ಪರಿವರ್ತನಾ ಯಾತ್ರೆಯಲ್ಲಿ 'ಕೃಷ್ಣ'ಪರ್ವ! ಒಕ್ಕಲಿಗರ ಓಲೈಕೆಯತ್ತ ಬಿಜೆಪಿ?!
Recommended Video
ಮಂಡ್ಯ, ಜನವರಿ 22: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ನಡೆಸಿದ ಪರಿವರ್ತನಾ ಯಾತ್ರೆಗೆ ಹೆಚ್ಚು ಕಳೆ ಬಂದಿದ್ದು, ಮೊನ್ನೆ ಮಂಡ್ಯದಲ್ಲಿ ನಡೆದ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭಾಗವಹಿಸಿದಾಗ.
ಕಾಂಗ್ರೆಸ್ ನ ಹಿರಿಯ, ಪ್ರಭಾವಿ ನಾಯಕ ಎನ್ನಿಸಿದ್ದ ಕೃಷ್ಣಾ ಅವರು ಕಳೆದ ವರ್ಷ ಬಿಜೆಪಿಗೆ ಸೇರುತ್ತಿದ್ದಂತೆಯೇ ಬಿಜೆಪಿಗೆ ಆನೆಬಲ ಸಿಕ್ಕಂತಾಯ್ತು ಎಂದುಕೊಂಡಿದ್ದವರೇ ಹಲವರು. ಆದರೆ ಪರಿವರ್ತನಾ ಯಾತ್ರೆಯಲ್ಲೆಲ್ಲೂ ಕಾಣಿಸಿಕೊಳ್ಳದೆ, ನಿರ್ಪಪ್ತರಾಗಿಯೇ ಉಳಿದ ಕೃಷ್ಣ ಅವರ ನಡೆ ಯಾರೊಬ್ಬರಿಗೂ ಅರ್ಥವಾಗಿರಲಿಲ್ಲ.
ಮೋದಿ, ಅಮಿತ್ ಶಾ ಸಮ್ಮುಖದಲ್ಲಿ ಎಸ್ ಎಂ ಕೃಷ್ಣ 'ಪಾಂಚಜನ್ಯ'?
ಜ.20 ರಂದು ಮಂಡ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಖುದ್ದು ಹಾಜರಾಗುವ ಮೂಲಕ ತವರಿನ ಮೇಲಿನ ತಮ್ಮ ಪ್ರೀತಿಯನ್ನು ಎಸ್.ಎಂ.ಕೃಷ್ಣ ವ್ಯಕ್ತಪಡಿಸಿದ್ದಾರೆ. ಮೈಸೂರು, ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಾವ ಹೆಚ್ಚಿಸಲು ಎಸ್.ಎಂ.ಕೃಷ್ಟ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶ ಬಿಜೆಪಿಯದ್ದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ನ ಭದ್ರ ಕೋಟೆ ಎನ್ನಿಸಿರುವ ಈ ಭಾಗದಲ್ಲಿ ಬಿಜೆಪಿ ತನ್ನ ಆಧಿಪತ್ಯ ಸ್ಥಾಪಿಸುವುದು ಸುಲಭವಲ್ಲ.
ಒಕ್ಕಲಿಗರ ಒಲವು ಯಾರ ಕಡೆಗೆ?!
ಹೀಗಿರುವಾಗ ಈ ಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಎಸ್.ಎಂ.ಕೃಷ್ಣ ಸಫಲರಾಗುತ್ತಾರಾ ಎಂಬುದು ಈಗಿರುವ ಪ್ರಶ್ನೆ. ಲಿಂಗಾಯತ ಸಮುದಾಯದ(19%) ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಮುದಾಯವೆಂದರೆ ಅದು, ಒಕ್ಕಲಿಗ ಸಮುದಾಯ(15-17%) ಎಂಬುದು ಗಮನಿಸಬೇಕಾದ ವಿಷಯ.
ಉಪಚುನಾವಣೆಯಲ್ಲಿ ನಡೆಯದ ಕೃಷ್ಣ ಮ್ಯಾಜಿಕ್!
2017 ರ ಏಪ್ರಿಲ್ ನಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಸ್ವತಃ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೂ, ಅಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಒಲವು ಈಗಲೂ ಕೃಷ್ಣಾ ಅವರ ಕಡೆಗಿದೆಯಾ ಎಂಬುದನ್ನು ಕಾದುನೋಡಬೇಕಿದೆ.
ಬಿಜೆಪಿಯತ್ತ ಕಣ್ಣೆತ್ತಿ ನೋಡದ ಜನ!
ಬಿಜೆಪಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲೇ ಅಂದರೆ 2008ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಮೈಸೂರು, ಮಂಡ್ಯ, ಚಾಮರಾಜನರಗಳಲ್ಲಿನ ಮತದಾರ ಬಿಜೆಪಿಯತ್ತ ಕಣ್ಣೆತ್ತಿಯೂ ನೋಡದಿರುವಾಗ ಇನ್ನು, ಈಗ ನೋಡುತ್ತಾನಾ ಎಂಬ ಪ್ರಶ್ನೆಯನ್ನೂ ಅಲ್ಲಗಳೆಯುವಂತಿಲ್ಲ.
ಒಕ್ಕಲಿಗರ ಓಲೈಕೆಗೆ ತಂತ್ರವೋ ತಂತ್ರ
ಈ ಭಾಗದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ ಪಾತ್ರ ವಹಿಸಿರುವುದರಿಂದ ಒಕ್ಕಲಿಗರ ಓಲೈಕೆಗೆ ಬಿಜೆಪಿ ತಂತ್ರ ಹೆಣೆಯುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಕರ್ನಾಟಕಕ್ಕೆ ಆಗಮಿಸಿದ್ದಾಗ ಆಮಂಡ್ಯದ ಬೆಳ್ಳೂರಿನಲ್ಲಿರುವ ದಿಚುಂಚನಗಿರಿ ಮಠಕ್ಕೂ ಭೇಟಿ ನೀಡಿದ್ದು, ಇದೇ ತಂತ್ರದ ಒಂದು ಭಾಗ ಎಂಬುದು ರಾಜಕೀಯ ಪಂಡಿತರ ಅಂಬೋಣ.