ಶೇ.20ರಷ್ಟು ಪೌರಕಾರ್ಮಿಕರು ಮಾತ್ರ ನಿವೃತ್ತಿವರೆಗೆ ಬದುಕುಳಿಯುತ್ತಾರೆ!
ಬೆಂಗಳೂರು, ಮೇ 7: ದಿನನಿತ್ಯ ನಗರವನ್ನು ಸ್ವಚ್ಛವಾಗಿಡಲು ಸಾವಿರಾರು ಪೌರಕಾರ್ಮಿಕರು ಶ್ರಮ ಪಡುತ್ತಾರೆ. ಅಷ್ಟು ಶ್ರಮವಹಿಸಿ ದುಡಿದರೂ ಅವರು ಸುರಕ್ಷಿತವಾಗಿಲ್ಲ.
ಮನೆ, ಬೀದಿ ಶುಚಿಗೊಳಿಸುವ ಕಾಯಕದಲ್ಲಿರುವ ಶೇ.80 ರಷ್ಟು ಕಾರ್ಮಿಕರು ನಿವೃತ್ತಿಗೆ ಮುನ್ನವೇ ಜೀವ ತ್ಯಜಿಸುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ರಾಜ್ಯ ಸಪಾಯಿ ಕರ್ಮಚಾರಿ ಆಯೋಗವು ರಾಜ್ಯದಲ್ಲಿರುವ ಅಂದಾಜು 21 ಲಕ್ಷ ಪೌರಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಅಧ್ಯಯನದ ಕ್ಷೇತ್ರ ಕಾರ್ಯ ಪೂರ್ಣಗೊಂಡಿದ್ದು, ಇನ್ನೇನು ವರದಿ ಕೈಸೇರಬೇಕಿದೆ.
ಮೂರು ತಿಂಗಳಾದರೂ ಗುತ್ತಿಗೆ ಪೌರ ಕಾರ್ಮಿಕರಿಗೆ ಸಂಬಳ ಇಲ್ಲ
ಕೇವಲ ಶೇ.20ರಷ್ಟು ಪೌರಕಾರ್ಮಿಕರು ಮಾತ್ರವೇ ನಿವೃತ್ತಿ ಅಂಚಿನವರೆಗೆ ಬದುಕುತ್ತಿದ್ದು, ಇನ್ನುಳಿದ ಶೇ.80 ರಷ್ಟು ಕಾರ್ಮಿಕರು ವಿವಿಧ ರೋಗಗಳಿಗೆ ತುತ್ತಾಗಿ ನಿವೃತ್ತಿಗೆ ಮುನ್ನವೇ ಸೇವೆಯಿಂದ ದೂರ ಉಳಿಯುವ ಅಥವಾ ಮೃತಪಡುತ್ತಿರುವ ಸಂಗತಿ ಪ್ರಾಧ್ಯಾಪಕ ಡಾ. ಆರ್.ವಿ. ಚಂದ್ರಶೇಖರ್ ರಾಮೇನಹಳ್ಳಿ ನೇತೃತ್ವದಲ್ಲಿ ನಡೆಸಿರುವ ಪ್ರಾಯೋಗಿಕ ವರದಿಯಲ್ಲಿ ಬೆಳಕಿಗೆ ಬಂದಿದೆ.
ಬಳ್ಳಾರಿ ಹಾಗೂ ಬೆಂಗಳೂರಿನ ಪೌರಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ಪ್ರಾಯೋಗಿಕವಾಗೊ ನಡೆಸಿದ ಸಂಶೋಧನಾ ವರದಿ ಲಭ್ಯವಾಗಿದೆ. ನಗರವನ್ನು ಸ್ವಚ್ಛವಾಗಿಡುವ ಶುಚಿತ್ವದ ರಾಯಭಾರಿಗಳು ಕನಿಷ್ಠ ಸೌಲಭ್ಯಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದವರೆ ಬಹುಪಾಲು ಕಾರ್ಮಿಕರಿದ್ದು ಉಳಿದ ಜನಾಂಗಗಳ ಕಾರ್ಮಿಕರು ಬೆರಳೆಣಿಕೆಯಷ್ಟಿದ್ದಾರೆ. ಪೌರಕಾರ್ಮಿಕರಿಗಾಗುವ ಶೇ.98.84 ದಲಿತರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಗುತ್ತಿಗೆದಾರರಿಂದ ದೌರ್ಜನ್ಯವೂ ಈ ಕಾರ್ಮಿಕರ ಮೇಲೆ ನಡೆಯುತ್ತಿದ್ದು, ಈ ಎಲ್ಲ ವಾಸ್ತವವನ್ನು ಪೌರಕಾರ್ಮಿಕರು ಸಮೀಕ್ಷೆ ವೇಳೆ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.