ಅ. 23ರಂದು ಆಯೋಗದ ನೋಟಿಸಿಗೆ ಉತ್ತರಿಸಲಿರುವ ರೂಪಾ
ವಿಜಯಪುರ, ಅಕ್ಟೋಬರ್ 11: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳಾದ ಡಿ ರೂಪಾ, ಕೃಷ್ಣಕುಮಾರ್ ಸೇರಿದಂತೆ ನಾಲ್ವರಿಗೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗಿದೆ.
ಈ ಹಿಂದೆ ನೀಡಲಾಗಿದ್ದ ನೋಟಿಸ್ ಗೆ ಉತ್ತರಿಸಲು ನಾಲ್ಕಾರು ವಾರಗಳ ಗಡುವು ನೀಡಲಾಗಿತ್ತು. ಅದರಂತೆ, ಅಕ್ಟೋಬರ್ 23 ರಂದು ಮಾನವ ಹಕ್ಕುಗಳ ಆಯೋಗದ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ಸೂಚಿಸಲಾಗಿದೆ ಎಂದು ಮಾನವ ಹಕ್ಕುಗಳ ಅಧ್ಯಕ್ಷೆ ಮೀರಾ ಸೆಕ್ಸನಾ ಅವರು ವಿಜಯಪುರದಲ್ಲಿಂದು ಹೇಳಿದರು.

ಕಳೆದ ಎರಡು ದಿನಗಳ ಹಿಂದೆ ಪ್ರಕರಣದ ಕುರಿತು ಪ್ರಾಥಮಿಕ ವರದಿ ಬಂದಿದೆ, ಬಂದ ವರದಿಯ ಪ್ರಕಾರ ಕೆಲ ನ್ಯೂನತೆಗಳು ಕಂಡು ಬಂದಿವೆ, ಏನೆಲ್ಲ ನ್ಯೂನತೆಗಳು ಎಂಬ ಬಗ್ಗೆ ಈಗ ಬಹಿರಂಗ ಪಡಿಸಲು ಆಗುವುದಿಲ್ಲ ಎಂದರು.
ಅಧಿಕಾರಿಗಳ ವರ್ಗಾವಣೆ ಬಗ್ಗೆ ನಮಗೆ ಯಾವುದೇ ಸಂಬಂಧವಿಲ್ಲಾ. ಆದರೆ, ಖೈದಿಗಳ ಮೇಲಿನ ಹಲ್ಲೆ ಆರೋಪದ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದರು. ಆಯೋಗದ ಐಜಿಪಿಯಿಂದಾ ಹಲ್ಲೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ಕೇಳಿದ್ದೀವಿ, ಅವರು ವರದಿ ನೀಡಿ ಎರಡು ತಿಂಗಳಾಗಿದ್ದು ಅದರಲ್ಲಿ ನ್ಯೂನತೆಗಳಿವೆ ಅಂತಾ ತಿಳಿದು ಬಂದಿದೆ.
ಇದರ ಬಗ್ಗೆ ವಿವರಣೆ ನೀಡುವಂತೆ ಜೈಲು ಸೂಪರಿಟೆಂಡೆಂಟ್ ಕೃಷ್ಣಕುಮಾರ ಅವರಿಗೆ ನೋಟಿಸ್ ನೀಡಿದ್ದೆವು ಅದಕ್ಕೆ ನಾಲ್ಕುವಾರಗಳ ಗಡುವು ನೀಡಲಾಗಿತ್ತು. ಇದೀಗ ಅಕ್ಟೋಬರ್ 23 ಕ್ಕೆ ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದರು. ಆ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಈ ಕುರಿತಂತೆ ಒನ್ಇಂಡಿಯಾ ಪ್ರತಿನಿಧಿಗೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಆಯೋಗದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.












Click it and Unblock the Notifications