ವೈದ್ಯರಲ್ಲಿ ಮಾನವೀಯ ಗುಣ ಬಹಳ ಮುಖ್ಯ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆಪ್ಟಂಬರ್ 18: ಪಠ್ಯಕ್ಕಿಂತಕೂ ಅನುಭವದ ಮೂಲಕ ಕಲಿಯುವುದು ಸಾಕಷ್ಟಿದೆ. ಮನು ಕುಲದಲ್ಲಿ ವ್ಯಕ್ತಿಗಳ ನೋವನ್ನು ಕಡಿಮೆ ಮಾಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಆದ್ದರಿಂದ ವೈದ್ಯರಲ್ಲಿ ಮಾನವೀಯ ಗುಣ ಬಹಳ ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ ಆಯೋಜಿಸಿದ್ದ 2016-17ರ ಪ್ರಥಮ ಎಂಬಿಬಿಎಸ್ ಬ್ಯಾಚ್ನ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಯಾದವರು ಸಮಾರಂಭದಲ್ಲಿ ಪದವಿ, ಪ್ರಮಾಣಪತ್ರ ಸ್ವೀಕರಿಸಿದ ಕೂಡಲೇ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಕಾಲೇಜಿನಲ್ಲಿ ಪಠ್ಯ ಓದಿ ಪರೀಕ್ಷೆ ಬರೆಯುತ್ತೇವೆ. ಆದರೆ ಜೀವನದಲ್ಲಿ ಪರೀಕ್ಷೆಗಳು, ಅನುಭವ ಮೂಲಕ ಸಾಕಷ್ಟು ಕಲಿಯುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.
ವೈದ್ಯರಾದ ನಿಮ್ಮಲ್ಲಿ ಸಹಾನುಭೂತಿ, ಮಾನವೀಯ ಗುಣಗಳು ಇರಬೇಕು. ಯಾಕೆಂದರೆ ಎಷ್ಟೋ ಜನ ಬಡವರು ಚಿಕಿತ್ಸೆಗೆಂದು ಬರುತ್ತಾರೆ. ಅವರೊಂದಿಗೆ ಬೆರೆತು ಅವರ ಕಾಯಿಲೆಗೆ ಚಿಕಿತ್ಸೆ ನೀಡಬೇಕು. ಆಗಲೇ ನೀವು ಕಲಿತ ವಿದ್ಯೆ ನಿಮ್ಮ ಕೈ ಹಿಡಿಯುತ್ತದೆ ಎಂದು ಹೇಳಿದರು.

ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಸಮಯದಲ್ಲಿ ಕೈ ಹಿಡಿದರು:
ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಿಂದ ದೇಶ ಇಂದು ಆಪತ್ತನ್ನು ಮೀರಿ ನಿಂತಿದೆ. 130 ಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೆ ಕೋವಿಡ್ ಎದುರಿಸೋದು ಸುಲಭವಲ್ಲ ಎಂದು ಇಡೀ ಪ್ರಪಂಚ ಮಾತನಾಡಿಕೊಳ್ಳುತ್ತಿತ್ತು. ಆಗ ವೈದ್ಯರು ಪ್ರಾಣದ ಹಂಗು ತೊರೆದು ಹೋರಾಡಿ ಜನರ ಪ್ರಾಣ ಉಳಿಸಿದರು. ಅಲ್ಲದೇ ದೇಶೀಯವಾಗಿ ಲಸಿಕೆ ಉತ್ಪಾದನೆ ಮಾಡಿದ್ದರಿಂದ 200 ಕೋಟಿಗೂ ಹೆಚ್ಚು ಲಸಿಕೆ ಡೋಸ್ ನೀಡಲು ಸಾಧ್ಯವಾಯಿತು.
ಈ ಪ್ರಕ್ರಿಯೆಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದ ವಿದ್ಯಾರ್ಥಿಗಳ ಸೇವೆ ಸಲ್ಲಿಸುವ ಮೂಲಕ ಕೋವಿಡ್ ಆಪತ್ತಿನಲ್ಲಿ ಕೈ ಜೋಡಿಸಿದರು. ದೇಶವನ್ನು ದೊಡ್ಡ ಪಿಡುಗಿನಿಂದ ಉಳಿಸುವಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರವು ಇದೆ ಎಂದು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘಿಸಿದರು.

ಕೋವಿಡ್ ಹೆಚ್ಚಾಗಿದ್ದ ಸಂದರ್ಭದಲ್ಲಿ ಆಕಾಶ್ ಆಸ್ಪತ್ರೆಯಲ್ಲಿ ಶೇ. 100ರಷ್ಟು ಬೆಡ್ಗಳನ್ನು ನೀಡಿ ಮಾನವೀಯತೆ ಮೆರೆದರು. ಆಸ್ಪತ್ರೆಯ ಅಧ್ಯಕ್ಷ ಮುನಿರಾಜು ಅವರು ಉದ್ದೇಶ ಮತ್ತು ತತ್ವ ಉನ್ನತ ಮಟ್ಟದ್ದಾಗಿದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಎಂ.ಕೆ ರಮೇಶ್, ಏಮ್ಸ್
ಕಾಲೇಜು ಅಧ್ಯಕ್ಷ ಮುನಿರಾಜು, ಪುಷ್ಪ ಮುನಿರಾಜು, ಡಾ. ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications