ಕುಮಾರಸ್ವಾಮಿಯ ಸಂಪುಟದಲ್ಲಿ 'ಜೆಡಿಎಸ್ ಭಿನ್ನಮತೀಯ'ರಿಗೆ ಸ್ಥಾನವಿಲ್ಲ
Recommended Video
ಬೆಂಗಳೂರು, ಮೇ 21 : ಜೆಡಿಎಸ್ ನಿಂದ ಹೊರದಬ್ಬಿಸಿಕೊಂಡು, ಕಾಂಗ್ರೆಸ್ ಸೇರಿ ಟಿಕೆಟ್ ಪಡೆದುಕೊಂಡಿದ್ದ ಏಳು ಭಿನ್ನಮತೀಯರಲ್ಲಿ ಕೇವಲ ಮೂವರು ಮಾತ್ರ ಜಯಿಸಿದ್ದಾರೆ. ಅವರಿಗೆ ಮತ್ತೆ ಜೆಡಿಎಸ್ ನೇತೃತ್ವದ ಮೈತ್ರಿಕೂಟದ ಸರಕಾರದಲ್ಲಿ ಸಂಪುಟದಲ್ಲಿ ಸ್ಥಾನ ಸಿಗುವುದಾ?
ಸದ್ಯಕ್ಕೆ ಎಲ್ಲರ ಕಣ್ಣು ಇವರ ಮೇಲಿದೆ. ಒಂದು ವೇಳೆ ಕಾಂಗ್ರೆಸ್ ಬಹುಮತ ಗಳಿಸಿದ್ದರೆ ಇವರಲ್ಲಿ ಮಂತ್ರಿ ಪದವಿಯ ಆಸೆ ಚಿಗುರೊಡೆದಿರುತ್ತಿತ್ತು. ಆದರೆ, ಈಗ ಇವರಿರುವುದು ತಾವು ಅತಿಯಾಗಿ ದ್ವೇಷಿಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರಕಾರದಲ್ಲಿ. ಎರಡೂ ಪಕ್ಷಗಳಿಗೆ ಈ ಮೂವರು ಬಿಸಿತುಪ್ಪದಂತೆ ಆಗಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಭವಿಷ್ಯ ಮತ್ತು ದೇವೇಗೌಡರ ಜಾಣ್ಮೆ
ಬೆಂಗಳೂರು ಜಿಲ್ಲೆಯ ಪುಲಕೇಶಿನಗರದಲ್ಲಿ ಆರ್ ಅಖಂಡ ಶ್ರೀನಿವಾಸಮೂರ್ತಿಯವರು ಜೆಡಿಎಸ್ ನ ಬಿ ಪ್ರಸನ್ನಕುಮಾರ್ ಅವರನ್ನೇ 81,626 ಮತಗಳಿಂದ ಸೋಲಿಸಿದ್ದರು. ಕುಮಾರಸ್ವಾಮಿ ವಿರುದ್ಧ ದ್ವೇಷ ಕಾರುತ್ತಿದ್ದ ಜಮೀರ್ ಅಹ್ಮದ್ ಅವರು ಚಾಮರಾಜಪೇಟೆಯಲ್ಲಿ ಬಿಜೆಪಿಯ ಎಂ ಲಕ್ಷ್ಮೀನಾರಾಯಣರ ವಿರುದ್ಧ 33.137 ಮತಗಳಿಂದ ಸೋಲಿಸಿದ್ದಾರೆ. ಭೀಮಾ ನಾಯಕ್ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಕೆ ನೇಮಿರಾಜ್ ಅವರ ವಿರುದ್ಧ 7,232 ಮತಗಳಿಂದ ಜಯಶಾಲಿಯಾಗಿದ್ದಾರೆ.
ಅಧಿಕಾರ ಹಂಚಿಕೆ ವರದಿ ಊಹಾಪೋಹ: ಕುಮಾರಸ್ವಾಮಿ
ಭಿನ್ನಮತೀಯರಲ್ಲಿ ಉಳಿದವರಾದ ಚಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲೆಯ ನೆಲಮಂಗಲದಲ್ಲಿ ಸುರೇಶ್ ಗೌಡ ವಿರುದ್ಧ 47,667 ಮತಗಳಿಂದ, ಎಚ್ ಸಿ ಬಾಲಕೃಷ್ಣ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಂಜು (ಜೆಡಿಎಸ್) ವಿರುದ್ಧ 51,425 ಮತಗಳಿಂದ, ಎಬಿ ರಮೇಶ ಬಂಡಿಸಿದ್ದೇಗೌಡ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಾಂತಯ್ಯ ವಿರುದ್ಧ 43,688 ಮತಗಳಿಂದ, ಇಕ್ಬಾಲ್ ಅನ್ಸಾರಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ಪಿ ಈಶ್ವರಪ್ಪ ಮುನವಳ್ಳಿ ವಿರುದ್ಧ 7,973 ಮತಗಳಇಂದ ಸೋಲನ್ನು ಅನುಭವಿಸಿದ್ದಾರೆ.
ಸಂಪುಟದಿಂದ ಹೊರಗಿಡುವಂತೆ ಸೂಚನೆ
ಜೆಡಿಎಸ್ ಅನ್ನೇ ಧಿಕ್ಕರಿಸಿ ಚುನಾವಣೆ ಸಮಯದಲ್ಲಿ ಭಾರೀ ಮುಜುಗರ ತಂದಿದ್ದ ಆ ಮೂವರನ್ನು ಸಂಪುಟದಿಂದ ಹೊರಗಿಡುವಂತೆ ಮತ್ತು ಯಾವುದೇ ಪ್ರಮುಖ ಜವಾಬ್ದಾರಿ ಕೊಡದಂತೆ ದೇವೇಗೌಡರು ಈಗಾಗಲೆ ಕುಮಾರಸ್ವಾಮಿಯವರಿಗೆ ಸೂಚಿಸಿದ್ದಾರೆ. ಕಾಂಗ್ರೆಸ್ ಕೂಡ ಗೆದ್ದಿರುವ ಈ ಜೆಡಿಎಸ್ ಭಿನ್ನಮತೀಯರ ಹೆಸರುಗಳನ್ನು, ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪ್ರಸ್ತಾಪಿಸಲು ಇನ್ನೂ ಹೋಗಿಲ್ಲ. ಹಾಗಾಗಿ, ಗೆದ್ದರೂ ಈ ಮೂವರದು ಸದ್ಯಕ್ಕೆ ತ್ರಿಶಂಕು ಸ್ಥಿತಿ. ಸದ್ಯಕ್ಕೆ ತೆಪ್ಪಗೆ ಇರದೆ ಬೇರೆ ಮಾರ್ಗವೇ ಇಲ್ಲ.
ಜಮೀರ್ ಮೇಲೆ ಗೌಡರ ಸಿಕ್ಕಾಪಟ್ಟೆ ಸಿಟ್ಟು
ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಡ ಗೌಡರು ಜಮೀರ್ ಅಹ್ಮದ್ ಖಾನ್ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಏಕೆಂದರೆ, ಪ್ರಚಾರದ ಸಮಯದಲ್ಲಿ ಕುಮಾರಸ್ವಾಮಿ ವಿರುದ್ಧ ಜಮೀರ್ ತಮ್ಮ ಆಕ್ರೋಶವನ್ನು ಹೊರಹಾಕುತ್ತಲೇ ಬಂದಿದ್ದರು. ಇದೇ ಕಾರಣಕ್ಕಾಗಿ ಜಮೀರ್ ಅವರನ್ನು ಹೇಗಾದರೂ ಸೋಲಿಸಲೇಬೇಕೆಂದು ಗೌಡರು ಸಾಕಷ್ಟು ಪರಿಶ್ರಮಿಸಿದ್ದರು ಮತ್ತು ತಮ್ಮ ಪ್ರತಿಷ್ಠೆಯನ್ನು ಒರೆಗೆ ಹಚ್ಚಿದ್ದರು. ಜಮೀರ್ ಕೂಡ ಈ ಯುದ್ಧವನ್ನು ತಮ್ಮ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿದ್ದರು. ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೆ ತನ್ನ ಶಿರವನ್ನು ಕತ್ತರಿಸಿ ದೇವೇಗೌಡರ ಪಾದಗಳಿಗೆ ಅರ್ಪಿಸುವುದಾಗಿ ಅಬ್ಬರಿಸಿದ್ದರು.
ಇಂಥವರನ್ನು ಅದೆಷ್ಟು ನೋಡಿಲ್ಲ ದೇವೇಗೌಡರು?
ತಮ್ಮ ರಾಜಕೀಯ ಜೀವನದಲ್ಲಿ ಇಂಥವರನ್ನು ಅದೆಷ್ಟು ನೋಡಿಲ್ಲ ದೇವೇಗೌಡರು? ಮನಸಿಗೆ ಆದ ಗಾಯವನ್ನು ಅವರು ಅಷ್ಟು ಬೇಗ ಮರೆಯುವವರೂ ಅಲ್ಲ, ಗಾಯ ಮಾಡಿದವರನ್ನು ಸುಲಭವಾಗಿ ಕ್ಷಮಿಸುವವರೂ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ರಚನೆಯಾಗುತ್ತಿದ್ದಂತೆ, ಅತ್ಯಂತ ಜಾಣ್ಮೆಯಿಂದ ದೇವೇಗೌಡರು ಬದಿಗಿ ಸರಿಸಿದ ನಾಯಕ ಯಾರು ಗೊತ್ತಾ? ಒಂದಾನೊಂದು ಕಾಲದಲ್ಲಿ ಜೆಡಿಎಸ್ ನಿಂದಲೇ ಪ್ರವರ್ಧಮಾನಕ್ಕೆ ಬಂದರೂ ನಿಚ್ಚಣಿಕೆಯನ್ನು ಒದ್ದ ಅಪಖ್ಯಾತಿಗೆ ಗುರಿಯಾಗಿರುವ ಸಿದ್ದರಾಮಯ್ಯನವರು.
ಜಮೀರ್ ನನ್ನ ಪಕ್ಕಕ್ಕೆ ಸರಿಸಿದ್ದ ಡಿಕೆಶಿ
ಬಲ್ಲ ಮೂಲಗಳ ಪ್ರಕಾರ, ಜೆಡಿಎಸ್ ಬಿಟ್ಟು ಕಾಂಗ್ರೆಸ್ಸಿಗೆ ಬಂದರೂ ಗೆದ್ದ ಭಿನ್ನಮತೀಯರಿಗೆ ಸದ್ಯದ ಸ್ಥಿತಿಯಲ್ಲಂತೂ ಮಂತ್ರಿಗಿರಿ ಸಿಗುವುದು ಕಷ್ಟಸಾಧ್ಯ. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಜಮೀರ್ ಅಹ್ಮದ್ ಸೆಂಟರ್ ಸ್ಟೇಜ್ ತೆಗೆದುಕೊಳ್ಳಲು ಯತ್ನಿಸಿದರೂ, ಅವರನ್ನು ಡಿಕೆ ಶಿವಕುಮಾರ್ ಗದರಿಸಿ ಪಕ್ಕಕ್ಕೆ ಸರಿಸಿದ್ದರು. ಅಲ್ಲದೆ, ಎರಡೂ ಪಕ್ಷಗಳ ಘಟಾನುಘಟಿ ನಾಯಕರು ಈಗಾಗಲೆ ಪಾಳೆಹಚ್ಚಿ ನಿಂತಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದರಂತೆ ಮಾಡುವುದಾಗಿ ಇವರು ಹೇಳುತ್ತಿದ್ದಾರಾದರೂ ಒಳಗಿಂದೊಳಗೇ ಕುದಿಯುತ್ತಿದ್ದಾರೆ.