ಕುಮಾರಣ್ಣ, ಬೇರೆಯವರ ಹೆಸರಲ್ಲಿ ಎಷ್ಟೂಂತಾ ಪಟಾಕಿ ಹಚ್ತೀರಾ?
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯ ಸರಕಾರದ ಮೇಲೆ ಸವಾರಿ ಮಾಡುವುದು, ಹಿಂದಿ ಹೇರಿಕೆ, ಆನೆ ತಾನು ನಡೆದಿದ್ದೇ ದಾರಿಯೆಂದು ಪ್ರಾದೇಶಿಕತೆಯನ್ನು ಕೆಣಕುವ ಕೆಲಸ ನಡೆಯುತ್ತಲೇ ಇದೆ. ಅದಕ್ಕೆ ಉದಾಹರಣೆ ಒಂದಾ..ಎರಡಾ..
ಪರಿಸ್ಥಿತಿ ಹೀಗಿರುವಾಗ ಪ್ರಾದೇಶಿಕ ಪಕ್ಷವೊಂದು ಬಲಾಢ್ಯವಾಗಿದ್ದರೆ ಮಾತ್ರ ಕೇಂದ್ರದ ರಾಜ್ಯ ವಿರೋಧಿ ನೀತಿಯನ್ನು ಹಿಮ್ಮೆಟ್ಟಿಸಲು ಸಾಧ್ಯ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಎಂದು ಇರುವುದಾದರೆ ಅದು ಜೆಡಿಎಸ್ ಮಾತ್ರ.
ಎಷ್ಟೋ ಬಾರಿ ಅನಿಸುವುದುಂಟು, ಬೇರೆ ಬೇರೆ ಪ್ರಾದೇಶಿಕ ಪಕ್ಷಗಳು ತಮ್ಮತಮ್ಮ ರಾಜ್ಯದಲ್ಲಿ ಎಷ್ಟು ಸುಧೃಡವಾಗಿದೆಯೋ ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಯಾಕಿಲ್ಲ ಎಂದು. ಅದಕ್ಕೆ ಯಾರನ್ನು ದೂಷಿಸುವುದು? ರಾಜ್ಯದ ಜನತೆಯನ್ನೋ ಅಥವಾ ಜೆಡಿಎಸ್ ಪಕ್ಷದ ಹೊಂದಾಣಿಕೆ ರಾಜಕಾರಣವನ್ನೋ?
ಇಲ್ಲಿ ಜೆಡಿಎಸ್ ಪಕ್ಷದ ಸಮಯ, ಸಂದರ್ಭ, ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜಕಾರಣದ ಬಗ್ಗೆ ಒತ್ತಿ ಹೇಳುವ ಉದ್ದೇಶವಿಲ್ಲದಿದ್ದರೂ, ದೇವೇಗೌಡರಿಂದ ಹಿಡಿದು ಕುಮಾರಸ್ವಾಮಿಯವರ ತನಕ ಈಗ ಆಗುತ್ತಿರುವುದು ಅದೇ. ಈ ವಿಚಾರವೇ ಜೆಡಿಎಸ್ಸಿಗೆ ರಾಜ್ಯದೆಲ್ಲಡೆ ತನ್ನ ಬೇರಲು ವಿಸ್ತರಿಸಲು ಸಾಧ್ಯವಾಗದೇ ಇರುವುದು ಎನ್ನುವುದು ಅತ್ಯಂತ ಸ್ಪಷ್ಟ.

ಪ್ರಾದೇಶಿಕ ಪಕ್ಷಗಳ ತಾಕತ್ ಏನು ಎನ್ನುವುದು ಇಡೀ ದೇಶಕ್ಕೆ ಪರಿಚಿತವಾಗಿದೆ
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪ್ರಾದೇಶಿಕ ಪಕ್ಷಗಳ ತಾಕತ್ ಏನು ಎನ್ನುವುದು ಇಡೀ ದೇಶಕ್ಕೆ ಪರಿಚಿತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಕೇರಳದಲ್ಲಿ ಪಿಣರಾಯಿ ವಿಜಯನ್, ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ತಮ್ಮ ಶಕ್ತಿಯನ್ನು ಪ್ರದರ್ಶಿಸಿ, ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರಕ್ಕೆ ಇಟ್ಟಿವೆ. ಇದು, ಕರ್ನಾಟಕದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?

ಕಾಂಗ್ರೆಸ್ಸಿನವರು ಮನೆಬಾಗಿಲಿಗೆ ಬಂದಿದ್ದರು ಎನ್ನುವ ಕಾರಣ ಕಿಂಗ್ ಮೇಕರ್
ಬಿಜೆಪಿ ಜೊತೆ ಸರಕಾರ ನಡೆಸಲು ಒಂದು ಸಬೂಬು, ಆಮೇಲೆ, ಕಾಂಗ್ರೆಸ್ಸಿನವರು ಮನೆಬಾಗಿಲಿಗೆ ಬಂದಿದ್ದರು ಎನ್ನುವ ಕಾರಣಗಳನ್ನು ನೀಡಿ, ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುತ್ತಿದೆಯೇ ಹೊರತು, ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಯಾವ ದೂರಗಾಮಿ ಪ್ಲ್ಯಾನ್ ಅನ್ನು ಜೆಡಿಎಸ್ ಹೊಂದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ.

ಯಾರನ್ನು ದೂರಬೇಕು, ರಾಜ್ಯದ ಜನತೆಯನ್ನೋ ಅಥವಾ ಸ್ವಯಂಕೃತ ಅಪರಾಧಗಳನ್ನೋ
ಇದಕ್ಕೆ ಯಾರನ್ನು ದೂರಬೇಕು, ರಾಜ್ಯದ ಜನತೆಯನ್ನೋ ಅಥವಾ ಸ್ವಯಂಕೃತ ಅಪರಾಧಗಳನ್ನೋ.. ತಾನು ಉರುಳಿಸಿದ್ದೇ ದಾಳ ಎಂದು ಕುಟುಂಬ ರಾಜಕಾರಣಕ್ಕೆ ಶರಣಾಗಿರುವ ಪಕ್ಷದ ಧೋರಣೆಯೇ ಜೆಡಿಎಸ್ ಪಕ್ಷ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಿನ್ನಡೆ ಅನುಭವಿಸಲು ಕಾರಣವಾಗುತ್ತಿರುವುದು ಎನ್ನುವುದು ಪಕ್ಷದ ಕಾರ್ಯಕರ್ತರ ವಲಯದಲ್ಲೇ ಕೇಳಿಬರುತ್ತಿರುವ ಮಾತು.
Recommended Video

ಕುಮಾರಣ್ಣಾ.. ಇನ್ನಾದರೂ.. ಬೇರೆಯವರ ಹೆಸರಿನಲ್ಲಿ ಪಟಾಕಿ ಹಾರಿಸುವುದನ್ನು ಬಿಡಿ
ಸಮಯ, ಸಂದರ್ಭ ಯಾವಾಗಲೂ ಹುಡುಕಿಕೊಂಡು ಬರುವುದಿಲ್ಲ, ಬಂದಾಗ ಅದನ್ನು ಬಾಚಿ ಕೊಳ್ಳಬೇಕು. ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಪ್ರಾದೇಶಿಕತೆಯ ಬಾವುಟ ಹಾರಿದೆ. ಇದು ಕರ್ನಾಟಕದಲ್ಲೂ ಸಾಧ್ಯವಿದೆ. ಕುಮಾರಣ್ಣಾ.. ಇನ್ನಾದರೂ.. ಬೇರೆಯವರ ಹೆಸರಿನಲ್ಲಿ ಪಟಾಕಿ ಹಾರಿಸುವುದನ್ನು ಬಿಡಿ.. ನಿಮ್ಮತನ ಎನ್ನುವುದು ಇರಲಿ..












Click it and Unblock the Notifications