Karnataka Rain: ಕರಾವಳಿಗೆ ಮತ್ತೆ 3 ದಿನ ಮಳೆ, ಯೆಲ್ಲೋ ಅಲರ್ಟ್, ಒಳನಾಡಿನ ಹವಾಮಾನ ವರದಿ
ಬೆಂಗಳೂರು, ಆಗಸ್ಟ್ 01: ಕರ್ನಾಟಕದಾದ್ಯಂತ ವಾರಗಟ್ಟಲೆ ಸುರಿದ ಮುಂಗಾರು ಮಳೆ ಮತ್ತೆ ಕರಾವಳಿ ಭಾಗದಲ್ಲಿ ಚುರುಕಾಗಲಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಾಡಿದ್ದು ಗುರುವಾರದಿಂದ ಮೂರು ದಿನ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಅತ್ಯಧಿಕ ಧಾರಾಕಾರ ಮಳೆ ದಾಖಲಾಗಿತ್ತು. ಒಳನಾಡಿನ ಜಿಲ್ಲೆಗಳಲ್ಲಿ ಸಹ ಎರಡು ವಾರ ಬಿಟ್ಟು ಬಿಡದೇ ಜಡಿ ಮಳೆ ಆವರಿಸಿಕೊಂಡಿತ್ತು. ಕಳೆದ ಐದಾರು ದಿನಗಳಿಂದ ಮಳೆ ಪ್ರಮಾಣ ತುಸು ಕಡಿಮೆ ಆಗಿತ್ತು. ಇದೀಗ ಮತ್ತೆ ಮಳೆಯಾರ್ಭಟ ವಾತಾವರಣ ಕಂಡು ಬರುವ ಸಾಧ್ಯತೆ ಇದೆ.

ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳ ವ್ಯಾಪ್ತಿಯ ಹಲವೆಡೆ ಗುರುವಾರ ಜುಲೈ 03ರಿಂದ ಅತ್ಯಧಿಕ ಮಳೆ ಬರುವ ಸಾಧ್ಯತೆ ಇದೆ. ಹೀಗಾಗಿ ಮೂರು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಒಂದು ವಾರದಿಂದಷ್ಟೇ ಪ್ರವಾಹ ಭೀತಿಯಿಂದ ಹೊರಬಂದ ಕರಾವಳಿಗರಲ್ಲಿ ಮತ್ತೆ ನೆರೆ ಭೀತಿ ಮನೆ ಮಾಡಿದೆ.
ಕರಾವಳಿ ಜೊತೆಗೆ ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ, ಹಾಸನ, ಸಕಲೇಶಪುರ ವ್ಯಾಪ್ತಿಯಲ್ಲಿ ಮುಂದಿನ ಐದು ದಿನ ಉತ್ತಮ ಮಳೆ ಆಗುವ ಲಕ್ಷಣಗಳು ಇವೆ. ಇದರೊಂದಿಗೆ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದೆ.
ಒಳನಾಡಿಗೆ ಸಾಧಾರಣ ಮಳೆ
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಯಾದಗಿರಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ಇದೇ ಜಿಲ್ಲೆಗಳಲ್ಲಿ ಕಳೆದ ಎರಡು ವಾರ ನಿರಂತರ ಮಳೆ ಆಗಿತ್ತು.

ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾರಪು, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯ ಲಕ್ಷಣಗಳು ಇಲ್ಲ. ಆದರೆ ನಿತ್ಯ ಆಗಾಗ ತುಂತುರು ಮತ್ತು ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರೀ ಮಳೆಗೆ ತುಂಬಿಹರಿದ ನದಿ, ಜನಜೀವನ ಅಸ್ತವೆಸ್ತ
ಜುಲೈ ತಿಂಗಳಲ್ಲಿ ಬಿದ್ದ ನಿರಂತರ ಮಳೆಯಿಂದಾಗಿ ರೈತರ ಬೆಳೆಗಳಿಗೆ ಹಾನಿ ಆಗಿದೆ. ತಾತ್ಕಾಲಿಕವಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಮಳೆ ತುಸು ಬಿಡುವು ನೀಡಿದ್ದರಿಂದ ಕೃಷಿ ಚಟುವಟಿಕೆಗಳು ಮತ್ತೆ ಆರಂಭವಾಗಿವೆ. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಜನಜೀವನ ಅಸ್ತವೆಸ್ತವಾಗಿತ್ತು. ಕೆಲವೆಡೆ ಸಾವು ನೋವುಗಳು ಸಂಭವಿಸಿದ್ದು, ಕೆರೆ ಕಟ್ಟೆಗಳು, ಜಲಪಾತಗಳು ಉಕ್ಕಿ ಹರಿಯುತ್ತಿವೆ. ನದಿಪಾತ್ರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಇನ್ನೂ ಆಗಸ್ಟ್ನಲ್ಲಿ ಅಧಿಕ ಮಳೆಯ ನಿರೀಕ್ಷೆ ಇದೆ.
ಕಳೆದ 24 ಗಂಟೆಯಲ್ಲಿ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ. ಉಳಿದ ಕೆಲವೆಡೆ ಸಾಧಾರಣ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications