ಕೊನೆ ಕ್ಷಣದಲ್ಲಿ ಕೆ.ಷಡಕ್ಷರಿ ಕೈ ತಪ್ಪಿದ ಸಚಿವ ಸ್ಥಾನ!
ಬೆಂಗಳೂರು, ಸೆಪ್ಟೆಂಬರ್ 01 : ತಿಪಟೂರು ಶಾಸಕ ಕೆ.ಷಡಕ್ಷರಿ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ. ಇಂದು ಮೂವರು ಸಚಿವರು ಸಿದ್ದರಾಮಯ್ಯ ಸಂಪುಟ ಸೇರಲಿದ್ದು, ಷಡಕ್ಷರಿ ಅವರ ಬದಲು ಗೀತಾ ಮಹದೇವ ಪ್ರಸಾದ್ ಸಚಿವರಾಗಲಿದ್ದಾರೆ.
ಲಿಂಗಾಯತ ಕೋಟಾದಡಿ ಕೆ.ಷಡಕ್ಷರಿ ಅವರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮಂಗಳವಾರ ಹೊರಬಂದ ನೂತನ ಸಚಿವರ ಪಟ್ಟಿಯಲ್ಲಿ ಷಡಕ್ಷರಿ ಅವರ ಹೆಸರಿತ್ತು. ಅವರ ಬೆಂಬಲಿಗರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಗುರುವಾರ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿಯಲ್ಲಿ ಬದಲಾವಣೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಷಡಕ್ಷರಿ ಅವರನ್ನು ಮನೆಗೆ ಕರೆಸಿಕೊಂಡು ಸಂಪುಟಕ್ಕೆ ಸೇರಿಸಿಕೊಳ್ಳಲು ಕೊಳ್ಳಲು ಆಗುತ್ತಿಲ್ಲ ಎಂದು ಕಾರಣಗಳನ್ನು ವಿವರಿಸಿದ್ದಾರೆ. ಸೂಕ್ತ ಸ್ಥಾನಮಾನ ನೀಡುವ ಭರವಸೆ ಕೊಟ್ಟಿದ್ದಾರೆ.
ಗುರುವಾರ ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಷಡಕ್ಷರಿ ಅವರು, 'ಸಚಿವ ಸ್ಥಾನ ಕೊಡಿ ಎಂದು ನಾನು ಯಾವತ್ತೂ ಬೇಡಿಕೆ ಇಟ್ಟಿರಲಿಲ್ಲ. ನನ್ನ ಹೆಸರು ಓಡಾಡುತ್ತಿತ್ತು. ಆದ್ದರಿಂದ, ಬೆಂಬಲಿಗರು, ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅದೃಷ್ಟ ಇದ್ದರೆ ಮುಂದೆ ಸಚಿವ ಸ್ಥಾನ ಸಿಗುತ್ತದೆ ನೋಡೋಣ' ಎಂದು ಹೇಳಿದರು.
ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಮತ್ತು ಗುಂಡ್ಲುಪೇಟೆ ಶಾಸಕಿ ಗೀತಾ ಮಹದೇವ ಪ್ರಸಾದ್ ಸಚಿವರಾಗಿ ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ.












Click it and Unblock the Notifications