ಗ್ರಹಣಕ್ಕೆ ಮುನ್ನ ಬಿಎಸ್ವೈಗೆ ಭಾರೀ ತಲೆನೋವು: 15 ಶಾಸಕರ ರಾಜೀನಾಮೆ ಬೆದರಿಕೆ!
ಡಿಸೆಂಬರ್ 26ರ ಖಗ್ರಾಸ ಸೂರ್ಯಗ್ರಹಣಕ್ಕೆ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭಾರೀ ತಲೆನೋವು ಎದುರಾಗಿದೆ. ತಮ್ಮ ಸರಕಾರ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರವಹಿಸಿದ್ದ ಮುಖಂಡರೇ ಯಡಿಯೂರಪ್ಪನವರ ವಿರುದ್ದ ತಿರುಗಿಬೀಳುವ ಸಾಧ್ಯತೆಯಿದೆ.
ರಾಜ್ಯದ ಪ್ರಮುಖ ಒಂದು ಸಮುದಾಯದ ಶಾಸಕರು ಮಾಸ್ ಆಗಿ ರಾಜೀನಾಮೆ ನೀಡುವ ಬಗ್ಗೆ ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಸರಿಯಾಗಿ ಮತ್ತು ಸಮರ್ಥವಾಗಿ ನಿಭಾಯಿಸದೇ ಇದ್ದಲ್ಲಿ, ಸರಕಾರದ ಭವಿಷ್ಯಕ್ಕೆ ತೊಂದರೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳು ಇತ್ತೀಚೆಗೆ ಬಹಿರಂಗವಾಗಿ, ಬಿಎಸ್ವೈ ವಿರುದ್ದ ತಮ್ಮ ಬೇಸರವನ್ನು ಹೊರಹಾಕಿದ್ದರು. ಈಗ ಆ ಸಮುದಾಯದ ಶಾಸಕರೊಬ್ಬರು ತಮ್ಮದೇ ಪಕ್ಷದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
ನಮಗೆ ಸಿಗಬೇಕಾದ ಮಾನ್ಯತೆ ಸಿಗದೇ ಇದ್ದಲ್ಲಿ, ಎಲ್ಲಾ ಹದಿನೈದು ಶಾಸಕರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಗ್ರಹಣ, ಧನುರ್ಮಾಸದ ಕಾರಣಕ್ಕಾಗಿ ಸಂಪುಟ ವಿಸ್ತರಣೆ, ಹೊಸವರ್ಷಕ್ಕೆ ಮುಂದೂಡಲ್ಪಟ್ಟಿದೆ.

ವಾಲ್ಮೀಕಿ ಸಮುದಾಯದ ಪೀಠಾದಿಪತಿ, ಬಿಜೆಪಿ ಸರಕಾರದ ವಿರುದ್ದ ಬೇಸರ
ಕೆಲವು ದಿನಗಳ ಹಿಂದೆ, ವಾಲ್ಮೀಕಿ ಸಮುದಾಯದ ಪೀಠಾಧಿಪತಿಗಳು ಬಿಜೆಪಿ ಸರಕಾರದ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದರು. "ಅಧಿಕಾರಕ್ಕೆ ಬರುವ ಮುನ್ನ, ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯತೆ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ನಮ್ಮ ಸಮುದಾಯವನ್ನು ಬಿಜೆಪಿ ವೋಟ್ ಬ್ಯಾಂಕ್ ಮಾಡಿಕೊಂಡಿದೆ" ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದರು.

ಶ್ರೀರಾಮುಲು, ಜಾರಕಿಹೊಳಿಯಾಗಲಿ, ಇಬ್ಬರೂ ನಮಗೆ ಎರಡು ಕಣ್ಣು
"ಶ್ರೀರಾಮುಲು ಆಗಲಿ ರಮೇಶ್ ಜಾರಕಿಹೊಳಿಯಾಗಲಿ, ಇಬ್ಬರೂ ನಮಗೆ ಎರಡು ಕಣ್ಣು ಇದ್ದಂತೆ. ಯಾರಿಗೆ, ಡಿಸಿಎಂ ಸ್ಥಾನ ಕೊಟ್ಟರು, ನಮಗೆ ಸಂತೋಷ" ಎಂದು ಶ್ರೀಪ್ರಸನ್ನಾನಂದ ಸ್ವಾಮೀಜಿಗಳು ಹೇಳಿದ್ದರು. ಇದರ ಬೆನ್ನಲ್ಲೇ, ಬಿಜೆಪಿ ಶಾಸಕರು, ಮುಖ್ಯಮಂತ್ರಿಗಳ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ವಾಲ್ಮೀಕಿ ಸಮಾಜ
ಸುರಪುರದ ಬಿಜೆಪಿ ಶಾಸಕ ನರಸಿಂಹ ನಾಯಕ (ರಾಜು ಗೌಡ) ಯಡಿಯೂರಪ್ಪ ವಿರುದ್ದ ಹೇಳಿಕೆಯನ್ನು ನೀಡಿದ್ದಾರೆ. "ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಬೇಕಿಲ್ಲ ಡಿಸಿಎಂ ಸ್ಥಾನದ ಅವಶ್ಯಕತೆಯೂ ಇಲ್ಲ. ಆದರೆ, ಸಮುದಾಯಕ್ಕೆ ಮಾನ್ಯತೆ ನೀಡಬೇಕು" ಎಂದು ರಾಜುಗೌಡ ಹೇಳಿದ್ದಾರೆ.

ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆಯ ವೇಳೆ ಯಾರಿಗೆ ಪ್ರಾತಿನಿಧ್ಯತೆ ನೀಡಬೇಕು ಎನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ರಾಜು ಗೌಡ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. "ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನಕ್ಕಿಂತ ಶೇ.7.5ರಷ್ಟು ಮೀಸಲಾತಿ ಬೇಕು" ಎಂದು ರಾಜು ಗೌಡ ಹೇಳಿದ್ದಾರೆ.

ಹದಿನೈದು ಶಾಸಕರು ರಾಜೀನಾಮೆ ನೀಡುತ್ತೇವೆ, ರಾಜು ಗೌಡ
ನಮ್ಮಿಷ್ಟು ಒತ್ತಾಯಕ್ಕೆ ಮಣಿಯದೇ ಇದ್ದರೆ, ನಮ್ಮ ಶ್ರೀಗಳು ನೀಡಿದ ಹೇಳಿಕೆಗೆ ನಾವು ಬದ್ದ, ಎಲ್ಲಾ ಹದಿನೈದು ಶಾಸಕರು ರಾಜೀನಾಮೆ ನೀಡುತ್ತೇವೆ. ಮೀಸಲಾತಿ ವಿಚಾರದಲ್ಲಿ ಶ್ರೀಗಳ ಆದೇಶಕ್ಕೆ ನಮ್ಮ ಸಹಮತವಿದೆ. ಮುಖ್ಯಮಂತ್ರಿಗಳು, ನಮ್ಮನ್ನು ರಾಜೀನಾಮೆ ಕೊಡುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎನ್ನುವ ನಂಬಿಕೆ ನಮಗಿದೆ" ಎಂದು ರಾಜು ಗೌಡ ಹೇಳಿದ್ದಾರೆ.












Click it and Unblock the Notifications