ಇನ್ಮುಂದೆ ಈ ಯೋಜನೆಯಡಿ ದಿವ್ಯಾಂಗರಿಗೆ ಉಚಿತ ರೈಲು ಪ್ರಯಾಣ: ಗಮನಿಸಿ, ಬೆಂಗಳೂರು ಸೇರಿ ಈ ಭಾಗದ ರೈಲುಗಳ ಸಮಯ ಬದಲು
ಭಾರತೀಯ ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣಿಸುವ ದಿವ್ಯಾಂಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಿದೆ. ಮಾನ್ಯತೆ ಪಡೆದ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿ ಹೊಂದಿರುವ ದಿವ್ಯಾಂಗರು ಇನ್ಮುಂದೆ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಕಾಯ್ದಿರಿಸದ ದಿವ್ಯಾಂಗಜನ ಬೋಗಿಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಪ್ರಯಾಣಿಸಬಹುದಾಗಿದೆ.
ಕೇಂದ್ರ ಸರ್ಕಾರದ ಅಂಗವಿಕಲರ ಸಬಲೀಕರಣ ಇಲಾಖೆಯಿಂದ ವಿತರಿಸಲ್ಪಟ್ಟ ಮಾನ್ಯ ಯುಡಿಐಡಿ ಕಾರ್ಡ್ ಅಥವಾ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅರ್ಹತೆ ಹೊಂದಿರುವ ವ್ಯಕ್ತಿಗಳನ್ನು, ನಿಗದಿತ ಬೋಗಿಗಳಲ್ಲಿ ಅಧಿಕೃತ ಪ್ರಯಾಣಿಕರೆಂದು ಪರಿಗಣಿಸಲಾಗುವುದು ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಸೌಲಭ್ಯವು ದಿವ್ಯಾಂಗಜನರ ವಿಭಾಗವನ್ನು ಹೊಂದಿರುವ ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ ಮತ್ತು ಲಗೇಜ್-ಕಮ್-ಸೆಕೆಂಡ್ ಕ್ಲಾಸ್ ಬೋಗಿಗಳಲ್ಲಿ ಲಭ್ಯವಿರುತ್ತದೆ. ಈ ಬೋಗಿಗಳಲ್ಲಿ ಅನಧಿಕೃತ ಪ್ರಯಾಣಿಕರು ಕಂಡುಬಂದರೆ, ರೈಲ್ವೆ ಕಾಯ್ದೆ 1989ರ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.
ಅರ್ಹ ದಿವ್ಯಾಂಗರಿಗೆ ಮಾತ್ರ ಈ ಸೀಟುಗಳು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು ಎಲ್ಲ ವಲಯ ರೈಲ್ವೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇ-ಟಿಕೆಟಿಂಗ್ ಫೋಟೋ ಗುರುತಿನ ಚೀಟಿ ಬಳಸಿ ಆನ್ಲೈನ್ ಮೂಲಕವೂ ಪ್ರಯಾಣ ರಿಯಾಯಿತಿ ಪಡೆಯಬಹುದು.
ಬೆಂಗಳೂರು ರೈಲುಗಳ ವೇಳಾಪಟ್ಟಿ ಮತ್ತು ಸಮಯ ಬದಲಾವಣೆ
ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ಬೆಂಗಳೂರು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಕೆಳಗಿನ ರೈಲುಗಳ ಹೊಸ ಸಮಯವು ಆಯಾ ದಿನಾಂಕಗಳಿಂದ ಜಾರಿಗೆ ಬರಲಿದೆ:
1. ದಿನಾಂಕ 25.07.2026 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 20693 ಜೋಧ್ಪುರ-ಕೆಎಸ್ಆರ್ ಬೆಂಗಳೂರು ದ್ವಿ-ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಘಟಪ್ರಭಾ ನಿಲ್ದಾಣಕ್ಕೆ 08:43/08:45 ಗಂಟೆಯ ಬದಲಾಗಿ 08:28/08:30 ಗಂಟೆಗೆ ಹಾಗೂ ಬೆಳಗಾವಿ ನಿಲ್ದಾಣಕ್ಕೆ 09:50/09:55 ಗಂಟೆಯ ಬದಲು 09:35/09:40 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.
2. ದಿನಾಂಕ 25.07.2026 ರಿಂದ, ರೈಲು ಸಂಖ್ಯೆ 20686 ಕೆಎಸ್ಆರ್ ಬೆಂಗಳೂರು-ಗಾಂಧಿಧಾಮ್ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಬೆಳಗಾವಿ ನಿಲ್ದಾಣಕ್ಕೆ 10:05/10:10ರ ಬದಲಾಗಿ 09:35/09:40 ಗಂಟೆಗೆ ಬರಲಿದೆ.
3. ದಿನಾಂಕ 26.07.2026 ರಿಂದ, ರೈಲು ಸಂಖ್ಯೆ 16209 ಅಜ್ಮೀರ್-ಮೈಸೂರು ದ್ವಿ-ಸಾಪ್ತಾಹಿಕ ಎಕ್ಸ್ಪ್ರೆಸ್ ಬೆಳಗಾವಿ ನಿಲ್ದಾಣದಲ್ಲಿ 09:45/09:50ರ ಬದಲು 09:35/09:40 ಗಂಟೆಗೆ ಕಾರ್ಯಾಚರಣೆ ನಡೆಸಲಿದೆ.
4. ದಿನಾಂಕ 27.07.2026 ರಿಂದ, ರೈಲು ಸಂಖ್ಯೆ 16531 ಅಜ್ಮೀರ್-ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ಬೆಳಗಾವಿ ನಿಲ್ದಾಣದಲ್ಲಿ 09:45/09:50ರ ಬದಲಾಗಿ 09:35/09:40 ಗಂಟೆಗೆ ಆಗಮಿಸಿ ನಿರ್ಗಮಿಸುತ್ತದೆ.
5. ದಿನಾಂಕ 29.07.2026 ರಿಂದ, ರೈಲು ಸಂಖ್ಯೆ 16533 ಜೋಧ್ಪುರ-ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ಬೆಳಗಾವಿಗೆ 09:45/09:50ರ ಬದಲು 09:35/09:40 ಗಂಟೆಗೆ ಬರಲಿದೆ.
6. ದಿನಾಂಕ 25.07.2026 ರಿಂದ, ರೈಲು ಸಂಖ್ಯೆ 11097 ಪುಣೆ-ಎರ್ನಾಕುಲಂ ಸಾಪ್ತಾಹಿಕ ಎಕ್ಸ್ಪ್ರೆಸ್ ಲೋಂಡಾ ನಿಲ್ದಾಣದಲ್ಲಿ 07:58/08:00 ಗಂಟೆಯ ಬದಲಾಗಿ 08:20/08:30 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ.
ಜನ ವಿಶ್ವಾಸ್ ಕಾಯ್ದೆ: ರೈಲ್ವೆ ದಂಡ ನಿಯಮಗಳಲ್ಲಿ ಬದಲಾವಣೆ
ಜನ ವಿಶ್ವಾಸ್ ಕಾಯ್ದೆ 2026ರ ಅನ್ವಯ 1989ರ ರೈಲ್ವೆ ಕಾಯ್ದೆಯ ಹಲವು ವಿಧಿಗಳನ್ನು ತಿದ್ದುಪಡಿ ಮಾಡಲಾಗಿದೆ. ಈ ನೂತನ ಪರಿಷ್ಕೃತ ನಿಯಮಗಳು ಕೇಂದ್ರ ಸರ್ಕಾರದ ಪ್ರತ್ಯೇಕ ಅಧಿಸೂಚನೆ ಮೂಲಕ 2026ರ ಜುಲೈ 1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ನಿಯಮಗಳ ಅಡಿ ರೈಲ್ವೆ ದಂಡ ನಿಯಮ ಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ನಿರ್ದಿಷ್ಟ ದಂಡ ವಿಧಿಸಲಾಗುತ್ತದೆ.
ಪ್ರತಿಯೊಬ್ಬರೂ ಮಾನ್ಯವಾದ ಟಿಕೆಟ್ ಅಥವಾ ಪಾಸ್ನೊಂದಿಗೆ ಪ್ರಯಾಣಿಸುವ ಮೂಲಕ ರೈಲ್ವೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ತಪಾಸಣೆ ವೇಳೆ ಸಹಕರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.












Click it and Unblock the Notifications