ಬಳ್ಳಾರಿ: ಮಕ್ಕಳ ಕಳ್ಳರ ವದಂತಿ ನಂಬಿ ವ್ಯಕ್ತಿಯ ಹೊಡೆದು ಕೊಂದ ಬೃಹತ್ ಜನಸಮೂಹ
ಬೀದರ್, ಜುಲೈ 14: ಜಿಲ್ಲೆಯ ಮುರ್ಕಿ ಸಮೀಪ ಭಾರಿ ಜನಸಮೂಹ ಸೇರಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ.
ಕೊಲೆಗೆ ನಿಖರ ಕಾರಣ ತಿಳಿಬಂದಿಲ್ಲ, ಕೆಲವರು ಮಕ್ಕಳ ಕಳ್ಳರ ವದಂತಿ ಎಂದರೆ, ಇನ್ನು ಕೆಲವರು ಹುಡುಗಿ ಚುಡಾಯಿಸಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎನ್ನುತ್ತಿದ್ದಾರೆ. ಪೊಲೀಸರು ಬೇರಯದ್ದೇ ಕಾರಣ ನೀಡುತ್ತಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಮಹಾರಾಷ್ಟ್ರ-ಕರ್ನಾಟಕದ ಗಡಿಯಲ್ಲಿರುವ ಮುರ್ಕಿಗೆ ನಿನ್ನೆ ಹೈದರಾಬಾದ್ನಿಂದ ಕೆಲವರು ಬಶೀರ್ ಎಂಬಾತನ ಮನೆಗೆ ಊಟಕ್ಕೆ ಬಂದಿದ್ದರು. ಅಲ್ಲಿಂದ ವಾಪಾಸ್ ತೆರಳುವಾಗ ಬೈಕ್ ಸವಾರನೊಬ್ಬನಿಗೆ ಗುದ್ದಿ ಹಾಗೆ ಮುಂದೆ ಹೋಗಿದ್ದಾರೆ.
ಇದರಿಂದ ಕೋಪಗೊಂಡ ಜನ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ವೇಗವಾಗಿ ಹೋಗುತ್ತಿದ್ದ ಕಾರು ಆಯತಪ್ಪಿ ರಸ್ತೆ ಪಕ್ಕ ಉರುಳಿದೆ, ಆಗ ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಜನರೇ ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಸುನೀಗಿದವನನ್ನು ಆಜಾಮ್ ಎಂದು ಗುರುತಿಸಲಾಗಿದೆ.

ಸುಮಾರು 300ಕ್ಕೂ ಹೆಚ್ಚು ಜನ ಸ್ಥಳದಲ್ಲಿ ಇದ್ದು, ಭಾರಿ ಗಾತ್ರದ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿದ್ದುದು ವಿಡಿಯೋಗಳಲ್ಲಿ ದಾಖಲಾಗಿದೆ. ಇದ್ದ ಇಬ್ಬರು ಪೊಲೀಸರು ಜನರನ್ನು ನಿಯಂತ್ರಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಇನ್ಸ್ಪೆಕ್ಟರ್ ಒಬ್ಬರಂತೂ ಜನರಿಗೆ ಕೈ ಮುಗಿದು ಕಾಲಿಗೆ ಬಿದ್ದು ಹೊಡೆಯಬೇಡಿರೆಂದು ಕೇಳಿಕೊಳ್ಳುತ್ತಿರುವ ದೃಶ್ಯ ಸಹ ವಿಡಿಯೋದಲ್ಲಿ ದಾಖಲಾಗಿದೆ.
ಮತ್ತೊಂದು ಮೂಲದ ಪ್ರಕಾರ ಕಾರಿನಲ್ಲಿದ್ದವರು ಮುರ್ಕಿಯ ಶಾಲೆಯ ಬಳಿ ಮಕ್ಕಳಿಗೆ ಚಾಕೊಲೇಟ್ ನೀಡುತ್ತಿದ್ದರು, ಇದನ್ನು ಕಂಡ ಜನರು ಇವರು ಮಕ್ಕಳ ಕಳ್ಳರೆಂದು ಅವರನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ವೇಗವಾಗಿ ಬಂದ ಕಾರು ರಸ್ತೆ ಪಕ್ಕ ಆಯತಪ್ಪಿ ಬಿದ್ದ ನಂತರ ಒಳಗೆ ಸಿಕ್ಕಿಕೊಂಡ ಕೆಲವರನ್ನು ಥಳಿಸಿದ್ದಾರೆ. ಥಳಿತದಿಂದಾಗಿ ಒಬ್ಬ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಈಗಾಗಲೇ 30 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ ಈ ವಿಡಿಯೋವನ್ನು 'ಮುರ್ಕಿಯಲ್ಲಿ ಮಕ್ಕಳ ಕಳ್ಳರು' ಅಡಿಬರಹದೊಂದಿಗೆ ವಾಟ್ಸಾಪ್ ಗ್ರೂಫ್ನಲ್ಲಿ ಶೇರ್ ಮಾಡಿದ್ದ 'ಮುರ್ಕಿ ಬ್ರದರ್ಸ್' ಎಂಬ ಗ್ರೂಪಿನ ಅಡ್ಮಿನ್ ಅನ್ನು ಸಹ ಬಂಧಿಸಲಾಗಿದೆ.
ಕೆಲವೇ ದಿನಗಳ ಹಿಂದಷ್ಟೆ ಚಾಮರಾಜಪೇಟೆಯಲ್ಲಿ ಒಬ್ಬರನ್ನು ಹಾಗೂ ಕಾರವಾರದಲ್ಲಿ ಒಬ್ಬರನ್ನು ಮಕ್ಕಳ ಕಳ್ಳ ಎಂಬ ವದಂತಿಯನ್ನು ನಂಬಿ ಜನರೇ ಹೊಡೆದು ಸಾಯಿಸಿಬಿಟ್ಟಿದ್ದರು. ದೇಶದಾದ್ಯಂತ ಈ ವದಂತಿ ಈಗಾಗಲೇ 40ಕ್ಕೂ ಹೆಚ್ಚು ಜೀವಗಳನ್ನು ತೆಗೆದಿರುವುದು ಆತಂಕಕಾರಿ.












Click it and Unblock the Notifications