾಗಿದ್ದೇವೆ ಎಂದು ಅವರು ಹೇಳಿದರು.