ಗುತ್ತಿಗೆದಾರರನ್ನು ಡೆಲ್ಲಿಗೆ ಕರೆಯುತ್ತಿರೋದು ಯಾರೆಂದು ನನಗೆ ಗೊತ್ತಿದೆ: ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 10: ಬಿಬಿಎಂಪಿ ಗುತ್ತಿಗೆದಾರರು ಆರೋಪಗಳನ್ನ ಮಾಡುತ್ತಿದ್ದು, ಗುತ್ತಿಗೆದಾರರ ಹಿಂದೆ ಯಾರ್ಯಾರಿದ್ದಾರೆ ಅಂತ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆಗೆ ಗುತ್ತಿಗೆದಾರರು ವಿರೋಧ ಪಕ್ಷದ ನಾಯಕರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾನೂನು ಪ್ರಕಾರ ತನಿಖೆ ಮಾಡಬೇಕು ಅಂತ ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ, ಅವರಿಗೆ ನ್ಯಾಯ ಒದಗಿಸಬೇಕು, ಕೆಲಸಕ್ಕೆ ನ್ಯಾಯ ಒದಗಿಸಬೇಕು, ಜನರಿಗೆ ನ್ಯಾಯ ಓದಗಿಸಬೇಕು, ಸರ್ಕಾರಕ್ಕೆ ನ್ಯಾಯ ಓದಗಿಸಬೇಕು ಎಂದು ಹೇಳಿದರು.

ಪ್ರಚಾರಕ್ಕೆ ಯಾರು ಬೇಕಾದರೂ ಹೋಗಲಿ. ಡೆಲ್ಲಿಗೆ ಕರೆಯುತ್ತಿರೋದು ಯಾರೆಂದು ನನಗೆ ಗೊತ್ತಿದೆ. ಬಂದು ಸ್ಟೇಟಮೆಂಟ್ ಕೊಡಿ ಅಂತ ಕರೆಯುತ್ತಿದ್ದಾರೆ. ಪ್ರೆಸ್ ಮುಂದೆ ಯಾರು ಕಳುಸುತ್ತಿದ್ದಾರೆ ಅಂತ ಗೊತ್ತಿದೆ. ಎಲ್ಲ ನನಗೆ ಗೊತ್ತಿದೆ, ತನಿಖೆ ಆರ್ಡರ್ ಮಾಡಿದ್ದೇವೆ ಅವರು ಮಾಡಿರುವ ಕಾಮಗಾರಿ ಪ್ರೂವ್ ಮಾಡಲಿ. ಯಾರೆಲ್ಲ ಪ್ರಾಮಾಣಿಕ ಕೆಲಸ ಮಾಡಿದ್ದಾರೆ, ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇನ್ನೂ ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಬಿಎಂಪಿ ಗುತ್ತಿಗೆದಾರರ ಕಾಮಗಾರಿಯ ವಿಚಾರ 4 ತನಿಖಾ ತಂಡ ರಚನೆ ಮಾಡಿದ್ದಾರೆ. ಅವರು ತನಿಖಾ ವರದಿ ಕೊಟ್ಟಮೇಲೆ ಏನು ಕ್ರಮ ಕೈಗೊಳ್ಳಬೇಕು ನೋಡುತ್ತೇವೆ. ಅವರು ಬಿಲ್ ಕೊಡಬೇಕು ಆಮೇಲೆ ಹಣ ಬಿಡುಗಡೆ ಮಾಡುವುದು. ಆದರೆ ಅವರೇ ಬಿಲ್ ಕೊಟ್ಟಿಲ್ಲ. ಮೊದಲು ತನಿಖೆ ವರದಿ ಕೊಡಲಿ. ಆಮೇಲೆ ಹಣ ಬಿಡುಗಡೆ ಮಾಡುವುದು ಎಂದು ಹೇಳಿದರು.
ಕೆಂಪಣ್ಣ ಆರೋಪದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆಂಪಣ್ಣ ಈ ಹಿಂದೆ ಶೇ 40 % ಆರೋಪ ಮಾಡಿದ್ದು ನಿಜ. ಈಗ ಬಿಬಿಎಂಪಿ ಗುತ್ತಿಗೆದಾರರು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮಾಡಿರುವ ಶೇ 15% ರಷ್ಟು ಕಮಿಷನ್ ಆರೋಪ ಸುಳ್ಳು ಎಂದು ರಾಮಲಿಂಗಾರೆಡ್ಡಿ ಹೇಳಿದರು.












Click it and Unblock the Notifications