ನಳಿನ್ ನೇಮಕದ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ?
ಬೆಂಗಳೂರು, ಆಗಸ್ಟ್ 22 : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ರಾಜ್ಯದ ಕೆಲವು ಬಿಜೆಪಿ ನಾಯಕರು ಇದರಿಂದಾಗಿ ಅಸಮಾಧಾನಗೊಂಡಿದ್ದಾರೆಯೇ?.
ರಾಜ್ಯದ ಕೆಲವು ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಒಮ್ಮತವಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ನಳಿನ್ ಅವರನ್ನು ಅಭಿನಂದಿಸಿ ಯಾವುದೇ ಟ್ವೀಟ್ ಮಾಡಿಲ್ಲ.
ಬಿಜೆಪಿ ಅಧ್ಯಕ್ಷ ಹುದ್ದೆಗೆ ಅರವಿಂದ ಲಿಂಬಾವಳಿ, ಸಿ. ಟಿ. ರವಿ ಹೆಸರು ಮುಂಚೂಣಿಯಲ್ಲಿತ್ತು. ಸಿ. ಟಿ. ರವಿ ಯಡಿಯೂರಪ್ಪ ಸಂಪುಟ ಸೇರಿದರು. ಆದರೆ, ಲಿಂಬಾವಳಿಗೆ ಸಚಿವ ಸ್ಥಾನ ಕೈ ತಪ್ಪಿತ್ತು, ಅತ್ತ ಬಿಜೆಪಿ ಅಧ್ಯಕ್ಷ ಪಟ್ಟವೂ ಸಿಗಲಿಲ್ಲ.
ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನಳಿನ್ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಳಿನ್ ಕುಮಾರ್ ಕಟೀಲ್ ಮಂಗಳೂರು ಬಿಟ್ಟು ಬಂದೇ ಇಲ್ಲ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನಳಿನ್ ರಾಜ್ಯಾಧ್ಯಕ್ಷರಾಗಿದ್ದಾರೆ
ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ನಳಿನ್ ಕುಮಾರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. "ಕಟೀಲ್ ಅವರು ಬೇರೆ ಜಿಲ್ಲೆಗೆ ಹೋಗಿದ್ದನ್ನು ನಾನು ನೋಡೇ ಇಲ್ಲ. ಅವರು ಈಗ ರಾಜ್ಯಾಧ್ಯಕ್ಷರಾಗಿದ್ದಾರೆ" ಎಂದು ಹೇಳಿದ್ದಾರೆ.

ಎಲ್ಲಾ ಕಡೆಗೂ ಕಿವಿ ತೆರೆದುಕೊಂಡಿರಬೇಕು
ಬಸನಗೌಡ ಪಾಟೀಲ್ ಯತ್ನಾಳ್, "ಅಧ್ಯಕ್ಷರಾಗಿ ಎಲ್ಲಾ ಕಡೆ ಕಿವಿ ತೆರೆದುಕೊಂಡಿರಬೇಕು. ಒಂದು ಕಡೆ ಮಾತ್ರ ಕಿವಿ ತೆರೆದುಕೊಂಡು ಕೇಳಿಸಿಕೊಂಡರೆ ಸಾಲದು. ಎರಡೂ ಕಡೆಯೂ ಕಿವಿ ತೆರೆದುಕೊಂಡಿರಬೇಕು" ಎಂದು ಸಲಹೆ ನೀಡಿದ್ದಾರೆ.

ನೂತನ ಅಧ್ಯಕ್ಷರಿಗೆ ಸಲಹೆ
ಬಸನಗೌಡ ಪಾಟೀಲ್ ಯತ್ನಾಳ್ ಅವರು, 'ಬೀದರ್, ಕಲಬುರಗಿ, ವಿಜಯಪುರದ ಕಡೆ ನಳಿನ್ ಓಡಾಡಬೇಕು. ಕನಿಷ್ಠ 1 ಜಿಲ್ಲೆಯಲ್ಲಿ 10 ಕಾರ್ಯಕರ್ತರ ಹೆಸರನ್ನು ಅವರು ಹೇಳುವಂತೆ ಆಗಬೇಕು. ಅವರು ಶ್ರಮ ಹಾಕಿ, ಯಶಸ್ವಿ ರಾಜ್ಯಾಧ್ಯಕ್ಷರಾಗಬೇಕು" ಎಂದು ಹೇಳಿದ್ದಾರೆ.

ನಳಿನ್ ಹೇಳುವುದೇನು?
ನಳಿನ್ ಕುಮಾರ್ ಕಟೀಲ್ ಈ ಕುರಿತು ಮಾತನಾಡಿದ್ದು, "ಯಾವುದೇ ಜವಾಬ್ದಾರಿ ಕೊಡುವ ತನಕ ಸೀಮಿತ ವ್ಯಾಪ್ತಿಯಲ್ಲೇ ಇರುತ್ತೇವೆ. ಒಮ್ಮೆ ಜವಾಬ್ದಾರಿ ಸಿಕ್ಕ ಮೇಲೆ ಪ್ರವಾಸ ಮಾಡಿ, ಸಂಘಟನೆ ಬಲಪಡಿಸುತ್ತೇನೆ. ಇದನ್ನು ನಾನು ಹುದ್ದೆ ಎಂದು ಭಾವಿಸಿಲ್ಲ, ಇದೊಂದು ಜವಾಬ್ದಾರಿ" ಎಂದು ಹೇಳಿದ್ದಾರೆ.












Click it and Unblock the Notifications