New Policy: ಕರ್ನಾಟಕದಲ್ಲಿ ಪರಿಸರ ಸ್ನೇಹಿ ಸಾರಿಗೆ ನೀತಿ 2025-2030 ಜಾರಿ, ಪ್ರಯೋಜನಗಳು
ಬೆಂಗಳೂರು, ಫೆಬ್ರವರಿ 15: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ 2025 ಶುಕ್ರವಾರ ತೆರೆ ಬಿದ್ದಿದೆ. ಕೈಗಾರಿಕೆ ಹೂಡಿಕೆ ವಿಚಾರದಲ್ಲಿ ರಾಜ್ಯಕ್ಕೆ ಇದೊಂದು ವರದಾನವಾಗಿದೆ. ರಾಜ್ಯ ಸರ್ಕಾರ ಮುಂದಿನ 05 ವರ್ಷದ ಗಮನದಲ್ಲಿಟ್ಟುಕೊಂಡು ಪರಿಸರ ಸ್ನೇಹಿ ಸಾರಿಗೆ ನೀತಿ 2025-2030 ಜಾರಿಗೊಳಿಸಲಾಗಿದೆ. ಇದರಿಂದ ಅಪಾರ ಹೂಡಿಕೆ, ಲಕ್ಷಗಟ್ಟಲೇ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಮಾವೇಶದಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.
ಜಾಗತಿಕ ಹೂಡಿಕೆದಾರರ ಸಮಾವೇಶದ ಕೊನೆಯ ದಿನ ಸಚಿವರು, 'ವಿದ್ಯುತ್ ಮತ್ತು ಹೈಡ್ರೋಜನ್ ಚಾಲಿತ' ವಾಹನ ತಯಾರಿಕೆ ವಲಯಕ್ಕೆ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಲಾಗುವುದು. 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ಈ ಕಾರಣದಿಂದಲೇ ಐದು ವರ್ಷಗಳ ಅವಧಿಯ ಪರಿಸರ ಸ್ನೇಹಿ ಸಾರಿಗೆ ನೀತಿಯ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

3 ಕಡೆ ಪರಿಸರಸ್ನೇಹಿ ಇಂಧನ ಕ್ಲಸ್ಟರ್
ಇದಲ್ಲದೇ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಹೊಸ ನೀತಿ ಬಗ್ಗೆ ವಿವರಿಸಿದ್ದಾರೆ. ಅದಕ್ಕಾಗಿ ಗೌರಿಬಿದನೂರು, ಧಾರವಾಡ ಮ್ತತು ಹಾರೋಹಳ್ಳಿಯಲ್ಲಿ ಪರಿಸರಸ್ನೇಹಿ ಇಂಧನ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು. ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.
ದೇಶದ ಇ.ವಿ.ವಲಯದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದೆ. ನಮ್ಮಲ್ಲಿ 2.50 ಲಕ್ಷ ಇ.ವಿ.ಚಾಲಿತ ವಾಹನಗಳಿವೆ. ಬ್ಯಾಟರಿ ಪ್ಯಾಕ್, ಕೋಶಗಳ ತಯಾರಿಕೆ, ಬಿಡಿಭಾಗಗಳ ಉತ್ಪಾದನೆ, ಒಇಎಂ, ಚಾರ್ಜಿಂಗ್, ಪರೀಕ್ಷಾರ್ಥ ಮೂಲಸೌಕರ್ಯ ಹಾಗೂ ಆರ್ & ಡಿ ಇವುಗಳಿಗೆ ಈಗಾಗಲೇ 25 ಸಾವಿರ ಕೋಟಿ ರೂ. ಬಂದಿದೆ.
ಇನ್ನೂ ಹೊಸ ನೀತಿಯಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹೈಡ್ರೋಜನ್ ಕೇಂದ್ರಗಳ ಜಾಲದ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಜೊತೆಗೆ ಈಗ ಓಡಾಡುತ್ತಿರುವ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ರೆಟ್ರೋ-ಫಿಟ್ಟಿಂಗ್ ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ವ್ಯಾಪ್ತಿಯ ಹೊರಗೆ ಕಡಿಮೆ ದೂರದಲ್ಲಿರುವ ಸೇವೆಗಳಿಗೆ ಇ.ವಿ. ಬಸ್ ಸೇವೆಗಳನ್ನು ಹೆಚ್ಚಿಸಲಾಗುವುದು. ಜತೆಗೆ ಇ-ಕಾಮರ್ಸ್ ಮತ್ತು ವಿತರಣಾ ಕಂಪನಿಗಳು ತಮ್ಮ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು 2030ರ ವೇಳೆಗೆ ಇ.ವಿ/ಹೈಡ್ರೋಜನ್ ಚಾಲಿತವಾಗಿ ಬದಲಿಸಿಕೊಳ್ಳಲು ಒತ್ತು ಕೊಡಲಾಗಿದೆ. ಅಲ್ಲದೆ ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಘನತ್ಯಾಜ್ಯ ನಿರ್ವಹಣೆಗೆ ಇರುವ ವಾಹನಗಳನ್ನು ಕೂಡ ರೂಪಾಂತರಿಸಿ ಕೊಳ್ಳುವಂತೆ ಮಾಡಲಾಗುವುದು. ಖಾಸಗಿ ಕಂಪನಿಗಳು ಮತ್ತು ಶಾಲಾವಾಹನಗಳಿಗೂ ಇದನ್ನು ಅನ್ವಯಿಸಲಾಗುವುದು ಎಂದು ಅವರು ವಿವರಿಸಿದರು.
ಇನ್ನೂ ಸಮಾವೇಶದಲ್ಲಿ ಸುಮಾರು 10 ಲಕ್ಷಕೋಟಿಗೂ ಹೂಡಿಕೆ ಹರಿದು ಬಂದಿದೆ. ಅದು ಬೆಂಗಳೂರು, ತುಮಕೂರು, ಗೌರಿಬಿದನೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಹೀಗೆ ವಿವಿಧ ಕಡೆ ಕೈಗಾರಿಕಾ ಅಭಿವೃದ್ಧಿಗೆ, ಹೊಸ ಹೊಸ ಯೋಜನೆಗಳ ಮೇಲೆ ಹೂಡಿಕೆ ಆಗಲಿದೆ. ಇದರಿಂದ ಲಕ್ಷಾಂತರ ಉದ್ಯೋಗ ಸೃಜನೆಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications