ಮೈಸೂರು, ಮಂಡ್ಯದ ಕೆಲವು ಸುದ್ದಿ ಚೂರುಗಳು
ಮೈಸೂರು,ಏಪ್ರಿಲ್,01: ಅರಣ್ಯದಂಚಿನ ಗ್ರಾಮಗಳಲ್ಲಿ ಚಿರತೆಯ ಕಾಟ ಮತ್ತೆ ಆರಂಭವಾಗಿದ್ದು, ಪ್ರಾಣಿಗಳ ಪಾಲಿಗೆ ಮೃತ್ಯುವಾಗಿದೆ. ಇದರ ಉಪಟಳದಿಂದ ಬೇಸತ್ತ ನಂಜನಗೂಡಿನ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದಿದ್ದು, ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ನಂಜನಗೂಡಿನ ರಾಮಯ್ಯ ಎಂಬುವರ ಹಸು ಚಿರತೆಯ ಬಾಯಿಗೆ ಸಿಲುಕಿ ಸತ್ತುಹೋಗಿದೆ. ಚಿರತೆ ಕಾಟದಿಂದ ತಪ್ಪಿಸಬೇಕೆಂದು ಅರಣ್ಯ ಇಲಾಖೆಯ ಆರ್ಎಫ್ಒ ಜಯಶಂಕರ್ ಅವರಿಗೆ ಮನವಿ ಮಾಡಿದರೂ ಸ್ಪಂದಿಸದ ಕಾರಣ ಅವರ ಮೇಲೆ ಕಿಡಿಕಾರಿದ್ದಾರೆ. ಬಳಿಕ ಚಿರತೆ ಕಾಟಕ್ಕೆ ಒಳಗಾದ ರೈತರಿಗೆ ಸರ್ಕಾರದಿಂದ 10ಸಾವಿರ ರೂ. ಹಾಗೂ ವೈಯಕ್ತಿಕ 5ಸಾವಿರ ರೂ. ಪರಿಹಾರ ನೀಡಿದ್ದಾರೆ.[ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]
ರಾಮಯ್ಯ ಅವರು ಜಾನುವಾರುಗಳನ್ನು ಮೇಯಿಸಲು ಊರ ಸಮೀಪದ ಕೆರೆಯ ಬಳಿ ತೆರಳುತ್ತಿದ್ದಾಗ ಚಿರತೆ ಹಸುವಿನ ಮೇಲೆರಗಿದೆ. ಆಗ ರಾಮಯ್ಯನವರು ಕಿರುಚುತ್ತಾ ಅದರತ್ತ ಕಲ್ಲು ಎಸೆಯುವ ಪ್ರಯತ್ನ ಮಾಡಿದ್ದಾರೆ. ಚಿರತೆ ಘರ್ಜನೆಗೆ ಹೆದರಿದ ರಾಮಯ್ಯ ಅವರು ಹಿಂತಿರುಗಿ ಬಂದು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗ್ರಾಮಸ್ಥರು ತೆರಳಿದ ಸಂದರ್ಭ ಚಿರತೆ ಓಡಿ ಹೋಗಿದ್ದು, ಗಾಯಗೊಂಡ ಹಸುವನ್ನು ತಂದು ಉಪಚರಿಸುವ ಯತ್ನ ನಡೆಸಿದ್ದಾರೆ. ಆದರೆ ಹಸು ಬದುಕುಳಿಯಲಿಲ್ಲ.
ಸೆಸ್ಕ್ ನಿರ್ಲಕ್ಷ್ಯಕ್ಕೆ 70 ಸಾವಿರ ರು ನಷ್ಟ ಅನುಭವಿಸಿದ ಮಂಡ್ಯ ರೈತ
ಮಂಡ್ಯ,ಏಪ್ರಿಲ್,01: ಒಣಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರಿಗೆ ವಿದ್ಯುತ್ ತಂತಿ ತಗುಲಿ ಸುಮಾರು 20 ಸಾವಿರ ಮೌಲ್ಯದ ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿ, ಟ್ರ್ಯಾಕ್ಟರ್ ಭಾಗಶಃ ಸುಟ್ಟುಹೋದ ಘಟನೆ ಕೆ.ಆರ್.ಪೇಟೆ ತಾಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದ್ದು, ಪ್ರತಿಭಟನೆ ಕೈಗೊಂಡಿದ್ದರು.[ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ, 26 ನವಜಾತ ಶಿಶುಗಳ ರಕ್ಷಣೆ]
ವಿದ್ಯುತ್ ತಂತಿಗಳು ಜೋತು ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದ್ದರೂ ಸೆಸ್ಕ್ ( Calcutta Electric Supply Corporation) ಅಧಿಕಾರಿಗಳು ಅದರತ್ತ ಗಮನಹರಿಸಿ ದುರಸ್ತಿಗೊಳಿಸದ ಕಾರಣ ಈ ಘಟನೆ ಸಂಭವಿಸಿದೆ ಎಂದು 70ಸಾವಿರ ರು ನಷ್ಟ ಅನುಭವಿಸಿದ ರೈತ ರಾಜೇಗೌಡ ಅವರು ಇದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ದೂರಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ತಂತಿಗಳು ಎತ್ತಿನ ಬಂಡಿ, ಲಾರಿ, ಬಸ್ಸುಗಳು, ಶಾಲಾ ವಾಹನಗಳು ಚಲಿಸಲು ಸಾಧ್ಯವಾಗುವುದಿಲ್ಲ. ನಿತ್ಯ ಶಾಲಾ ವಾಹನಗಳು ಇಲ್ಲಿ ಓಡಾಡುತ್ತವೆ. ರೈತರ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್ ಗಳು ಓಡಾಡಬೇಕಾಗಿರುವುದರಿಂದ ತಕ್ಷಣ ಈ ವಿದ್ಯುತ್ ಕಂಬಗಳನ್ನು ಬದಲಿಸಬೇಕು. ಇಲ್ಲವೇ ಎತ್ತರದ ಕಂಬಗಳನ್ನು ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.[ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ]
ಸ್ಥಳಕ್ಕಾಗಮಿಸಿದ ಪಿಎಸ್ಐ ವಿನಯ್ ಅವರು ಪ್ರತಿಭಟನಾಕಾರರನ್ನು ಮನವೊಲಿಸಿ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದ ನಂತರ ಪ್ರತಿಭಟಕಾರರು ಪ್ರತಿಭಟನೆ ಕೈಬಿಡಲಾಯಿತು.