ಹುಟ್ಟಿದ ಕಮಲ ಆಕಾಶ ಮೆಟ್ಟಿತು : ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಯಾರಿಗೆ ಭರ್ಜರಿ ಗೆಲುವಿನ ಭವಿಷ್ಯ?
ಚಿಕ್ಕಮಗಳೂರು, ಫೆಬ್ರವರಿ 26: 'ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್' ಇದು ಕಡೂರು ತಾಲೂಕಿನ ಜಿಗಣೇಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕದ ನುಡಿ. ಕಾರ್ಣಿಕ ನುಡಿದಾಗ ಜನರು ಹರ್ಷೋದ್ಘಾರ ಮಾಡಿದ್ದಾರೆ.
ಹೌದು, ಭಾರತ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಣಿಕೋತ್ಸವದಲ್ಲಿ ಕಳೆದ ಎಂಟು ದಿನಗಳಿಂದ ಕಾರ್ಣಿಕ ನುಡಿಯುವ ಗಣಮಗ ಜಿಗಣೇಹಳ್ಳಿ ಮಂಜುನಾಥ್ ದೇವಸ್ಥಾನದ ಆವರಣದಲ್ಲಿರುವ ಬಿಲ್ವಪತ್ರೆ ಮರದಡಿಯಲ್ಲಿ ಹಾಕಲಾಗಿದ್ದ ಹಸಿರು ಚಪ್ಪರದಲ್ಲಿ ಉಪವಾಸ ವ್ರತ ಕೈಗೊಂಡಿದ್ದರು. ಕಾರ್ಣಿಕದ ದಿನ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ನಂತರ ಹೊಳೆಪೂಜೆ ನಡೆದು ಬಿಲ್ಲನೇರಿದ ಗಣಮಗ ಸದ್ದಲೇ ಎಂದು ಕೂಗಿದಾಗ ಮೌನ ಆವರಿಸಿತು.

'ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್' ಎಂದು ಕಾರ್ಣಿಕ ನುಡಿದಾಗ ಜನರು ಹರ್ಷೋದ್ಘಾರ ಮಾಡಿದರು. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದ ಭವಿಷ್ಯ ಎಂದು ಹಲವರು ವಿಶ್ಲೇಷಿಸಲಾಗಿದೆ. ಅಲ್ಲದೇ ಮುಂದಿನ ವರ್ಷ ಮಳೆ ಬೆಳೆ ಸಮೃದ್ಧವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಮಲ ಮತ್ತೆ ಅರಳುತ್ತದೆ ಎಂದು ಸ್ಥಳೀಯರು ಕಾರ್ಣಿಕ ನುಡಿಯನ್ನು ಅರ್ಥೈಸಿದ್ದಾರೆ.
ಇನ್ನೂ ಉತ್ತರ ಕರ್ನಾಟಕದ ಮತ್ತೊಂದು ಪ್ರಸಿದ್ಧ ಕ್ಷೇತ್ರವಾಗಿರುವ ಧಾರವಾಡ ಜಿಲ್ಲೆಯ ದೇವರಗುಡ್ಡ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಸಿರಿನಾಡಿಗೆ ಬಂಗಾರದ ಗಿಳಿ ಬಂದು ಕೊಲೆ ತೇಲೆ ಪರಾಕ್ ಮುತ್ತಿನ ಗುರಿ ಮುಟ್ಟಿತು, ಬೆಳ್ಳಿ ತೊಟ್ಟಿಲು ಕಟ್ಟಿತು,ಕಷ್ಟ ಪಟ್ಟ ಮನುಷ್ಯನಿಗೆ ಮುತ್ತಿನ ದಾರಿ ಸಿಕ್ಕಿತ್ತಲೇ ಪರಾಕ್ ಎಂದು ಕಾರ್ಣಿಕ ನುಡಿಯಲಾಗಿತ್ತು. ಈ ಕಾರ್ಣಿಕದಲ್ಲಿಯೂ ಸಹ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂಬುದರ ಸಂಕೇತ ಎಂದು ಜನ ವಿಶ್ಲೇಷಣೆ ಮಾಡಿದ್ದರು. ಒಟ್ನಲಿ, ಕಳೆದ ವರ್ಷ ಮಳೆಯಿಲ್ಲದೆ ರೋಸಿ ಹೋಗಿದ್ದ ರೈತ ಇದೀಗ ಜಿಗಣೇಹಳ್ಳಿಯ ಕಾರ್ಣಿಕದಲ್ಲೂ ಉತ್ತಮ ಮಳೆಬೆಳೆಯ ಸೂಚನೆ ದೊರೆತಿರುವುದು ನಾಡಿನ ಜನರ ಸಂತಸಕ್ಕೆ ಕಾರಣವಾಗಿದೆ.












Click it and Unblock the Notifications