ಐ.ಎಂ.ಎ ಹೂಡಿಕೆದಾರರಿಗೆ ಸಿಹಿ ಸುದ್ದಿ; ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ
ಬೆಂಗಳೂರು, ಮಾ.03: ಐಎಂಎ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರು ತಮ್ಮ ಹೂಡಿಕೆ ಹಿಂದಕ್ಕೆ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಕ್ಲೇಮ್ ಮಾಡಿಕೊಳ್ಳಲು ಅನುವು ಮಾಡಿಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಹೂಡಿಕೆದಾರರಿಂದ ಪ್ರತಿಕ್ರಿಯೆಗಳನ್ನು ಕೇಳಿದ್ದು, ಹೂಡಿಕೆದಾರರ ಪ್ರತಿಕ್ರಿಯೆ ಬಳಿಕ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ.
ಐಎಂಎ ಹಾಗೂ ಅದರ ಅಂಗ ಸಂಸ್ಥೆಗಳಲ್ಲಿ ವಂಚನೆ ಪ್ರಕರಣದ ಬಗ್ಗೆ ಆನ್ಲೈನ್ನಲ್ಲಿ ಕ್ಲೇಮು ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಆನ್ಲೈನ್ ಸಾಫ್ಟವೇರ್ ಸಿದ್ಧಪಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಶೀಘ್ರ ಅವಕಾಶ ಕೊಡಲಾಗುವುದು ಎಂದು ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹಾಗೂ ಸಹಾಯಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದ್ದಾರೆ.
ಐಎಂಎ ಹಗರಣದ ವಿಚಾರಣೆ ವಿಶೇಷ ನ್ಯಾಯಾಲಯ ಸ್ಥಾಪನೆ
ರಾಜ್ಯ ಸರ್ಕಾರವು ಐ.ಎಂ.ಎ ಮತ್ತು ಅದರ ಅಂಗ ಸಂಸ್ಥೆಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರವನ್ನು ನೇಮಿಸಿದೆ. ಹೂಡಿಕೆದಾರರಿಂದ ಕ್ಲೇಮು ಅರ್ಜಿಗಳನ್ನು ಸ್ವೀಕರಿಸುವಲ್ಲಿ ತೊಂದರೆ ಆಗಬಾರದು ಎಂದು ಆನ್ಲೈನ್ ಕ್ಲೇಮು ಪ್ರಕ್ರಿಯೆಯಿಂದ ಅರ್ಜಿಗಳನ್ನು ಸ್ವೀಕರಿಸಲು ಸಕ್ಷಮ ಪ್ರಾಧಿಕಾರ ಮುಂದಾಗಿದೆ.
ಹೂಡಿಕೆ ಹಿಂದಕ್ಕೆ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?
ರಾಜ್ಯ ಸರ್ಕಾರದ ಬೆಂಗಳೂರು-ಓನ್, ಕರ್ನಾಟಕ-ಓನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಕ್ಲೇಮುದಾರರು ಹಾಜರಾಗಿ ಆನ್ಲೈನ್ ಕ್ಲೇಮು ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಕ್ಲೇಮು ಅರ್ಜಿಯೊಂದಿಗೆ ಇ-ಅಟೆಸ್ಟೆಡ್ ಮೂಲಕ ಸಲ್ಲಿಸಬೇಕು. ಸಧ್ಯಕ್ಕೆ ದಾಖಲೆಗಳು ಇಲ್ಲದೆ ಇದ್ದರೆ ಕೇವಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನಂತರ ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಕ್ಲೇಮು ಇತ್ಯರ್ಥ ಪಡಿಸುವುದಕ್ಕೂ ಮೊದಲು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಾಗಿರುತ್ತದೆ. ಇ-ಅಟೆಸ್ಟೆಡ್ ಪ್ರಾಧಿಕಾರಿಗಳ ವಿವರಗಳನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದು ಹರ್ಷ ಗುಪ್ತಾ ತಿಳಿಸಿದ್ದಾರೆ.
ಏನೇನು ವಿವರಗಳನ್ನು ಭರ್ತಿ ಮಾಡಬೇಕು?
ಸಧ್ಯಕ್ಕೆ ಕ್ಲೇಮುದಾರರು ಆಧಾರ್ ಕಾರ್ಡ್ ಅಥವಾ ನಿಗದಿತ ಅಧಿಕಾರಿಗಳಿಂದ ದೃಢಪಟ್ಟಿರುವ ಪರ್ಯಾಯ ದಾಖಲೆಗಳು, ಉಪಯೋಗಿಸುತ್ತಿರುವ ಮೊಬೈಲ್ ದೂರವಾಣಿ ಸಂಖ್ಯೆ ಮತ್ತು ವಿಳಾಸ, ಐ.ಎಂ.ಎ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ ಸಂದರ್ಭದಲ್ಲಿ ನೀಡಲಾದ ಕ್ಲೈಂಟ್ ಐಡಿ(client ID) ಅಥವಾ ಕಸ್ಟಮರ್ ಐಡಿ(customer ID), ಹೂಡಿಕೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಗಳಾದ ಹೂಡಿಕೆ ಮೊತ್ತ, ಹಿಂತೆಗೆದ ಮೊತ್ತ, ಸ್ವೀಕೃತವಾದ ಮೊತ್ತ (pay out) ಮತ್ತು ಈಗ ಕ್ಲೇಮು ಮಾಡುತ್ತಿರುವ ಮೊತ್ತದ ದಾಖಲೆಗಳನ್ನು ಅಗತ್ಯವಾಗಿ ಸಲ್ಲಿಸಬೇಕಾಗಿರುತ್ತದೆ.
ಐಎಂಎ ಹಗರಣ; ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಸಂಕಷ್ಟ!
ಹೂಡಿಕೆದಾರರ ಪ್ರತಿಕ್ರಿಯೆ ಬಳಿಕ ಆನ್ಲೈನ್ ಸೌಲಭ್ಯ
ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಮೊದಲು ಆನ್ಲೈನ್ ಅರ್ಜಿ ಸಲ್ಲಿಸಲು, ಸಾಫ್ಟವೇರ್ ಬಗ್ಗೆ ಹೂಡಿಕೆದಾರರ ಪ್ರತಿಕ್ರಿಯೆಯನ್ನು ಪ್ರಾಧಿಕಾರ ಕೇಳಿದೆ. ಹೂಡಿಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ವೆಬ್ಸೈಟ್ ನಲ್ಲಿ ಹಾಗೂ ಕಛೇರಿ ಸಮಯದಲ್ಲಿ ಸಹಾಯವಾಣಿ ಸಂಖ್ಯೆ 080-46885959, ವಾಟ್ಸ್ಆ್ಯಪ್ ಸಂಖ್ಯೆ: 7975568880, ಅಥವಾ ಇ-ಮೇಲ್ [email protected] ಮೂಲಕ ಸಲ್ಲಿಸಬಹುದಾಗಿದೆ.
ಹೂಡಿಕೆದಾರ ಪ್ರತಿಕ್ರಿಯೆಗಳ ಆಧಾರದ ಮೇಲೆ ಕ್ಲೇಮು ಪ್ರಕ್ರಿಯೆ ಮತ್ತು ಕ್ಲೇಮು ಅಪ್ಲಿಕೇಶನ್ ವೆಬ್ಸೈಟ್ನ್ನು ಅಂತಿಮಗೊಳಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಐಎಂಎ ಬಹುಕೋಟಿ ವಂಚನೆ ಹಗರಣದ ತನಿಖೆ ನಡೆಸುತ್ತಿದೆ ಸಿಬಿಐ
ಐಎಂಎ ಪ್ರಕರಣವನ್ನು ರಾಜ್ಯ ಪೊಲೀಸ್ ಪೋಲೀಸ್ ಜೊತೆಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿತ್ತು. ಎರಡೂ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವೂ ಐಎಂಎ ಕೇಸ್ ವಿಚಾರಣೆ ನಡೆಸುತ್ತಿತ್ತು. ನಂತರ ಪ್ರಕರಣವನ್ನು ಸಿಬಿಐಗೆ ವರ್ಗಾಹಿಸಲಾಗಿದೆ. ಮನ್ಸೂರ್ 32 ಸಾವಿರಕ್ಕೂ ಹೆಚ್ಚು ಜನರಿಗೆ 500 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಇವರ ಮಾಲೀಕತ್ವದ ಐಎಂಎ ಜ್ಯುವೆಲ್ಸ್ ಕೂಡ ವಂಚನೆ ಮಾಡಿದ್ದವು. ಬಹುಕೋಟಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಹಣ ಕಳೆದುಕೊಂಡವರಿಗೆ ನ್ಯಾಯ ಕಲ್ಪಿಸುವ ಭರವಸೆ ಕೊಟ್ಟು ಸಕ್ಷಮ ಪ್ರಾಧಿಕಾರ ರಚಿಸಿತ್ತು. ಅಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.