ಜನಾರ್ದನ ರೆಡ್ಡಿ ಸಹೋದರನಿಗೆ ಸೋಲುಣಿಸಿದ ಪಕ್ಷೇತರ ಅಭ್ಯರ್ಥಿ!
ಬೆಂಗಳೂರು, ಮೇ 13; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಅಚ್ಚರಿಯ ವಿಚಾರಗಳಿವೆ. ಹರಪನಹಳ್ಳಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಎರಡು ರಾಷ್ಟ್ರೀಯ ಪಕ್ಷ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಸೋಲುಣಿಸಿದ್ದಾರೆ.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದೆ. ಪಕ್ಷೇತರ ಅಭ್ಯರ್ಥಿ ಎಂ. ಪಿ. ಲತಾ ಮಲ್ಲಿಕಾರ್ಜುನ 69152 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಗೆ ಸೋಲುಣಿಸಿದ್ದಾರೆ.

ಕರ್ನಾಟಕ ಉಪ ಮುಖ್ಯಮಂತ್ರಿಯಾಗಿದ್ದ, ರಾಜ್ಯ ರಾಜಕೀಯ ಸರಳ ವ್ಯಕ್ತಿತ್ವದ ಜನತಾ ಪರಿವಾರದ ನಾಯಕ ದಿವಂಗತ ಎಂ. ಪಿ. ಪ್ರಕಾಶ್ ಪುತ್ರಿ ಎಂ. ಪಿ. ಲತಾ ಮಲ್ಲಿಕಾರ್ಜುನ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಎನ್. ಕೊಟ್ರೇಶಿಗೆ ಪಕ್ಷ ಟಿಕೆಟ್ ನೀಡಿತ್ತು.
ಅಸಮಾಧಾನಗೊಂಡಿದ್ದ ಎಂ. ಪಿ. ಲತಾ ಮಲ್ಲಿಕಾರ್ಜುನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ ಅವರ ಮನವೊಲಿಕೆಗೆ ಮುಂದಾಗಿತ್ತು. ಆದರೆ ಅವರು ಸಂಧಾನಕ್ಕೆ ಒಪ್ಪದೇ ಕಣದಲ್ಲಿ ಉಳಿದಿದ್ದರು. ಚುನಾವಣಾ ಆಯೋಗದಿಂದ 'ಲೇಡಿ ಪರ್ಸ್ ಚಿಹ್ನೆ' ಪಡೆದಿದ್ದರು.
ಎಂ. ಪಿ. ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ ನಾಯಕರ ಮನವೊಲಿಕೆ ಒಪ್ಪದ ಕಾರಣ ಪಕ್ಷ ಅವರನ್ನು ಉಚ್ಛಾಟನೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಚುನಾವಣೆಯಲ್ಲಿಯೂ ಅವರು ಜಯಗಳಿಸಿದ್ದಾರೆ.
ಪಡೆದ ಮತಗಳ ವಿವರ; ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ 55690 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಎನ್. ಕೊಟ್ರೇಶಿ 44408 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ನ ಎನ್. ಎಂ. ನೂರು ಅಹ್ಮದ್ 705 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿ ಎಂ. ಪಿ. ಲತಾ ಮಲ್ಲಿಕಾರ್ಜುನ 69152 ಮತಗಳನ್ನು ಪಡೆದು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ ಎಂ. ಪಿ. ಪ್ರಕಾಶ್ ಅವರ ತವರು ಕ್ಷೇತ್ರ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಎಂ. ಪಿ. ಪ್ರಕಾಶ್ ಪುತ್ರಿಯರಾದ ಎಂ. ಪಿ. ಲತಾ, ಎಂ. ಪಿ. ವೀಣಾ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಒಬ್ಬರಿಗೆ ಟಿಕೆಟ್ ನೀಡುತ್ತೇವೆ ಯಾರಿಗೆ ಎಂದು ತೀರ್ಮಾನಿಸಿ ಎಂದು ಹೇಳಿತ್ತು. ಆದರೆ ಇಬ್ಬರ ನಡುವೆ ಒಮ್ಮತ ಮೂಡಲಿಲ್ಲ. ಅಂತಿಮವಾಗಿ ಪಕ್ಷ ಎನ್. ಕೊಟ್ರೇಶಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತು.
ಬಿಜೆಪಿಯ ಜಿ. ಕರುಣಾಕರ ರೆಡ್ಡಿ ಜನಾರ್ದನ ರೆಡ್ಡಿಯ ಹಿರಿಯ ಸಹೋದರ. ಹರಪನಹಳ್ಳಿಯಲ್ಲಿ ಮೊದಲ ಬಾರಿಗೆ ಅವರು 2008ರಲ್ಲಿ ಗೆದ್ದರು. ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರು ಆದರು. ಆದರೆ 2013ರಲ್ಲಿ ಕಾಂಗ್ರೆಸ್ನ ಎಂ. ಪಿ. ರವೀಂದ್ರ ವಿರುದ್ಧ ಸೋತರು. 2018ರಲ್ಲಿ ಮತ್ತೆ ಕರುಣಾಕರ ರೆಡ್ಡಿ ಜಯಗಳಿಸಿದರು. ಈ ಸೋಲು ಕಂಡಿದ್ದಾರೆ.












Click it and Unblock the Notifications