ಆಪರೇಷನ್ ಮಾಡಿಸಿಕೊಳ್ಳಲು ನಾನು ಪೇಷಂಟ್ ಅಲ್ಲ: ಅತೃಪ್ತ ಶಾಸಕ ಸುಧಾಕರ್
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 17: ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಸುಧಾಕರ್ ಅವರು, ತಾವು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಆಪರೇಷನ್ಗೆ ಬಲಿ ಆಗಲು ನಾನೇನು ಪೇಷಂಟಾ? ಎಂದು ವ್ಯಂಗ್ಯಭರಿತವಾಗಿ ಅವರು ಮಾಧ್ಯಗಳನ್ನೇ ಪ್ರಶ್ನೆ ಮಾಡಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿಯಿಂದಾಗಿ ಅವರು ಇತ್ತೀಚೆಗೆ ಗುರುತಿಸಿಕೊಂಡಿದ್ದರು.
ಈ ಮುಂಚೆ ಕೆಲವು ಬಿಜೆಪಿ ಮುಖಂಡರು ಸುಧಾಕರ್ ಅವರನ್ನು ಸಂಪರ್ಕಿಸಿರುವುದಾಗಿ ಸುದ್ದಿ ಹಬ್ಬಿತ್ತು. ಇದನ್ನು ಒಪ್ಪಿಕೊಂಡ ಸುಧಾಕರ್ ಬಿಜೆಪಿಯ ಕೆಲವು ಮುಖಂಡರು ಭೇಟಿ ಮಾಡಿದ್ದು ನಿಜ ಆದರೆ ಅದು ಆಪರೇಷನ್ ಕಮಲದ ಬಗ್ಗೆ ಆಗಿದ್ದ ಭೇಟಿ ಅಲ್ಲ ಕ್ಷೇತ್ರ ಸಮಸ್ಯೆ ಕುರಿತು ಮಾಡಿದ್ದ ಭೇಟಿ ಎಂದು ಹೇಳಿದರು.

'ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಿದ್ದೇನೆ'
ಸಿದ್ದರಾಮಯ್ಯ ಅವರ ಭೇಟಿ ಬಗ್ಗೆ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರ ಗಮನಸೆಳೆದಿದ್ದೇನೆ. ಸರ್ಕಾರದ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದು ತರವಲ್ಲ ಎಂದು ಸಿದ್ದರಾಮಯ್ಯ ಬುದ್ಧಿವಾದ ಹೇಳಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ.

ಸರ್ಕಾರಕ್ಕೆ ಮುಜುಗರ ಮಾಡಬೇಡಿರೆಂದು ಸೂಚನೆ
ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಬೇಡಿ, ಸರ್ಕಾರಕ್ಕೆ ಮುಜುಗರ ಉಂಟುಮಾಡಬೇಡಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈಗ ನಾನು ಏನು ಮಾತನಾಡಿದರೂ ಸಿದ್ದರಾಮಯ್ಯ ಹೀಗೆ ಮಾತನಾಡಲು ಹೇಳಿದ್ದಾರೆ ಅದಕ್ಕೆ ಮಾತನಾಡಿದ್ದಾರೆ ಎಂದು ಮಾಧ್ಯಮದವರು ಹೇಳುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದ ಮೇಲೆ ಆರೋಪ ಮಾಡಿದ್ದ ಸುಧಾಕರ್
ಸರ್ಕಾರದಲ್ಲಿ ಜೆಡಿಎಸ್ ಮಂತ್ರಿಗಳಿಗೆ, ಶಾಸಕರಿಗೆ, ಮುಖಂಡರಿಗೆ ಮಾತ್ರವೇ ಬೆಲೆ ಸಿಗುತ್ತಿದೆ. ಕಾಂಗ್ರೆಸ್ ನವರನ್ನು ಕಡೆಗಣಿಸಲಾಗುತ್ತಿದೆ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಹೀಗೆಯೇ ಆಗುತ್ತಿದೆ ಎಂದು ಈ ಹಿಂದೆ ಸುಧಾಕರ್ ಆರೋಪ ಮಾಡಿದ್ದರು. ಅದರ ಬಗ್ಗೆಯೂ ಮಾತನಾಡಿದ ಅವರು, 'ಈಗಾಗಲೇ ಬೆಂಕಿ ಹೊತ್ತಿಕೊಂಡಿದೆ ಅದಕ್ಕೆ ಮತ್ತಷ್ಟು ಪೆಟ್ರೋಲ್ ಸುರಿಯುವುದಿಲ್ಲ' ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವ ಸ್ಥಾನ ಆಕಾಂಕ್ಷಿ
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಸಚಿವ ಸ್ಥಾನಕ್ಕೆ ಯತ್ನಿಸಿದ್ದರು ಆದರೆ ಆಗ ದೊರೆತಿರಲಿಲ್ಲ. ಮೈತ್ರಿ ಸರ್ಕಾರದ ಮೊದಲ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸ್ಥಾನ ಸಿಗಲಿಲ್ಲ. ಎರಡನೇ ಅವಧಿಯ ಸಂಪುಟ ವಿಸ್ತರಣೆಯಲ್ಲಾದರೂ ಸಚಿವ ಸ್ಥಾನ ಸಿಗಲೆಂದು ಸುಧಾಕರ್ ಅವರು ಸಿದ್ದರಾಮಯ್ಯ ಬಳಿ ಲಾಭಿ ಮಾಡುತ್ತಿದ್ದಾರೆ.











Click it and Unblock the Notifications