ಕರ್ನಾಟಕ; ಕರಾವಳಿ, ಮಲೆನಾಡಿಗೆ 5 ದಿನ ಆರೆಂಜ್ ಅಲರ್ಟ್
ಬೆಂಗಳೂರು ಜು.10: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಇದೀಗ ರಾಜ್ಯದ ಉದ್ದಗಲಕ್ಕೂ ವ್ಯಾಪ್ತಿಸುವ ಮುನ್ಸೂಚನೆ ಇದೆ. ಜುಲೈ 15ರವರೆಗೂ ರಾಜ್ಯದಲ್ಲಿ ಭಾರೀ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಆರಂಭವಾಗಿರುವ ಭಾರೀ ಮಳೆ ಮುಂದಿನ ಐದು ದಿನವೂ ಹೀಗೆ ಮುಂದುವರಿಯಲಿದೆ. ಈ ಪೈಕಿ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಭಾರೀ ಮಳೆ ಮುಂದುವರಿಯಲಿದೆ.
ರಾಯಚೂರು: 'ಮಹಾ'ಮಳೆ, ನಾರಾಯಣಪುರ ಜಲಾಶಯ ಭಾಗದ ನಿವಾಸಿಗಳಿಗೆ ಪ್ರವಾಹ ಭೀತಿ
ಜು.15ರವರೆಗೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ ಜು. 14 ರವರೆಗೆ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
ಮುನ್ಸೂಚನೆ ಪ್ರಕಾರ, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ನಿತ್ಯ 11 ಸೆಂ.ಮೀ.ನಿಂದ 20ಸೆಂ.ಮೀ.ವರೆಗೆ ಮಳೆ ಸುರಿಯಲಿದೆ. ಈ ಅವಧಿಯಲ್ಲಿ ಸಮುದ್ರ ತೀರದಲ್ಲಿ ಗಾಳಿಯ ವೇಗ ಗಂಟೆಗೆ ಸುಮಾರು 50 ಕಿ.ಮೀ.ಗೂ ಹೆಚ್ಚಿರಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೃಹತ್ ಗಾತ್ರದ ತೆರೆಗಳು ತೀರಕ್ಕೆ ಬಂದಪ್ಪಳಿಸಲಿವೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಜು.12ರಿಂದ ಭೇಟಿ
ಜು.14ರವರೆಗೆ 4ಜಿಲ್ಲೆಗೆ ಭಾರೀ ಮಳೆ
ದಕ್ಷಿಣ ಒಳನಾಡಿನ ಹಾಸನ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ. ಈ ಜಿಲ್ಲೆಗಳಿಗೆ ಜು. 14ರವರೆಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜು.13ರ ನಂತರ ರಾಜ್ಯದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಮುಂಗಾರು ಮಾರುತಗಳು ತುಸು ದುರ್ಬಲಗೊಳ್ಳಲಿವೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣದಿಂದ ಭಾರಿ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಕಳೆದ 24 ಗಂಟೆಯಲ್ಲಿ ದಾಖಲಾದ ಮಳೆ ವಿವರ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಹಿಂದಿನ 24ಗಂಟೆಗಳಲ್ಲಿ ಮಂಗಳೂರಿಗೆ 87.5 ಮಿ. ಮೀ. ಮಳೆ ಆಗಿದ್ದರೆ, ಗೋಕರ್ಣದಲ್ಲಿ 80.3 ಮಿ. ಮೀ., ಹೊನ್ನಾವರ 73.9 ಮಿ. ಮೀ., ಕಾರವಾರ 63 ಮಿ. ಮೀ. ಮಳೆ ದಾಖಲಾಗಿದೆ. ಉಳಿದ ಕೆಲವು ಕಡೆಗಳಲ್ಲಿ ಜೋರು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಸೋಮವಾರದ ಮಳೆ ದಾಖಲಾತಿ
ಸೋಮವಾರ ಸಂಜೆ 4.30ರವರೆಗೆ ರಾಜ್ಯದ ಶಿವಮೊಗ್ಗದಲ್ಲಿ 11.5 ಮಿ. ಮೀ., ಕೊಡಗು 28.29 ಮಿ. ಮೀ., ಉಡುಪಿ 35.42 ಮಿ. ಮೀ., ಉತ್ತರ ಕನ್ನಡ 17.40 ಮಿ. ಮೀ., ಬೆಂಗಳೂರು ನಗರ 3.77 ಮಿ. ಮೀ., ರಾಮನಗರ 9.33 ಮಿ. ಮೀ., ತುಮಕೂರು 2.17 ಮಿ. ಮೀ., ಚಾಮರಾಜ ನಗರ 4.17 ಮಿ. ಮೀ., ಮೈಸೂರು 10.6 ಮಿ. ಮೀ., ಮಂಡ್ಯ 9.83 ಮಿ. ಮೀ., ಬೆಳಗಾವಿ 3.63 ಮಿ. ಮೀ., ಹಾವೇರಿ 2.34 ಮಿ. ಮೀ, ಧಾರವಾಡ 3.88 ಮಿ. ಮೀ., ಹಾಸನ 9.68 ಮಿ. ಮೀ., ಚಿಕ್ಕಮಗಳೂರು 15.82 ಮಿ. ಮೀ., ದಕ್ಷಿಣ ಕನ್ನಡ 20.44 ಮಿ. ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ವರದಿ ಮಾಡಿದೆ.
ಬೆಂಗಳೂರಿಗೆ ಜಿಟಿ ಜಿಟಿ ಮಳೆ
ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋನೆ ರೂಪದಲ್ಲಿ ಸುರಿಯುತ್ತಿದ್ದ ಮಳೆ ಶನಿವಾರದಿಂದ ಚುರುಕಾಗಿದ್ದು, ಆಗಾಗ ಜೋರಾಗಿ ಅಬ್ಬರಿಸುತ್ತಿದೆ. ಇಡೀ ದಿನ ಬಿಸಿಲಿನ ದರ್ಶನವೇ ಆಗಿಲ್ಲ. ಎಲ್ಲೆಡೆ ತಂಪು ವಾತವರಣ ಸೃಷ್ಟಿಯಾಗಿದ್ದು, ತಾಪಮಾನದಲ್ಲಿ ಇಳಿಕೆ ಆಗಿದೆ. ನಗರದಲ್ಲಿ ಇದೇ ರೀತಿಯ ವಾತಾವರಣ ಜು. 15ರವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಈ ವೇಳೆ ಗರಿಷ್ಠ ತಾಪಮಾನ 27 ಡಿ. ಸೆ. ಹಾಗೂ ಕನಿಷ್ಠ ತಾಪಮಾನ 20 ಡಿ.ಸೆ.ಇರಲಿದೆ ಎಂದು ಮನ್ಸೂಚನೆ ನೀಡಲಾಗಿದೆ.
Recommended Video