ರಾಜಕೀಯದಲ್ಲಿ ಪ್ರಾಮಾಣಿಕತೆ: ಸಿದ್ದರಾಮಯ್ಯ ಹೇಳಿಕೆಯಲ್ಲಿ 108 ಅರ್ಥ!
Recommended Video

ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಅಲ್ಲ.. ರಾಜಕಾರಣ ನಿಂತ ನೀರಲ್ಲ ಎನ್ನುವ ಪದವನ್ನು ಅದ್ಯಾವ ಪುಣ್ಯಾತ್ಮ ಹೇಳಿದ್ದಾನೋ? ಯಾಕೆಂದರೆ, ಬೆಳಗ್ಗೆಯಿಂದ ಸಾಯಂಕಾಲದವರೆಗೆ ಬಿಜೆಪಿ, ಕಾಂಗ್ರೆ,ಸ್, ಜೆಡಿಎಸ್ ಎಂದು ಕಿತ್ತಾಡುವ ರಾಜಕಾರಣಿಗಳು, ರಾತ್ರಿ ಮಿತ್ರರಾಗುವ ಉದಾಹರಣೆಗಳು ಬೇಕಾದಷ್ಟಿವೆ..
ಆದರೆ, ಈ ರಾಜಕಾರಣಿಗಳ ಬೆಳಗ್ಗೆಯಿಂದ ಸಾಯಂಕಾಲದದ ವರೆಗಿನ ಏನು ವರಸೆಯಿದೆಯೋ, ಅದನ್ನು ನಂಬಿಕೊಂಡು 24X7 ಕಿತ್ತಾಡಿಕೊಳ್ಳುವವರು, ಅವರ ಹಿಂಬಾಲಕರು, ಅಭಿಮಾನಿಗಳು, ಜನಸಾಮಾನ್ಯರು. ನಮ್ಮೀ ರಾಜಕಾರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತುಗಳು ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಎರಡು ದಿನದ ಹಿಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಎಂ, ರಾಜಕಾರಣದಲ್ಲಿ ಯಾರೂ ನೂರಕ್ಕೆ ನೂರು ಪ್ರಾಮಾಣಿಕನಾಗಿರಲು ಸಾಧ್ಯವೇ ಎಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಈ ಹೇಳಿಕೆ ಹಲವು ಆಯಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಜನಸಾಮಾನ್ಯರು ಸರಿಯಾದ ಮಾತನ್ನೇ ಮುಖ್ಯಮಂತ್ರಿಗಳು ಹೇಳಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದರೆ ಆಶ್ಚರ್ಯವಿಲ್ಲ. ಯಾಕೆಂದರೆ, ಕೆಲವೊಂದು ಅಪವಾದಗಳನ್ನು ಬಿಟ್ಟು, ರಾಜಕಾರಣ ಎನ್ನುವುದು ದುಡ್ಡು ಮಾಡಲು ಇರುವ ಪ್ರಮುಖ ದಾರಿ ಎಂದು ಈಗಾಗಲೇ ಜನಸಾಮಾನ್ಯರು ಗುಮಾನಿಸಿಕೊಂಡೇ ನೋಡುತ್ತಿದ್ದಾರೆ.
ರಾಜಕಾರಣಕ್ಕೆ ಇಳಿದ ಮೇಲೆ ಚುನಾವಣೆ ಮತ್ತು ಇತರ ಪ್ರಮುಖ ವಿಚಾರಗಳಲ್ಲಿ ಮೇಲುಗೈ ಸಾಧಿಸಲೇ ಬೇಕಾಗುತ್ತದೆ ಎಂದು ಸಿದ್ದರಾಮಯ್ಯನವರ ಹೇಳಿಕೆ, ಚುನಾವಣೆಯ ಈ ಸಂದರ್ಭದಲ್ಲಿ ಹಲವು ರಾಜಕೀಯ ಲೆಕ್ಕಾಚಾರಕ್ಕೆ ಅನುವು ಮಾಡಿಕೊಟ್ಟಿದೆ. ಸಿಎಂ ಹೇಳಿಕೆಯ ಹಿಂದೆ 'ಏನೋ ಐತೆ' ಎಂದು ಅನುಮಾನಿಸುವಂತಾಗಿದೆ, ಮುಂದೆ ಓದಿ...

ನಾನು ಕೂಡಾ ನೂರಕ್ಕೆ ನೂರರಷ್ಟು ಪ್ರಾಮಾಣಿಕನಲ್ಲ
ನಾನು ಕೂಡಾ ನೂರಕ್ಕೆ ನೂರರಷ್ಟು ಪ್ರಾಮಾಣಿಕನಲ್ಲ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯಾರೂ ಪ್ರಾಮಾಣಿಕನಾಗಿರಲು ಸಾಧ್ಯವೇ ಇಲ್ಲ. ನನ್ನ ಹೇಳಿಕೆಯನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಿ, ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಟೆನ್ ಪರ್ಸೆಂಟ್ ಸರಕಾರ, ಸಿದ್ದರಾಮಯ್ಯ ಸೀದಾ ರೂಪಯ್ಯಾ
ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕರ್ನಾಟಕದಲ್ಲಿ ಸಾಲುಸಾಲು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ, ಟೆನ್ ಪರ್ಸೆಂಟ್ ಸರಕಾರ, ಸಿದ್ದರಾಮಯ್ಯ ಸೀದಾ ರೂಪಯ್ಯಾ ಎಂದು ಹೇಳಿ ಹೋದ ನಂತರ, ಮುಖ್ಯಮಂತ್ರಿಗಳು ಈ ರೀತಿ, ಮೇಲಿನಂತೆ ಇಂದಿನ ರಾಜಕೀಯ ವ್ಯವಸ್ಥೆಯನ್ನು ವಿವರಿಸಿದ್ದು ಗಮನಿಸಬೇಕಾದ ಅಂಶ.

ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲೇಬೇಕಾಗುತ್ತದೆ
ಎಲ್ಲರೂ, ಎಲ್ಲದರಲ್ಲೂ ಪ್ರಾಮಾಣಿಕತನದಿಂದ ಇರಲು ಸಾಧ್ಯವಿಲ್ಲ, ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲೇಬೇಕಾಗುತ್ತದೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಒಂದು ವೇಳೆ ಅತಂತ್ರ ಫಲಿತಾಂಶ ಎದುರಾದರೆ, ಸಮ್ಮಿಶ್ರ ಸರಕಾರ ರಚಿಸುವ ಲೆಕ್ಕಾಚಾರ ಏನಾದರೂ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆಯೋ ಎನ್ನುವ ಅನುಮಾನ ಹುಟ್ಟುಹಾಕಿದೆ.

ನಾವು ಬೆಳೆದು ಬಂದ ರೀತಿ, ಪ್ರತಿಪಾದಿಸುತ್ತಿರುವ ಸಿದ್ದಾಂತ
ನಾವು ಬೆಳೆದು ಬಂದ ರೀತಿ, ಪ್ರತಿಪಾದಿಸುತ್ತಿರುವ ಸಿದ್ದಾಂತಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿದ್ದರೂ, ನೂರಕ್ಕೆ ನೂರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆಂದು ದೇಶದ ಯಾವುದೇ ರಾಜಕಾರಣಿ ಹೇಳಲು ಸಾಧ್ಯವಿಲ್ಲ ಎನ್ನುವ ತಮ್ಮ ಅನುಭವದ ಮಾತನ್ನೂ ಸಿಎಂ ಹಂಚಿಕೊಂಡಿದ್ದಾರೆ.

ಸಿಎಂ ಹೇಳಿಕೆಯ ಹಿಂದೆ 'ಏನೋ ಐತೆ' ಎಂದು ಅನುಮಾನಿಸುವಂತಾಗಿದೆ
ಚುನಾವಣಾ ಹೊಸ್ತಿಲಲ್ಲಿ ಮತ್ತು ಪ್ರಾಮಾಣಿಕತೆಯ ವಿಚಾರದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಸತ್ಯಕ್ಕೆ ಹತ್ತಿರವಾದದ್ದು ಎನ್ನುವುದನ್ನು ಒಪ್ಪಿಕೊಳ್ಳಬಹುದಾದರೂ, ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬೇಕು ಎನ್ನುವ ಸಿಎಂ ಹೇಳಿಕೆಯ ಹಿಂದೆ 'ಏನೋ ಐತೆ' ಎಂದು ಅನುಮಾನಿಸುವಂತಾಗಿದೆ.












Click it and Unblock the Notifications