ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವಿಗೆ ಪ್ರಧಾನಿ ಮೋದಿ ಕಾರಣ?
ಬೆಂಗಳೂರು, ಅ. 27: ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಸಾವಿನ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಹತ್ವದ ಮಾಹಿತಿ ಹೊರ ಹಾಕಿದ್ದಾರೆ.
ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಅವರ ಸಾವಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಣ ಎಂದು ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದರು. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ್ದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಗಳನ್ನು ವಿರೋಧಿಸಲು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಆಗ ಕಾಂಗ್ರೆಸ್ ನಾಯಕರು ಬಾಡಿಗೆ ಬಂಟರನ್ನು ಕರೆತಂದಿದ್ದರು. ಕಾರ್ಮಿಕ ನಾಯಕ ಮಾರು ಮಾನ್ಪಡೆ ಅವರು ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರಣ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದರು. ಅವರ ಸಾವಿಗೆ ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಡಿವಿಎಸ್ ಆರೋಪಿಸಿದ್ದರು.
ಆದರೆ ದೆಹಲಿಯಲ್ಲಿ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಸಾವಿನ ಕುರಿತು ಇದೀಗ ಮಾಜಿ ಸಚಿವ ದಿನೇಶ್ ಗುಂಡೂರಾವ್ ಸ್ಪೋಟಕ ಆರೋಪ ಮಾಡಿದ್ದಾರೆ.

ದೇವೇಗೌಡರಿಂದ ರೈತರಿಗೆ ಕೊರೊನಾ!
ಮಾತು ಮುಂದುವರೆಸಿದ್ದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು, ಕೇಂದ್ರ ಸರ್ಕಾರ ರೈತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಹುಯಿಲೆಬ್ಬಿಸಿ ಮಾಜಿ ಪ್ರಧಾನಿ ದೇವೇಗೌಡರು ರೈತರನ್ನು ಬೀದಿಗೆ ಕರೆತಂದು ಪ್ರತಿಭಟನೆ ಮಾಡಿಸಿದರು. ಅದು ಕೂಡ ಕೊರೊನಾ ವೈರಸ್ ಹಬ್ಬಲು ಕಾರಣವಾಯ್ತು ಎಂದು ಡಿವಿಎಸ್ ಆರೋಪಿಸಿದ್ದರು. ಇದೀಗ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವಿಗೆ ಪ್ರಧಾನಿ ಮೋದಿ ಕಾರಣ ಎಂಬ ಗಂಭೀರ ಆರೋಪವನ್ನು ದಿನೇಶ್ ಗುಂಡೂರಾವ್ ಮಾಡಿದ್ದಾರೆ.

ಸುರೇಶ್ ಅಂಗಡಿ ಸಾವಿಗೆ ಮೋದಿ ಕಾರಣ?
ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಆದರೆ ಬೆಳಗಾವಿಯ ಮನೆಯಲ್ಲಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದರಿಂದ ಅವರಿಗೆ ಕೊರೊನಾ ವೈರಸ್ ತಗುಲಿತು. ಅದಕ್ಕಾಗಿ ಸುರೇಶ್ ಅಂಗಡಿ ಅವರ ಸಾವಿಗೆ ಪ್ರಧಾನಿ ಮೋದಿ ಕಾರಣ ಎನ್ನಬಹುದೆ? ಎಂದು ದಿನೇಶ್ ಗುಂಡೂರಾವ್ ಅವರು ಟ್ವೀಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ.

ನನ್ನ ಮೇಲೆ ಪ್ರಕರಣ ದಾಖಲಿಸಿ
ಇನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕಾರ್ಮಿಕ ನಾಯಕ ಮಾರುತಿ ಮಾನ್ಪಡೆ ಅವರ ಸಾವಿಗೆ ನಾವು ಕಾರಣವಾಗಿದ್ದರೆ, ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ಹೇಳಿ ಎಂದು ನಿನ್ನೆ (ಅ.26) ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.
Recommended Video

ರಾಜಕೀಯ ಕೆಸರೆರಚಾಟ
ಕಾರ್ಮಿಕ ನಾಯಕ ಮಾರು ಮಾನ್ಪಡೆ ಅವರ ಸಾವಿನ ವಿಚಾರವಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಧೋರಣೆಯನ್ನು ರಾಜ್ಯದ ರೈತ-ಕಾರ್ಮಿಕರು ಖಂಡಿಸಿದ್ದಾರೆ. ಜೊತೆಗೆ ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ನೆನಪಿಸಿ ಕೊಳ್ಳಬಹುದಾದಗಿದೆ.












Click it and Unblock the Notifications