ಮೂರೂ ಬಿಟ್ಟ ಪಕ್ಷಗಳಿಂದ ಮಾನಗೆಟ್ಟ ರಾಜಕಾರಣ: ಎಎಪಿ
ಬೆಂಗಳೂರು, ಏಪ್ರಿಲ್ 02: ಕರ್ನಾಟಕದಲ್ಲಿ ಚುನಾವಣಾ ಕಾವು ಜಾಸ್ತಿಯಾಗುತ್ತಿದ್ದಂತೆಯೇ ಮೂರೂ ರಾಜಕೀಯ ಪಕ್ಷಗಳು ಮತದಾರರನನ್ನು ಒಲಿಸಿಕೊಳ್ಳಲು ವಾಮಮಾರ್ಗದಿಂದ ನಾನಾ ಕುತಂತ್ರಗಳ ಮೊರೆ ಹೊಕ್ಕಿದೆ.
ನೈತಿಕವಾಗಿ ಮತದಾರರನ್ನು ಗೆಲ್ಲಲಾಗದ ಪಕ್ಷಗಳು ಮತದಾರನಿಗೇ ಲಂಚ ಕೊಟ್ಟು ಖರೀದಿಸಲು ಯತ್ನಿಸುತ್ತಿವೆ. ಜನರ ಜ್ವಲಂತ ಸಮಸ್ಯೆಗಳನ್ನು ದಿಕ್ಕು ತಪ್ಪಿಸುವ ಏಕೈಕ ಉದ್ದೇಶದಿಂದ ಜನರನ್ನು ಜಾತಿ-ಧರ್ಮಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಸಮಾಜವನ್ನು ಒಡೆದು, ಹಣ ಹಾಗೂ ವಸ್ತುಗಳ ಅಮಿಷವೊಡ್ಡಿ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿವೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಈ ಹಿಂದೆ ಕದ್ದುಮುಚ್ಚಿ ರಾತ್ರಿ ಹೊತ್ತಲ್ಲಿ ಕಳ್ಳ ವ್ಯವಹಾರ ನಡೆಸುತ್ತಿದ್ದ ಭೃಷ್ಟ ಪಕ್ಷಗಳು ಇದೀಗ ರಾಜಾರೋಷವಾಗಿ ಹಾಡುಹಗಲೇ, ವಸ್ತುಗಳ ಮೇಲೆ ತಮ್ಮ ಭಾವಚಿತ್ರ ಮುದ್ರಿಸಿಕೊಂಡು ಮತದಾರರನ್ನು ಕೊಂಡುಕೊಳ್ಳಲು ಯತ್ನಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು. ಐದು ವರ್ಷಗಳ ಕಾಲ ಮತದಾರರನ್ನು ಸಂಪೂರ್ಣವಾಗಿ ಅಲಕ್ಷಿಸಿದ್ದ ರಾಜಕಾರಣಿಗಳು ಈಗ ಮೈಮೇಲೆ ದೆವ್ವ ಬಂದಂತೆ ಮತದಾರರನ್ನು ಕೊಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ಆಮ್ ಅದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ.

ಕಾಂಗ್ರೆಸ್ಸಿನ ಕುಕ್ಕರ್ ಭಾಗ್ಯ
ಭರ್ತಿ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸುಮಾರು 1.50 ಕೋಟಿ ರೂಪಾಯಿ ಮೌಲ್ಯದ ಕುಕ್ಕರ್ ವಿತರಿಸಲು ಹೊರಟು ಸಿಕ್ಕಿಬಿದ್ದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜರಾಜೇಶ್ವರಿನಗರದ ಕುಖ್ಯಾತ ಶಾಸಕ ಮುನಿರತ್ನಂರವರಿಗೆ ಸೇರಿದ ಗೋಡೌನ್ ಗೆ ಚುನವಣಾಧಿಕಾರಿ ಮಂಜುನಾಥ್ ಪ್ರಸಾದ್ರವರು ದಾಳಿ ನಡೆಸಿದಾಗ ಮತದಾರರಿಗೆ ಅಮಿಷವೊಡ್ಡಲು ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುಕ್ಕರ್, ಸೀರೆ ಇನ್ನಿತರ ವಸ್ತುಗಳು ಸಿಕ್ಕಿವೆ.

ಬಿಜೆಪಿ-ಜೆಡಿಎಸ್ ನಿಂದಲೂ ಅಕ್ರಮ
ಬಿಜೆಪಿಯ ಪ್ರಮುಖ ನಾಯಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮಹಾದೇವಪುರ ಕ್ಷೇತ್ರದಲ್ಲಿ ತನ್ನ ಚಿತ್ರವಿರುವ ಹೆಲ್ಮೆಟ್ ವಿತರಿಸಿ ಮತದಾರರನ್ನು ಖರೀದಿಸಲು ಯತ್ನಿಸಿರುವುದು ಕೂಡ ಮಾಧ್ಯಮಗಳು ಬೆಳಕಿಗೆ ತಂದಿವೆ.
ಕಾಂಗ್ರೆಸ್-ಬಿಜೆಪಿಗೆ ತಾನೇನೂ ಕಡಿಮೆ ಇಲ್ಲ ಎಂಬಂತೆ ಜೆಡಿಎಸ್ ಪಕ್ಷ ಕೂಡ ಸೀರೆ ಹಂಚಲು ಹೊರಟಿದ್ದು, ಹುಲಕುಂದ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಮನೆಯಿಂದ ಮತದಾರರಿಗೆ ಹಂಚಲು ತಂದಿದ್ದ 2,000 ಸೀರೆಗಳನ್ನು ಚುನಾವಣಾ ಅಯೋಗ ವಶಪಡಿಸಿಕೊಂಡಿದೆ. ಈ ರೀತಿ ಆಮಿಷವೊಡ್ಡಿ ವಾಮಮಾರ್ಗಗಳ ಮೂಲಕ ಗೆಲ್ಲಲು ಯತ್ನಿಸುತ್ತಿರುವವರ ಮೇಲೆ ಚುನಾವಣಾ ಆಯೋಗವು ರಾಜ್ಯಾದ್ಯಂತ ಸೂಕ್ತ ಪರಿಶೀಲನೆ ನಡೆಸಿ, ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಿ ಭೃಷ್ಟರನ್ನು ಹೆಡೆಮುರಿಕಟ್ಟುವ ಕೆಲಸ ಆಗಬೇಕಿದೆ.

ಮತದಾರರಿಗೆ ಅಮಿಷವೊಡ್ಡುವ ಕೀಳು ಮಟ್ಟದ ರಾಜಕೀಯ
ಇದು ಕೇವಲ ಬೆಳಕಿಗೆ ಬಂದ ಪ್ರಮುಖ ಘಟನೆಗಳಾದರೆ, ಬೆಳಕಿಗೆ ಬಾರದವು ಇನ್ನೆಷ್ಟೋ. ಈ ರೀತಿ ರಾಜಾರೋಷವಾಗಿ ಅಮಿಷ ಒಡ್ಡುವುದನ್ನು ಕಂಡರೆ ಎಲ್ಲೋ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ಮತದಾರರನ್ನು ಖರೀದಿಸಲು ಆದೇಶ ಕೊಟ್ಟಂತೆ ಕಂಡುಬರುತ್ತದೆ.
ಹಾಗೇನೂ ಇಲ್ಲವಾದಲ್ಲಿ ಮೂರು ಪಕ್ಷಗಳಿಗೆ ಕಿಂಚಿತ್ತಾದರೂ ನೈತಿಕತೆ ಇದ್ದಲ್ಲಿ, ಪ್ರಜಾಪ್ರಭುತ್ವದ ಮೇಲೆ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇದ್ದಲ್ಲಿ, ಸಿಕ್ಕಿಬಿದ್ದಿರುವ ತನ್ನ ಅಭ್ಯರ್ಥಿಗಳನ್ನು ಉಚ್ಛಾಟಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.
ಈ ಪಕ್ಷಗಳು ಕಳೆದ ಐದು ವರ್ಷಗಳಲ್ಲಿ ತಾವು ಮಾಡಿರುವ ಘನಂದಾರಿ ಕೆಲಸಗಳ ಆಧಾರದ ಮೇಲೆ ಮತ ಕೇಳಬೇಕಲ್ಲದೇ ಮತದಾರರಿಗೆ ಅಮಿಷವೊಡ್ಡುವ ಕೀಳು ಮಟ್ಟಕ್ಕೆ ಇಳಿಯಬಾರದು ಹಾಗೊಂದು ವೇಳೆ ಇದೇ ಛಾಳಿಯನ್ನು ಈ ಪಕ್ಷಗಳು ಮುಂದುವರೆಸಿದ್ದಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಜನಜಾಗೃತಿ ಮೂಡಿಸಿ ತಕ್ಕ ಪಾಠ ಕಲಿಸುವ ಕೆಲಸ ಮಾಡಲಿದೆ

ದುಷ್ಟರನ್ನು ಅಧಿಕಾರದಿಂದ ದೂರವಿಡಿ
ಮೂರೂ ಪಕ್ಷಗಳ ರಾಜಕಾರಣಿಗಳು ನಾಚಿಕೆ-ಮಾನ-ಮರ್ಯಾದೆ ಬಿಟ್ಟು ಮತದಾರರನ್ನು ಬಿಕರಿಗಿಟ್ಟ ವಸ್ತುವಿನಂತೆ ನೋಡುತ್ತಿರುವುದು ಹೇಯಕರ ಬೆಳವಣಿಗೆ. ಅಧಿಕಾರ ಸಿಕ್ಕಾಗ ಜನರ ಬಗ್ಗೆ ಚಿಂತೆ ಮಾಡದೇ, ದುರಂಹಕಾರ ಬೆಳಿಸಿಕೊಂಡು, ದುಡ್ಡು ಲೂಟಿ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಖದೀಮ ರಾಜಕಾರಣಿಗಳು ಮಾತ್ರ ಮತದಾರನಿಗೆ/ಮತಕ್ಕೆ ಮೌಲ್ಯ ನೀಡದೇ ಜನರನ್ನು ಮಾರಾಟಕ್ಕಿಟ್ಟ ವಸ್ತುವಿನಂತೆ ನೋಡುತ್ತಾರೆ. ರಾಜ್ಯದ ಹಿತಕ್ಕೆ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಇಂತಹ ದುಷ್ಟರಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ಈಗ ಜನತೆಯ ಮುಂದಿದ್ದು, ಈ ಬಾರಿ ರಾಜ್ಯದ ಜನತೆ ಸರಿಯಾಗಿ ಮತ ಚಲಾಯಿಸಿ ಭ್ರಷ್ಟರನ್ನು ಮತ್ತು ದುಷ್ಟರನ್ನು ಅಧಿಕಾರದಿಂದ ದೂರವಿಡಬೇಕಾಗಿ ಆಮ್ ಆದ್ಮಿ ಪಕ್ಷ ವಿನಂತಿ ಮಾಡಿಕೊಳ್ಳುತ್ತದೆ.












Click it and Unblock the Notifications