ಆರ್. ಅಶೋಕ್ ವಿಪಕ್ಷ ನಾಯಕರಾದ ಬಳಿಕ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆಯೇ?
ಬೆಂಗಳೂರು, ಡಿಸೆಂಬರ್ 09: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡು ಆರು ತಿಂಗಳ ನಂತರ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಕರ್ನಾಟಕದ ಪ್ರತಿಪಕ್ಷ ನಾಯಕರನ್ನಾಗಿ ಮಾಜಿ ಉಪ ಮುಖ್ಯಮಂತ್ರಿ, ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಹಾಗೂ ಒಕ್ಕಲಿಗ ನಾಯಕರಾದ ಆರ್ ಅಶೋಕ್ ಅವರನ್ನ ಆಯ್ಕೆ ಮಾಡಿದ್ದು, ಬಿಜೆಪಿಯಲ್ಲಿ ಕಿಡಿ ಹೊತ್ತಿಕೊಳ್ಳುತ್ತಿದೆ ಎನ್ನಲಾಗಿದೆ.
ಹೌದು, ಬಿಜೆಪಿಯಲ್ಲಿ ಲೋಕಸಭಾ ಚುನಾವಣಾ ದೃಷ್ಟಿಯಿಂದ ಭಾರೀ ಬದಲಾವಣೆ ಮಾಡಬೇಕಾಗಿದ್ದು, ಯಡಿಯೂರಪ್ಪ ಅವರ ಮಾತಿನಂತೆ ಆರ್ ಅಶೋಕ ಅವರನ್ನ ವಿಪಕ್ಷ ನಾಯಕನನ್ನಾಗಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಹೌದು, ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆ ನಡೆದಿದ್ದು,ಶಾಸಕರ ಅಭಿಪ್ರಾಯ ಹಾಗೂ ಲೋಕಸಭಾ ಚುನಾವಣೆಯ ಲೆಕ್ಕಾಚಾರವನ್ನ ಹಾಕಿಕೊಂಡಿರುವ ಬಿಜೆಪಿ ಹೈಕಮಾಂಡ್ ಆರ್ ಅಶೋಕ್ ಅವರನ್ನ ಆಯ್ಕೆ ಮಾಡಿದೆ. ಈಗಾಗಲೇ ಲಿಂಗಾಯತ ಸಮುದಾಯದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದ್ದು, ವಿಪಕ್ಷ ಸ್ಥಾನಕ್ಕೆ ಒಕ್ಕಲಿಗ ನಾಯಕ ಆರ್ ಅಶೋಕ್ ಅವರ ಆಯ್ಕೆ ಮಾಡುವ ಮೂಲಕ ಜಾತಿ ಲೆಕ್ಕಾಚಾರವನ್ನ ಗಮದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ನಿರ್ಧಾರವನ್ನ ಮಾಡಿದೆ.
ಇನ್ನು, ಕರ್ನಾಟಕದ ವಿಪಕ್ಷ ನಾಯಕನಾಗಿ ಆರ್ ಅಶೋಕ್ ಅವರನ್ನ ಆಯ್ಕೆಯಾದ ಬೆನ್ನಲ್ಲೇ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲ ದಿನಗಳ ಹಿಂದೆ ವಿರೋಧ ಪಕ್ಷ ನಾಯಕ ಎಂದು ಶಾಸಕಾಂಗ ಸಭೆಯಲ್ಲಿ ಘೋಷಣೆಯಾಗ ಬೆನ್ನಲ್ಲೇ ಹಲವು ಉತ್ತರ ಕರ್ನಾಟಕ ಭಾಗದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ್ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಸಭೆ ಸೇರಿ ಈ ಬಾರಿಯೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು.

ಇನ್ನೂ ಸರ್ಕಾರ ರಚನೆಯಾದ ದಿನದಿಂದಲೂ ಸಾಕಷ್ಟು ವರ್ಗಾವಣೆ, ಕಮಿಷನ್ ಆರೋಪಗಳು ಕೇಳಿ ಬಂದವು, ಆದರೆ, ವಿಪಕ್ಷ ನಾಯಕ ಈ ಹಿಂದೆ ನೇಮಕರಾಗದ ಹಿನ್ನಲೆ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆಯನ್ನ ಮಾಡುವ ಮೂಲಕ ಬಿಸಿ ಮುಟ್ಟಿಸುವ ಕೆಲಸವನ್ನ ಬಿಜೆಪಿ ಮಾಡಿರಲಿಲ್ಲ, ಆದರೆ, ಇದೀಗ ವಿಪಕ್ಷ ನಾಯಕರಾಗಿ ಆರ್ ಅಶೋಕ್ ನೇಮಕರಾಗಿದ್ದು, ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರದ ವಿರುದ್ಧ ಹತ್ತು ಹಲವು ಲೋಪಗಳು ಕೇಳಿ ಬಂದರು ಸಹ ವಿಪಕ್ಷ ನಾಯರಾಗಿ ಆರ್ ಅಶೋಕ್ ಯಾವುದೇ ಹೋರಾಟಕ್ಕೆ ಮುಂದಾಗದೇ ಇರುವುದು ಬಿಜೆಪಿಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಅಶೋಕರ್ ವಿರುದ್ಧ ಬಿಜೆಪಿ ಶಾಸಕರು ಗರಂ
ಬೆಳಗಾವಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಗೆ ಚಾಕು ಇರಿತದ ಕುರಿತು ಸದನದಲ್ಲಿ ಸರ್ಕಾರ ನೀಡಿದ ಉತ್ತರಕ್ಕೆ ವಿರೋಧಿಸಿ ಸಭಾತ್ಯಾಗಕ್ಕೆ ಪ್ರತಿಪಕ್ಷವಾದ ಬಿಜೆಪಿಯಲ್ಲಿಯೇ ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಪೃಥ್ವಿ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಧರಣಿ ನಡೆಸಲು ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ಶಾಸಕರು ತೀರ್ಮಾನಿಸಿದ್ದರು. ಆದರೆ, ವಿಪಕ್ಷ ನಾಯಕ ಆರ್ ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿ ಸದನದಿಂದ ಹೊರ ಹೋಗಿದ್ದಾರೆ. ಈ ವೇಳೆ ಸದನದಲ್ಲಿ ಬಿಜೆಪಿ ನಾಯಕರಲ್ಲಿಯೇ ಗೊಂದಲ ಉಂಟಾಗಿದೆ.
ಈ ವೇಳೆ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಶಾಸಕರಾದ ಎಸ್ ಆರ್ ವಿಶ್ವನಾಥ್ ಮತ್ತು ಅಭಯ್ ಪಾಟೀಲ್ ಅವರು ಕಿಡಿಕಾರಿದ್ದಾರೆ. ಈ ವೇಳೆ ಆರ್ ಅಶೋಕ್ ಅವರನ್ನು ಅಡ್ಜಸ್ಟಮೆಂಟ್ ಗಿರಾಕಿ ಎಂದು ಬೈಯ್ದುಕೊಂಡು ಸದನದಿಂದ ಹೊರ ನಡೆದಿದ್ದಾರೆ. ಈ ವೇಳೆ ಅಭಯ್ ಪಾಟೀಲ್ ಅವರು ಅಶೋಕ್ ರಿಂದಾಗಿ ರಾಜಕೀಯಕ್ಕೆ ಬಂದಿಲ್ಲ, ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಈಗಾಗಲೇ ವಿಪಕ್ಷ ನಾಯಕರಾಗಿ ಆರ್ ಅಶೋಕ್ ಅವರನ್ನ ನೇಮಕ ಮಾಡಿರುವುದಕ್ಕೆ ಉತ್ತರ ಕರ್ನಾಟಕ ಭಾಗ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಬೆಂಗಳೂರು ಭಾಗದ ನಾಯಕರಾದ ಎಸ್ ಆರ್ ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಅಸಮಾಧಾನ ಹೊರ ಹಾಕಿದ್ದು, ವಿಪಕ್ಷ ನಾಯಕರನ್ನಾಗಿ ಆರ್ ಅಶೋಕ್ ಅವರನ್ನ ನೇಮಕ ಮಾಡಿದ ಬೆನ್ನಲ್ಲೇ ಬಿಜೆಪಿ ಮನೆಯೊಂದ ಮೂರು ಬಾಗಿಲಾಗಿದೆಯೇ ಎಂಬ ಪ್ರಶ್ನೆ ಮೂಡಿದ್ದು, ಈ ಎಲ್ಲಾ ಅಸಮಾಧಾನವನ್ನ ಹೇಗೆ ಶಮನಗೊಳಿಸುತ್ತಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.












Click it and Unblock the Notifications