ನಾನು ಆರೋಗ್ಯವಾಗಿದ್ದೇನೆ, 12 ಗ್ಯಾರಂಟಿ: ಕುಮಾರಸ್ವಾಮಿ
ಬೆಂಗಳೂರು, ಮಾ 6: ನನ್ನ ಆರೋಗ್ಯದ ಬಗ್ಗೆ ನನ್ನ ಮನೆಯವರಿಗೆ, ರಾಜ್ಯದ ಜನತೆಗಿಂತ ವಿರೋಧ ಪಕ್ಷದವರಿಗೇ ಹೆಚ್ಚಿನ ಚಿಂತೆ. ನನ್ನ ಆರೋಗ್ಯದ ವಿಚಾರದಲ್ಲಿ ವಿಪಕ್ಷದವರು ಅದೇನು ಆನಂದ ಅನುಭವಿಸುತ್ತಿದ್ದಾರೋ ನನಗೆ ತಿಳಿಯದು. ನಾನು ಆರೋಗ್ಯವಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುವರ್ಣ ನ್ಯೂಸ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಾನು ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ದೇವರ, ಜನತೆಯ ಮತ್ತು ಕಾರ್ಯಕರ್ತರ ಪ್ರೀತಿ, ಆಶೀರ್ವಾದದಿಂದ ಸದ್ಯ ಆರೋಗ್ಯವಾಗಿದ್ದೇನೆ. ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತೇನೆಂದು ಹೇಳಿದ್ದಾರೆ.
ಕಳೆದೆರಡು ವರ್ಷಗಳಿಂದ ಸತತವಾಗಿ ರಾಜ್ಯ ಪ್ರವಾಸ ಮಾಡಿ ಪಕ್ಷ ಬಲವರ್ಧನೆಗೆ ತೊಡಗಿಸಿ ಕೊಂಡಿದ್ದೇನೆ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ದೇವೇಗೌಡರು ನನಗೆ ವಿಶ್ರಾಂತಿ ತೆಗೆದು ಕೊಳ್ಳಲು ಹೇಳಿದ್ದರು.
ತಂದೆಯಾಗಿ ನನಗೆ ಅವರು ಆ ಸಲಹೆ ನೀಡಿದ್ದಾರೆ. ಇದರರ್ಥ ನಾನು 'ಅಸಮರ್ಥ' ಎಂದಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸದ ಮಾತನ್ನು ನಾನು ಆಡುವುದಿಲ್ಲ.
ಜೆಡಿಎಸ್ ಪ್ರಾಭಲ್ಯವಿರುವ ಕ್ಷೇತ್ರದ ನಾಡಿಮಿಡಿತ ಅರಿತಿದಿದ್ದೇನೆ. ಹತ್ತರಿಂದ ಹನ್ನೆರಡು ಸೀಟು ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸದ ಮಾತನ್ನಾಡಿದ್ದಾರೆ.
ಬಿಜೆಪಿ ಜೊತೆ ಹೊಂದಾಣಿಕೆ
ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸಿದಾಗ ವಾಸ್ತವತೆಯ ಅರಿವಿತ್ತು. ಆದರೆ ನಾನು ಆ ಇಪ್ಪತ್ತು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ನಡೆಸಿದ ಜನಪರ ಕೆಲಸದಿಂದ ಜನರು ನನ್ನನ್ನು ಗುರುತಿಸುವಂತಾಯಿತು ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಜಾತಿ ರಾಜಕಾರಣ
ಜಾತಿ ರಾಜಕಾರಣ ರಾಜ್ಯದಲ್ಲಿ ಇರುವುದನ್ನು ಒಪ್ಪಿಕೊಂಡ ಕುಮಾರಸ್ವಾಮಿ, ನಮ್ಮ ಪಕ್ಷ ಎಂದೂ ಒಕ್ಕಲಿಗರ ಪರವಾಗಿ ಮಾತ್ರ ಇರಲಿಲ್ಲ. ಎಲ್ಲಾ ಸಮುದಾಯದವರನ್ನು ಸರಿಸಮಾನವಾಗಿ ನೋಡುತ್ತಿದ್ದೆವು. ಈ ಹಿಂದೆ ಕೂಡಾ ಎಲ್ಲಾ ಜಾತಿಯವರಿಗೂ ಆದ್ಯತೆ ಮೇಲೆ ಟಿಕೆಟ್ ನೀಡಿದ್ದೆವು ಎಂದಿದ್ದಾರೆ.
ಮಗನಿಗೆ ರಾಜಕಾರಣದಲ್ಲಿ ಆಸಕ್ತಿಯಿಲ್ಲ
ನನ್ನ ಮಗನಿಗೆ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ರೇವಣ್ಣನ ಪುತ್ರ ರಾಜಕೀಯದಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾನೆ. ಮುಂದೆಂದೂ ನನ್ನ ಮಗ ರಾಜಕೀಯಕ್ಕೆ ಬರುವುದಿಲ್ಲ ಎಂದು ನಾನು ಹೇಳಲಾರೆ. ಭವಾನಿ ರೇವಣ್ಣ ಸ್ಪರ್ಧಿಸುತ್ತಾರೋ, ಇಲ್ಲವೋ ದೇವೇಗೌಡರೇ ಸ್ಪಷ್ಟ ಪಡಿಸ ಬೇಕು - ಕುಮಾರಸ್ವಾಮಿ
ತೃತೀಯ ರಂಗ
ದೇವೇಗೌಡರು ದೇಶದಲ್ಲಿ ತೃತೀಯ ರಂಗಕ್ಕಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ದೇಶಕ್ಕೆ ಸಮರ್ಥ ಸರಕಾರದ ಅವಶ್ಯಕತೆಯಿದೆ. ರಾಜ್ಯದ ಸಮಸ್ಯೆಗಳಿಗೆ ಸ್ಪಂಧಿಸುವ ಸರಕಾರ ಕೇಂದ್ರದಲ್ಲಿ ಇರಬೇಕಾಗಿದೆ. ಹಾಗಿದ್ದರೆ ಮಾತ್ರ ರಾಜ್ಯದ ಅಭಿವೃದ್ದಿ ಕೆಲಸಗಳು ಸುಲಭವಾಗಿ ನಡೆಯಲು ಸಾಧ್ಯ.
ಗೀತಾ ಶಿವರಾಜ್ ಕುಮಾರ್
ಗೀತಾ ಶಿವರಾಜ್ ಕುಮಾರ್ ಅವರು ರಾಜ್ ಕುಟುಂಬದ ಸೊಸೆ. ಹಾಗೆಯೇ, ಬಂಗಾರಪ್ಪನವರ ಮಗಳು ಕೂಡಾ. ರಾಜ್ ಕುಟುಂಬ, ಗೀತಾ ಏನು ನಿರ್ಧಾರ ತೆಗೆದು ಕೊಳ್ಳುತ್ತಾರೋ ಅದಕ್ಕೆ ನಾವು ಬದ್ದರಾಗಿರುತ್ತೇವೆ. ಒತ್ತಾಯ ಪೂರ್ವಕವಾಗಿ ಅವರನ್ನು ಕಣಕ್ಕಿಳಿಸುತ್ತಿಲ್ಲ.