ಮಂಗಳವಾರ ದಾಟಿದರೆ ಸರಕಾರ ಸೇಫ್; ಸಿಎಂಗೆ ಜ್ಯೋತಿಷಿಗಳ ಸಲಹೆ
Recommended Video
ಬೆಂಗಳೂರು, ಜುಲೈ 19: ವಿಶ್ವಾಸ ಮತ ಯಾಚನೆಯನ್ನು ಮುಂದಿನ ಮಂಗಳವಾರ ದಾಟಿಸಿಬಿಟ್ಟರೆ, ಅಂದರೆ ಬುಧವಾರದಂದು ಬಹುಮತ ಸಾಬೀತು ಪಡಿಸುವುದಾದರೆ ಕರ್ನಾಟಕದಲ್ಲಿ ಅಧಿಕಾರದಲ್ಲಿ ಇರುವ ಮೈತ್ರಿ ಸರಕಾರ ಉಳಿದುಕೊಂಡು ಬಿಡುತ್ತದಾ? ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗ- ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧೈರ್ಯ ಹೇಳಿದ್ದಾರೆ ಎನ್ನುತ್ತವೆ ಮೂಲಗಳು.
ಅದೇ ಕಾರಣಕ್ಕೆ ಕುಮಾರಸ್ವಾಮಿ ಅವರು ಕೂಡ ಹೆಚ್ಚಿನ ಒತ್ತಡ ಇಲ್ಲದೆ, ನಿರಾಳವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಅದೇ ಮೂಲಗಳ ಮಾಹಿತಿ. ಮೇಲುನೋಟಕ್ಕೆ ಸಂಖ್ಯಾ ಬಲವೇ ಇಲ್ಲದ ಸರಕಾರ ಇದು. ಮಂಗಳವಾರ ಕಳೆದ ನಂತರ ಅದು ಹೇಗೆ ಉಳಿದುಕೊಳ್ಳುತ್ತದೆ ಎಂಬುದು ಪ್ರಶ್ನೆಯಾಗಿ ಉದ್ಭವಿಸುವುದು ಸಹಜ. ಅದಕ್ಕೆ ಉತ್ತರ ಸಂಖ್ಯಾಬಲವೋ ಗಣಿತದಲ್ಲೋ ಇಲ್ಲ.
ಮಾಧ್ಯಮಗಳ ಜತೆಗೆ ಖಾಸಗಿಯಾಗಿ ಮಾತನಾಡುವ ಜೆಡಿಎಸ್ ಮುಖಂಡರು, ಈ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮಂಗಳವಾರದ ತನಕ ನಡೆಯುತ್ತದೆ. ಆ ನಂತರ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುತ್ತಾರೆ. ಈ ಸರಕಾರ ಉಳಿದುಕೊಳ್ಳುತ್ತದೆ ಎನ್ನುತ್ತಾರೆ. ಇಷ್ಟು ಶಾಸಕರು ರಾಜೀನಾಮೆ ನೀಡಿದ್ದಾರೆ. ಮತ್ತೆ ವಾಪಸ್ ಬರುವ ಪ್ರಶ್ನೆ ಇಲ್ಲ ಎನ್ನುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನೀವು ಹೇಳಿದ್ದು ಸಾಧ್ಯ ಆಗುವುದಾದರೆ ಹೇಗೆ ಎಂದು ಪ್ರಶ್ನೆ ಮುಂದಿಟ್ಟರೆ ಉತ್ತರ ಹೀಗಿರುತ್ತದೆ.

ದೇವೇಗೌಡರ ಕುಟುಂಬದಿಂದ ಪೂಜೆ-ಪುನಸ್ಕಾರ
"ಇಡೀ ದೇವೇಗೌಡರ ಕುಟುಂಬ, ಅಂದರೆ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಎಲ್ಲರೂ ಸರಕಾರ ಉಳಿಯಲಿ ಎಂದು ವಿಶೇಷ ಪೂಜೆ ಮಾಡಿಸುತ್ತಿದ್ದಾರಂತೆ. ಪುರೋಹಿತರು, ಜ್ಯೋತಿಷಿಗಳನ್ನು ಭೇಟಿ ಮಾಡಿ, ಅವರು ನೀಡಿದ ಸಲಹೆಯಂತೆಯೇ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯನ್ನು ಮಂಗಳವಾರ ಸಂಜೆ ತನಕ ಮುಂದೂಡುತ್ತಾ ಹೋಗಲು ಯತ್ನಿಸುತ್ತಾರೆ" ಎನ್ನುತ್ತಾರೆ.

ತಿರುಪತಿ- ಶೃಂಗೇರಿ ದರ್ಶನ ಮಾಡುತ್ತಿರುವ ರೇವಣ್ಣ
ಪುರೋಹಿತರು ಕೆಲವು ಹೋಮಗಳನ್ನು ಮಾಡುತ್ತಿದ್ದಾರೆ. ಈ ಸರಕಾರ ದೀರ್ಘ ಕಾಲ ಇರಲಿ ಎಂಬ ಕಾರಣಕ್ಕೆ ಎಚ್.ಡಿ.ರೇವಣ್ಣ ಬರಿಗಾಲಲ್ಲಿ ತಿರುಪತಿ, ಶೃಂಗೇರಿ ಎಂದು ತೀರ್ಥಕ್ಷೇತ್ರ ದರ್ಶನ, ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಇನ್ನೂ ವಿಚಿತ್ರ ಸಂಗತಿ ಏನೆಂದರೆ, ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ ಅವರು ಕೂಡ ವಿವಿಧ ಪೂಜೆ- ಪುನಸ್ಕಾರ, ಹೋಮಗಳನ್ನು ಮಾಡುತ್ತಿದ್ದಾರೆ.

ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಅತಿ ರುದ್ರ ಯಾಗ
ಬೆಂಗಳೂರಿನ ಗವೀಪುರಂ ಗುಟ್ಟಳ್ಳಿಯಲ್ಲಿ ಇರುವ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಆತಿ ರುದ್ರ ಯಾಗ ಮಾಡಿಸಿದ್ದಾರೆ. ಮುಖ್ಯಮಂತ್ರಿ ಗಾದಿಯ ಹಾದಿಯಲ್ಲಿ ಇರುವ ಅಡೆತಡೆಗಳು ನಿವಾರಣೆ ಆಗಲಿ ಎಂಬ ಕಾರಣಕ್ಕೆ ಈ ಯಾಗ ಮಾಡಿಸಿದ್ದಾರೆ. ಇನ್ನು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಯಡಿಯೂರಪ್ಪ ಅವರ ಸೋದರಿ ಶತ್ರು ಸಂಹಾರ ಯಾಗ ಮಾಡಿದ್ದಾರೆ. ಯಡಿಯೂರಪ್ಪ ಅವರ ಇಬ್ಬರು ಹೆಣ್ಣುಮಕ್ಕಳು ಕೂಡ ನಾನಾ ಪೂಜೆಗಳನ್ನು ಮಾಡಿಸುತ್ತಿದ್ದಾರೆ.

ಯಡಿಯೂರಪ್ಪ ಅವರಿಗೆ ಭಾನುವಾರ ಡೆಡ್ ಲೈನ್
ವಿಶ್ವಾಸಮತ ಯಾಚನೆಯನ್ನು ಮುಂದಿನ ಮಂಗಳವಾರ ಸಂಜೆ ದಾಟಿಸಿ ಎಂದು ಕುಮಾರಸ್ವಾಮಿ ಅವರಿಗೆ ಹೇಗೆ ಜ್ಯೋತಿಷಿಗಳು ಸಲಹೆ ನೀಡಿದ್ದಾರೋ, ಅದೇ ರೀತಿ ಭಾನುವಾರದೊಳಗೆ ಈ ಮೈತ್ರಿ ಸರಕಾರವನ್ನು ಕೆಡವಿ ಎಂದು ಯಡಿಯೂರಪ್ಪ ಅವರಿಗೆ ಕೆಲ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ ಎನ್ನುತ್ತವೆ ಮೂಲಗಳು.












Click it and Unblock the Notifications