ರಾಜೀನಾಮೆ ಸಲ್ಲಿಕೆ ನಂತರ ಯಡಿಯೂರಪ್ಪ ಆಡಿದ ಮೊದಲ ಮಾತು...
ಬೆಂಗಳೂರು, ಜುಲೈ 26: ಸೋಮವಾರ ಬಿಜೆಪಿ ಸಾಧನಾ ಸಮಾವೇಶದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದು, ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ಗೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಕೆ ನಂತರ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, "75 ವರ್ಷ ಮೀರಿದ ಯಾರಿಗೂ ಮುಖ್ಯಮಂತ್ರಿಯಾಗಲು ಅವಕಾಶ ನೀಡಿರಲಿಲ್ಲ. ಆದರೆ ನನಗೆ ನೀಡಿದ್ದಾರೆ. ಮೋದಿಯವರಿಗೆ, ಅಮಿತ್ ಶಾ, ನಡ್ಡಾ ಅವರಿಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ. ಮುಂದೆ ಓದಿ...

ನನ್ನ ರಾಜೀನಾಮೆಗೆ ಯಾರೂ ಒತ್ತಾಯ ಮಾಡಿಲ್ಲ
"ನನಗೆ ಯಾರಿಂದಲೂ ರಾಜೀನಾಮೆ ನೀಡುವಂತೆ ಒತ್ತಾಯ ಬಂದಿಲ್ಲ. ನನ್ನ ರಾಜೀನಾಮೆಗೆ ಯಾರೂ ಒತ್ತಡ ಹೇರಿಲ್ಲ. ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ಮುಖ್ಯಮಂತ್ರಿ ಅಧಿಕಾರದ ಎರಡು ವರ್ಷ ಪೂರೈಸಿದ ನಂತರ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ನನಗೆ ಅವಕಾಶ ಮಾಡಿಕೊಟ್ಟ ರಾಜ್ಯದ ಜನತೆಗೆ ಧನ್ಯವಾದ
"ಎರಡು ತಿಂಗಳ ಹಿಂದೆಯೇ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ನನ್ನ ಅಧಿಕಾರಾವಧಿಯ ಎರಡು ವರ್ಷ ಪೂರೈಕೆಯ ಈ ಸುಸಂದರ್ಭದ ದಿನವೇ ರಾಜೀನಾಮೆ ನೀಡಬೇಕೆಂದು ತೀರ್ಮಾನಿಸಿ ಇಂದು ಘೋಷಣೆ ಮಾಡಿದ್ದೇನೆ" ಎಂದು ಹೇಳಿದ್ದಾರೆ.
"ನಾಲ್ಕು ಬಾರಿ ಸಿಎಂ ಆಗಲು ಅವಕಾಶ ಮಾಡಿಕೊಟ್ಟ ರಾಜ್ಯದ ಜನತೆಗೆ ನನ್ನ ಧನ್ಯವಾದ. ನಾನು ಈ ಉನ್ನತ ಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಟ್ಟ ಶಿಕಾರಿಪುರದ ಜನತೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಯಾರೇ ಮುಖ್ಯಮಂತ್ರಿಯಾದರೂ ಸಹಕಾರ ನೀಡುತ್ತೇನೆ
ಮುಂದಿನ ಸಿಎಂ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಹೆಸರನ್ನು ಶಿಫಾರಸ್ಸು ಮಾಡಲು ಇಷ್ಟಪಡುವುದಿಲ್ಲ. ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ರಾಜ್ಯದ ಬೆಳವಣಿಗೆಗೆ ಸಹಕಾರ ನೀಡುತ್ತೇನೆ" ಎಂದು ಹೇಳಿದ್ದಾರೆ.
Recommended Video

ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ
ರಾಜೀನಾಮೆ ನಂತರ ರಾಜ್ಯದಲ್ಲಿ ಬಿಜೆಪಿ ಏಳಿಗೆಗೆ ಸಂಕಲ್ಪ ಮಾಡುತ್ತೇನೆ. ಬಿಜೆಪಿ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ನೂತನ ಮುಖ್ಯಮಂತ್ರಿಗಳೊಂದಿಗೆ ರಾಜ್ಯದ ಏಳಿಗೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ, ರಾಜ್ಯಪಾಲ ಹುದ್ದೆ ಸ್ವೀಕರಿಸುವುದಿಲ್ಲ, ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಅಂದೇ ತಿಳಿಸಿದ್ದೇನೆ ಎಂದರು.












Click it and Unblock the Notifications