ಜ್ಯೋತಿಷ್ಯ ನಂಬೋಲ್ಲ : ಎಚ್ಡಿಕೆ, ಭವಿಷ್ಯದಲ್ಲಿ ಇರುವುದೇನು?
ಬೆಂಗಳೂರು, ಜನವರಿ 03 : 'ಜ್ಯೋತಿಷ್ಯ, ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಜನರ ಮೇಲೆ ವಿಶ್ವಾಸವಿದೆ. 113 ಸ್ಥಾನ ಗೆಲ್ಲಲೇಬೇಕು ಎಂಬುದು ನನ್ನ ಗುರಿ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶ್ರೀ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್, ಬೆಂಗಳೂರು ನಗರ ಜೆಡಿಎಸ್ ಘಟಕದ ವತಿಯಿಂದ ಬುಧವಾರ 'ಬೆಂಗಳೂರು ನಗರದ ಹಿರಿಯ ನಾಗರಿಕರೊಂದಿಗೆ ಸಂವಾದ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹಿರಿಯ ನಾಗರಿಕರ ಜೊತೆ ಕುಮಾರಸ್ವಾಮಿ ಸಂವಾದ, ಮುಖ್ಯಾಂಶಗಳು
ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, 'ಸಮ್ಮಿಶ್ರ ಸರ್ಕಾರ ನನ್ನ ಕನಸಲ್ಲ. ಕಡಿಮೆ ಕ್ಷೇತ್ರಗಳಲ್ಲಿ ಗೆದ್ದರೆ ಕಾಂಗ್ರೆಸ್ ಅಥವ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಬೇಕು. ಆಗ ನಾನು ನೀಡಿದ ಭರವಸೆ ಈಡೇರಿಸಲು ಸಾಧ್ಯವಿಲ್ಲ' ಎಂದರು.
ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ
'113 ಸೀಟು ಗೆಲ್ಲಲೇಬೇಕು ಎಂಬ ಗುರಿ ಹೊಂದಿದ್ದೇನೆ. ಕೆಲವು ಮಾಧ್ಯಮದ ಸಮೀಕ್ಷೆಗಳು 40 ರಿಂದ 45 ಸೀಟು ನಮಗೆ ಬರುತ್ತದೆ ಎಂದು ಹೇಳಿವೆ. ಜ್ಯೋತಿಷಿಗಳು ಹಲವು ಲೆಕ್ಕಾಚಾರ ಹೇಳಿದ್ದಾರೆ. ನಾನು ಸಮೀಕ್ಷೆ, ಜ್ಯೋತಿಷ್ಯ ನಂಬುವುದಿಲ್ಲ' ಎಂದು ಹೇಳಿದರು.
'ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ನಾನು ಹೆಚ್ಚು ಕಷ್ಟ ಪಡದೇ ಇದ್ದರೂ 40 ರಿಂದ 50 ಸ್ಥಾನಗಳಲ್ಲಿ ಜಯಗಳಿಸುತ್ತೇವೆ. ಅದು ನನಗೆ ಬೇಡ. 113 ಸ್ಥಾನ ಗೆದ್ದು ಜನರ ಜೊತೆ ಹೋಗುವ ಸರ್ಕಾರ ರಚನೆ ಮಾಡುವುದು ನನ್ನ ಕನಸು' ಎಂದರು ತಿಳಿಸಿದರು. ಯಾವ ಜ್ಯೋತಿಷಿ ಏನು ಹೇಳಿದ್ದರು?..
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವರು
ಪ್ರಕಾಶ್ ಅಮ್ಮಣ್ಣಾಯ ಎಂಬ ಜ್ಯೋತಿಷಿಗಳು, 'ಕರ್ನಾಟಕದಲ್ಲಿ ಚುನಾವಣೆ ನಡೆದರೆ ಅತಂತ್ರ ಸರ್ಕಾರ ರಚನೆಯಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೊಂಡು ಕುಮಾರಸ್ವಾಮಿ ಮುಖ್ಯಮಂತ್ರಿ, ದಿನೇಶ್ ಗುಂಡೂರಾವ್ ಉಪ ಮುಖ್ಯಮಂತ್ರಿಯಾಗುತ್ತಾರೆ' ಎಂದು ಭವಿಷ್ಯ ಹೇಳಿದ್ದಾರೆ.
ಕೋಡಿಮಠದ ಶ್ರೀಗಳ ಭವಿಷ್ಯ
ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿರುವ ಭವಿಷ್ಯದಂತೆ, 'ಪ್ರಮುಖ ಪಕ್ಷದ ರಾಜಕೀಯ ನಾಯಕ ಸಿಎಂ ಆಗುವುದಿಲ್ಲ, ಅನಿರೀಕ್ಷಿತ ವ್ಯಕ್ತಿ ರಾಜ್ಯದ ಅರಸನಾಗಲಿದ್ದಾನೆ'. ಪ್ರಮುಖ ಪಕ್ಷದ ರಾಜಕೀಯ ನಾಯಕ ಅಂದರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಎಂದು ಅರ್ಥೈಸಿಕೊಂಡರೆ, ಅನಿರೀಕ್ಷಿತ ವ್ಯಕ್ತಿ ಸಿಎಂ ಆಗುತ್ತಾರೆಂದರೆ ಅದು ಎಚ್ ಡಿ ಕುಮಾರಸ್ವಾಮಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?
ಸಮೀಕ್ಷೆ ಹೇಳುವುದೇನು?
ಪಬ್ಲಿಕ್ ಟಿವಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 90-100, ಬಿಜೆಪಿ 85-95, ಜೆಡಿಎಸ್ 40-45 ಸ್ಥಾನಗಳಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.
‘ಹೊಸ ತೆನೆಗೆ ದಾರಿಯಾಗುವುದು'
ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು ಎಂದು ಒಗಟಿನ ರೂಪದಲ್ಲಿ ನಾಗಸಾಧು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದರು.