ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಆಂತರಿಕ ಸಮಸ್ಯೆ ಉಲ್ಬಣ: ಅಡಕತ್ತರಿಯಲ್ಲಿ ಎಚ್ಡಿಕೆ

|
Google Oneindia Kannada News

ಜಾತ್ಯಾತೀತ ಜನತಾದಳದಲ್ಲಿ ಯಾರೇ ಅಧ್ಯಕ್ಷರಾಗಿದ್ದರೂ ಅಂತಿಮವಾಗಿ ಪಕ್ಷದ ಕಾರುಬಾರುಗಳು ನಡೆಯುವುದು ಗೌಡ್ರ ಕುಟುಂಬದ ಅಣತಿಯಂತೇ. ಇದು ಪಕ್ಷದೊಳಗೆ, ಹೊರಗಿರುವ ಎಲ್ಲರಿಗೂ ಗೊತ್ತಿರುವ ವಿಚಾರ.

ದಿವಂಗತ ಕೃಷ್ಣಪ್ಪನವರು ಜೆಡಿಎಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ನಡೆದದ್ದು ಕೂಡಾ ಅದೇ. ಮೊನ್ನೆ ಮೊನ್ನೆ ನಡೆದ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆಯ ವಿಚಾರದಲ್ಲೂ ಕುಟುಂಬ ರಾಜಕಾರಣವೇ ಗೆದ್ದದ್ದು. (ರಾಜ್ಯಾಧ್ಯಕ್ಷರಾಗಿ ಮತ್ತೆ ಕುಮಾರಸ್ವಾಮಿ)

ಗಳಸ್ಯ ಕಂಠಸ್ಯದಂತಿದ್ದ ಜಮೀರ್, ಚೆಲುವರಾಯಸ್ವಾಮಿ, ಬಾಲಕೃಷ್ಣ ಮುಂತಾದವರ ಪರೋಕ್ಷ ವಿರೋಧದ ನಡುವೆಯೂ ಗೌಡ್ರು, ರಾಜ್ಯಾಧ್ಯಕ್ಷ ಹುದ್ದೆಯ ತೆನೆ ಹೊದಿಸಿದ್ದು ಪುತ್ರ ಕುಮಾರಸ್ವಾಮಿಯ ಮೇಲೆಯೇ.

ಜೆಡಿಎಸ್ ನಲ್ಲಿ ದೇವೇಗೌಡ, ಕುಮಾರಸ್ವಾಮಿಯೇ ನಾಯಕರು ಮತ್ತು ಎಚ್ಡಿಕೆಯೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ತಿಳಿದಿರುವ ಸತ್ಯ. ಅದಕ್ಕೆ ಯಾರ ವಿರೋಧವೂ ಇಲ್ಲ.

ಆ ಸ್ಥಾನವನ್ನು ಪಕ್ಷದಲ್ಲಿ ಯಾರೂ ಬಯಸದಿದ್ದರೂ ಜೆಡಿಎಸ್ ನಲ್ಲಿ ಆಂತರಿಕ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ವಿಪರೀತ ಮಟ್ಟಕ್ಕೆ ಬೆಳೆದಿರುವುದಕ್ಕೆ ಕಾರಣ ಯಾರೆಂದು ಹುಡುಕ ಹೊರಟರೆ ಚೆಂಡು ಕುಮಾರಸ್ವಾಮಿ ಅಂಗಳದಲ್ಲೇ ಬೀಳುತ್ತಿರುವುದು ವಾಸ್ತವತೆ. (ಭಿನ್ನಮತ ಸಹಿಸಲ್ಲ ದೇವೇಗೌಡ ಘರ್ಜನೆ)

ಈ ವಾಸ್ತವತೆಯನ್ನು ಅರಿತಿದ್ದರೂ ದೇಶದ ನುರಿತ ರಾಜಕಾರಣಿ ಗೌಡ್ರು, ಮಗನಿಗೇ ಮತ್ತೆ ಪಟ್ಟಾಭಿಷೇಕ ಮಾಡಿರುವುದಕ್ಕೂ ಪಕ್ಷದಲ್ಲಿ ಅಂತಹಾ ಭಿನ್ನಾಭಿಪ್ರಾಯಗಳೇನೂ ಇರಲಿಲ್ಲ.

ಆದರೆ, ತಮ್ಮ ಮಾತುಗಳಿಗೆ ಚಿಕ್ಕಾಸಿನ ಬೆಲೆ ಸಿಗುತ್ತಿಲ್ಲ ಎನ್ನುವ ಮುಖಂಡರ ನೋವು ಮತ್ತು ಆಗುತ್ತಿರುವ ಅವಮಾನಗಳೇ ಇಂದು ಪಕ್ಷದಲ್ಲಿನ ಆಂತರಿಕ ಸಮಸ್ಯೆ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿ ನಿಂತಿರುವುದು. ಮುಂದೆ ಓದಿ..

ಜೆಡಿಎಸ್ ಶಾಸಕಾಂಗ ಸಭೆ

ಜೆಡಿಎಸ್ ಶಾಸಕಾಂಗ ಸಭೆ

ಪಕ್ಷದ ಕೆಲವು ಪ್ರಮುಖ ಮುಖಂಡರು ಪಕ್ಷದ ಕಾರ್ಯಕ್ರಮಗಳಿಂದ ಇತ್ತೀಚಿನ ದಿನಗಳಲ್ಲಿ ದೂರ ಉಳಿಯುತ್ತಿದ್ದರು. ಆದರೆ ಗುರುವಾರ (ಡಿ 4) ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅರ್ಧಕ್ಕೂ ಹೆಚ್ಚು ಶಾಸಕರು ಗೈರಾಗಿರುವುದು ಕುಮಾರಸ್ವಾಮಿಯವರ ಮೇಲಿನ ಮುನಿಸಿನಿಂದ ಎನ್ನುವುದು ಪಕ್ಷದ ಆಪ್ತ ವಲಯಗಳಿಂದ ಕೇಳಿ ಬರುತ್ತಿರುವ ಸುದ್ದಿ.

ಬೆಳಗಾವಿ ಅಧಿವೇಶನ

ಬೆಳಗಾವಿ ಅಧಿವೇಶನ

ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬೆಳಗಾವಿ ವಿಧಾನಸಭಾ ಅಧಿವೇಶನಕ್ಕೆ ಮುನ್ನ ಕರೆಯಲಾಗಿದ್ದ ಪ್ರಮುಖ ಶಾಸಕಾಂಗ ಸಭೆಗೆ ಹಾಜರಾಗುವಂತೆ ಖುದ್ದು ಕುಮಾರಸ್ವಾಮಿಯವರೇ ಪಕ್ಷದ ಎಲ್ಲಾ ಶಾಸಕರಿಗೆ ಪತ್ರ ವ್ಯವಹಾರ ನಡೆಸಿದ್ದರು.

ಸಭೆ ಖಾಲಿ..ಖಾಲಿ..

ಸಭೆ ಖಾಲಿ..ಖಾಲಿ..

ಆದರೆ, ಹದಿನೆಂಟು ಶಾಸಕರು ಮತ್ತು ಮೂವರು ಪರಿಷತ್ ಸದಸ್ಯರು ಸಭೆಗೆ ಹಾಜರಾಗದೇ ಕುಮಾರಸ್ವಾಮಿ ತೀವ್ರ ಮುಜುಗರ ಎದುರಿಸುವಂತಾಯಿತು. ಉರ್ದುವಿನಲ್ಲಿ ಬರೆದಿದ್ದರೋ, ಕನ್ನಡದಲ್ಲಿ ಬರೆದಿದ್ದರೋ, ಪತ್ರ ತನಗೆ ತಲುಪಲಿಲ್ಲ ಎಂದು ಜಮೀರ್ ಪಕ್ಷದ ಪ್ರಮುಖ ಸಭೆಗೆ ಮತ್ತೆ ಹಾಜರಾಗದೇ ಉದಾಸೀನ ತೋರಿದ್ದು ಸಭೆಯ ಹೈಲೈಟ್ಸ್.

ಕುಮಾರಸ್ವಾಮಿ ಆಪ್ತರಂತಿದ್ದವರೂ ಬರಲಿಲ್ಲ

ಕುಮಾರಸ್ವಾಮಿ ಆಪ್ತರಂತಿದ್ದವರೂ ಬರಲಿಲ್ಲ

ಪಕ್ಷದ ಕ್ಯಾಬಿನೆಟ್ ಶಾಸಕರಾದ ಚೆಲುವರಾಯಸ್ವಾಮಿ (ನಾಗಮಂಗಲ), ಮಲ್ಲಿಕಾರ್ಜುನ ಖೂಬಾ (ಬಸವಕಲ್ಯಾಣ), ಬಾಲಕೃಷ್ಣ (ಮಾಗಡಿ), ಇಕ್ಬಾಲ್ ಅನ್ಸಾರಿ (ಗಂಗಾವತಿ) ಮುಂತಾದ ಪ್ರಮುಖರೇ ಸಭೆಯಿಂದ ದೂರ ಉಳಿದಿದ್ದು ಕುಮಾರಸ್ವಾಮಿಗೆ ಇರಿಸುಮುರಿಸು ಉಂಟುಮಾಡಿತ್ತು. ಸಹೋದರ ಎಚ್ ಡಿ ರೇವಣ್ಣ (ಹೊಳೆನರಸೀಪುರ) ಕೂಡಾ ಹನುಮಜ್ಜಯಂತಿ ನೆಪದಲ್ಲಿ ಸಭೆಗೆ ಗೈರಾಗಿದ್ದರು.

ಗೌಡ್ರು ದೆಹಲಿಯಲ್ಲಿ ಫುಲ್ ಬ್ಯೂಸಿ

ಗೌಡ್ರು ದೆಹಲಿಯಲ್ಲಿ ಫುಲ್ ಬ್ಯೂಸಿ

ಅತ್ತ, ದೆಹಲಿಯಲ್ಲಿ ದೇವೇಗೌಡ್ರು ಬಿಜೆಪಿ, ಕಾಂಗ್ರೆಸ್ ವಿರುದ್ದ ಮತ್ತೊಂದು 'ಶಕ್ತಿ' ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ ರಾಜ್ಯದಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳ ಬೆಳವಣಿಗೆಗಳು ನಿಷ್ಟಾವಂತ ಕಾರ್ಯಕರ್ತರು, ಮುಖಂಡರಿಗೆ ತಲೆಬಿಸಿಯುಂಟು ಮಾಡಿದೆ. (ಚಿತ್ರ: ಪಿಟಿಐ)

ಕುಮಾರಸ್ವಾಮಿ ಗೌರವ ನೀಡುತ್ತಿಲ್ಲ

ಕುಮಾರಸ್ವಾಮಿ ಗೌರವ ನೀಡುತ್ತಿಲ್ಲ

ಹಗಲು ರಾತ್ರಿ ಶ್ರಮಿಸಿ ಪಕ್ಷವನ್ನು ಮತ್ತೆ ಟ್ರ್ಯಾಕಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಕುಮಾರಸ್ವಾಮಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಗೌರವ ನೀಡುತ್ತಿಲ್ಲ ಎನ್ನುವುದು ಎಲ್ಲರಲ್ಲಿರುವ ಸಿಟ್ಟು ಎನ್ನುವುದು ಜೆಡಿಎಸ್ ಅಂಗಣದಿಂದ ಕೇಳಿ ಬರುತ್ತಿರುವ ಮಾತು.

ಆಪ್ತರು ದುಷ್ಮನಿಗಳಾದರು

ಆಪ್ತರು ದುಷ್ಮನಿಗಳಾದರು

ಆಪ್ತ ಸ್ನೇಹಿತರಂತಿದ್ದವರು, ದುಷ್ಮನಿಗಳಾಂತಾಗಿರುವುದಕ್ಕೆ ಪರಿಹಾರ ಕೊಂಡುಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ. ಸ್ವಾಭಿಮಾನ, ಪ್ರತಿಷ್ಟೆ ಬದಿಗೊತ್ತಿ, ಎಲ್ಲರ ವಿಶ್ವಾಸ ತೆಗೆದುಕೊಂಡು ಪಕ್ಷ ಬಲವರ್ಧನೆಗೆ ಕುಮಾರಸ್ವಾಮಿ ಮುಂದಾಗುತ್ತಿಲ್ಲ ಎನ್ನುವುದು ಮೂಲ ಜೆಡಿಎಸ್ ಮೂಲ ಕಾರ್ಯಕರ್ತರ ನೋವು.

ಒಟ್ಟಿನಲ್ಲಿ ಅಡಕತ್ತರಿಯಲ್ಲಿ ಎಚ್ಡಿಕೆ

ಒಟ್ಟಿನಲ್ಲಿ ಅಡಕತ್ತರಿಯಲ್ಲಿ ಎಚ್ಡಿಕೆ

ಸದ್ಯದಲ್ಲೇ ಆರಂಭವಾಗುವ ಬೆಳಗಾವಿ ಅಧಿವೇಶನ, ಮುಂಬರುವ ಬಿಬಿಎಂಪಿ ಚುನಾವಣೆ, ಪಕ್ಷ ಸಂಘಟನೆ, ರಾಜ್ಯ ಪ್ರವಾಸ, ಕಿಡಿಯಿಂದ ಆರಂಭವಾದ ಪಕ್ಷದ ಆಂತರಿಕ ಸಮಸ್ಯೆಯ ಬೆಂಕಿಯಂತಾಗಿರುವುದು.. ಹೀಗೆ ಅಗ್ನಿಪರೀಕ್ಷೆಯ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ.

English summary
Internal problem with JDS party increasing day by day. Most of the party MLA and MLCs skipped crucial legislative meet ahead of Belagavi session 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X