'ಸೂಟ್ ಕೇಸ್' ಹೇಳಿಕೆ ತಿರುಚಲಾಗಿದೆ, ಮಲ್ಲಿಕಾ ಘಂಟಿ ಸ್ಪಷ್ಟನೆ
ಹಂಪಿ, ಸೆಪ್ಟೆಂಬರ್ 15: "ಸೂಟ್ ಕೇಸ್ ತುಂಬಾ ದುಡ್ಡು ತೆಗೆದುಕೊಂಡು ಹೋದರೆ ಮಾತ್ರ ವಿಧಾನ ಸೌಧದಲ್ಲಿ ಕೆಲಸ ಆಗುತ್ತದೆ," ಎಂಬುದಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಉಪ ಕುಲಪತಿ ಮಲ್ಲಿಕಾ ಎಸ್. ಘಂಟಿ ಹೇಳಿಕೆ ನೀಡಿದ್ದಾರೆ ಎಂಬುದು ಸುದ್ದಿಯಾಗಿತ್ತು.
ಈ ಹೇಳಿಕೆಗೆ ಸರಕಾರದ ಕಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯೂ ಘಂಟಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಹೇಳಿಕೆ ನಿಜವಾಗಿದ್ದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು
ಇದಾದ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾ ಘಂಟಿ ತಾವು ಹಾಗೆ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಸುದ್ದಿ ಮಾಧ್ಯಮಗಳು ತಿರುಚಿ ಪ್ರಸಾರ ಮಾಡಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

"ಕಾರ್ಯಕ್ರಮವೊಂದಕ್ಕೆ ಚಂದ್ರಶೇಖರ ಕಂಬಾರರನ್ನು ಆಹ್ವಾನಿಸಲು ಹೋದಾಗ ಅವರು, ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವುದಾಗಿ ತಿಳಿಸಿದರೆ, ಅವರೇ ಕಾಯುತ್ತಿದ್ದರು. ಜೊತೆಗೆ ತಮ್ಮ ಅಧಿಕಾರಿಗಳನ್ನು ಕಳುಹಿಸಿ ಸೂಟ್ ಕೇಸ್ ಹಿಡಿದುಕೊಂಡು ತಮ್ಮ ಜತೆಗೆ ಬಂದು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ , ಸೂಟ್ ಕೇಸ್ ತುಂಬಾ ಹಣ ಕೊಟ್ಟು ಕಳುಹಿಸುತ್ತಿದ್ದರು ಎಂದು ರೂಪಕವಾಗಿ ಹೇಳಿದ್ದರು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ನಾವೇ ನನ್ನ ಸೂಟ್ ಕೇಸ್ (ಕಡತಗಳನ್ನು) ತೆಗೆದುಕೊಂಡು ಹೋಗಬೇಕಾಗಿದೆ ಎಂದು ರೂಪಕವಾಗಿಯೇ ಹೇಳಿದೆ," ಎಂದು ತಾವು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಘಂಟಿ ಹೇಳಿದ್ದಾರೆ.
ಮಾತ್ರವಲ್ಲ, "ಸುದ್ದಿಮಾಧ್ಯಮಗಳು ಈ ಮಾತನ್ನ ತಿರುಚಿ ಸರಕಾರದ ವಿರುದ್ಧವಾಗಿ ಮಾನ್ಯ ಮುಖ್ಯಮಂತ್ರಿಗಳ ವಿರುದ್ಧವಾಗಿ ಸರ್ಕಾರ, ವಿಧಾನಸೌಧಕ್ಕೆ ಸೂಟ್ ಕೇಸ್ ತೆಗೆದುಕೊಂಡು ಹಣ ತರಬೇಕಾಗಿದೆ ಎಂದು ತಿರುಚಿ ಪ್ರಚಾರ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ," ಎಂದು ಹೇಳಿದ್ದಾರೆ.

ಸರಕಾರದ ಬಗ್ಗೆ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ನನಗೆ ಅತ್ಯಂತ ಗೌರವವಿದೆ. ನನ್ನ ಭಾಷಣದಲ್ಲಿ ವಿಧಾನಸೌಧ ಪದ ಬಳಕೆಯನ್ನೇ ಮಾಡಿಲ್ಲ. ಈಗಿನ ಸರಕಾರ ಹಿಂದಿನ ಅವಧಿಗಿಂತಲೂ ಹೆಚ್ಚು ಅನುದಾನ ನೀಡಿದೆ ಎಂದು ತೇಪೆ ಹಚ್ಚಿದ್ದಾರೆ.












Click it and Unblock the Notifications