ನಟರ ಮನೆ ಮೇಲೆ ಐಟಿ ದಾಳಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದ್ದೇನು?
Recommended Video

ಬೆಂಗಳೂರು, ಜನವರಿ 5: ಕನ್ನಡದ ಕೆಲವು ಪ್ರಮುಖ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕಪತ್ರ ಪರಿಶೀಲನೆ ನಡೆಸಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ.
ಕೆಲವು ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ದೊಡ್ಡ ಬಜೆಟ್ ಸಿನಿಮಾ ಮಾಡುತ್ತಿರುವ ನಿರ್ಮಾಪಕರು ಮತ್ತು ನಟರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ದಾಳಿಯ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ.
ಆದರೆ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿನಿಮಾ ನಟರ ಮೇಲಿನ ಐಟಿ ದಾಳಿ ಕೇಂದ್ರದ ತೆರಿಗೆ ಇಲಾಖೆ ನಿರ್ಧಾರ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದಿದ್ದಾರೆ.
ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಸುದೀಪ್ ಮತ್ತು ಯಶ್ ಹಾಗೂ ರಾಕ್ಲೈನ್ ವೆಂಕಟೇಶ್ ಸೇರಿದಂತೆ ವಿವಿಧ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ.

ವಿವರ ಕಲೆಹಾಕಿರುತ್ತಾರೆ
ತೆರಿಗೆ ವಂಚನೆ ಮತ್ತು ತೆರಿಗೆ ಪಾವತಿಯ ಮೇಲೆ ಅನುಮಾನ ಮೂಡಿದರೆ ದಾಳಿ ನಡೆಸಲಾಗುತ್ತದೆ. ಎಲ್ಲ ವಿವರ ಕಲೆಹಾಕಿದ ಬಳಿಕವಷ್ಟೇ ಅವರು ದಾಳಿಗೆ ಮುಂದಾಗುತ್ತಾರೆ. ಆದಾಯ ತೆರಿಗೆ ದಾಳಿ ನಡೆಸುವುದು ಕೇಂದ್ರದ ಇಲಾಖೆಯ ನಿರ್ಧಾರವಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮೂರು ದಿನಗಳ ಐಟಿ ದಾಳಿ, ಅಧಿಕಾರಿಗಳ ಕೈ ಖಾಲಿ ಖಾಲಿ

ಕಾನೂನಾತ್ಮಕವಾಗಿದ್ದರೆ ತಪ್ಪಿಲ್ಲ
'ದಾಳಿ ನಡೆಸಿರುವುದರ ಉದ್ದೇಶ ನನಗೆ ತಿಳಿದಿಲ್ಲ. ಅವರು ತೆರಿಗೆ ಕಟ್ಟದೆ ಇರುವ ಕಾರಣಕ್ಕೆ ದಾಳಿ ನಡೆಸಿದ್ದರೆ ಅದು ಸರಿ. ಬೇರೆ ಯಾವುದಾದರೂ ಉದ್ದೇಶದಿಂದ ನಡೆದಿದ್ದರೆ ತಪ್ಪಾಗುತ್ತದೆ. ಯಾರ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಹಿಂದಿನಿಂದಲೂ ನಾವು ಇದನ್ನು ಹೇಳಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಮತ್ತು ಅದರ ಬೆಂಬಲಿಗರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಈ ದಾಳಿಗಳು ಕಾನೂನಾತ್ಮಕವಾಗಿ ನಡೆದರೆ ತಪ್ಪಿಲ್ಲ. ಆದರೆ, ಒಂದು ವರ್ಗಕ್ಕೆ ಸೀಮಿತವಾಗಿರಬಾರದು' ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
|
ಐಟಿ ಇಲಾಖೆಗೆ ಅಧಿಕಾರವಿದೆ
ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದ್ದರೆ ಸಂಬಂಧಿತ ಲೆಕ್ಕಪತ್ರಗಳ ಪರಿಶೀಲನೆ ನಡೆಸುವ ಅಧಿಕಾರ ಐಟಿ ಇಲಾಖೆಗೆ ಇದೆ. ಅದನ್ನು ಗೌರವಿಸೋಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆದರೆ, ಮೋದಿ ಸರ್ಕಾರದಲ್ಲಿ ಐಟಿ ಇಲಾಖೆಯ ಕಾರ್ಯಶೈಲಿಯನ್ನು ಗಮನಿಸಿದರೆ ಅದು ನಡೆಸುತ್ತಿರುವ ದಾಳಿಯ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ಯಾರಿಗೂ ತೊಂದರೆಯಾಗುವುದಿಲ್ಲ
ಆದಾಯ ತೆರಿಗೆಯವರು ತಮ್ಮ ಕೆಲಸ ಮಾಡುತ್ತಾರೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಸಚಿವೆ ಜಯಮಾಲಾ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕಲಾವಿದರು ಪ್ರಾಮಾಣಿಕರಿದ್ದಾರೆ. ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ, ಚೊಂಬು ಇರಬಹುದು. ನಿಯಮದ ಪ್ರಕಾರ ಎಲ್ಲರೂ ತೆರಿಗೆ ಕಟ್ಟಬೇಕು. ಎಲ್ಲ ಕಲಾವಿದರೂ ಕಟ್ಟಿರುತ್ತಾರೆ ಎಂದಿದ್ದಾರೆ.












Click it and Unblock the Notifications