ಐವರು ಸಚಿವರ ತೀವ್ರ ಒತ್ತಡ: ಮೌಢ್ಯ ನಿಷೇಧ ಕಾಯ್ದೆ ನನೆಗುದಿಗೆ?
ಬೆಂಗಳೂರು, ಜುಲೈ 14: ಪ್ರಸಕ್ತ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಲಾಗಿದ್ದ ಬಹು ಚರ್ಚಿತ ಮೌಢ್ಯ ನಿಷೇಧ ಕಾಯ್ದೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಬುಧವಾರ (ಜುಲೈ 13) ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಐವರು ಸಚಿವರು ಸದನದಲ್ಲಿ ಕಾಯ್ದೆ ಮಂಡನೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಐದನೇ ಬಾರಿಗೆ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ. (ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಪಣತೊಟ್ಟ ಸಿದ್ದು)
ಮಸೂದೆ ಮಂಡನೆಯಾದರೆ ಹಿಂದೂ ಸಂತರ, ಆಧ್ಯಾತ್ಮಿಕ ಮುಖಂಡರ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ, ಇದರ ತಂಟೆಗೆ ಹೋಗುವುದು ಬೇಡ ಎಂದು ಐವರು ಸಚಿವರು ಪಟ್ಟು ಹಿಡಿದ ಹಿನ್ನಲೆಯಲ್ಲಿ ಸರಕಾರ ಹಾಲೀ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಮುಂದಾಗುತ್ತಿಲ್ಲ.

ಸದ್ಯ, ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ. ಈ ಸಮಯದಲ್ಲಿ ಈ ಕಾಯ್ದೆ ಅನುಮೋದನೆಗೊಂಡರೆ ಸರಕಾರ ತೀವ್ರ ಪ್ರತಿಭಟನೆ ಎದುರಿಸಬೇಕಾಗಬಹುದು.
ಪಕ್ಷದ ಇಮೇಜಿಗೆ ಈ ಮಸೂದೆ ಇನ್ನಷ್ಟು ಧಕ್ಕೆ ತರುವ ಸಾಧ್ಯತೆ ಇರುವುದರಿಂದ ಹಿರಿಯ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಉಪಸಮಿತಿ ರಚಿಸಿ, ಸಮಿತಿಯ ವರದಿಯನ್ನಾಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.
ಸಂಪುಟ ಉಪ ಸಮಿತಿಯಲ್ಲಿ ಕಾಗೋಡು ತಿಮ್ಮಪ್ಪ, ಟಿ ಬಿ ಜಯಚಂದ್ರ, ಡಿ ಕೆ ಶಿವಕುಮಾರ್, ರಮೇಶ್ಕುಮಾರ್, ಬಸವರಾಜ ರಾಯರೆಡ್ಡಿ ಮತ್ತು ಎಚ್. ಆಂಜನೇಯ ಸದಸ್ಯರಾಗಿರುತ್ತಾರೆ.












Click it and Unblock the Notifications