Vande Bharat; ಹುಬ್ಬಳ್ಳಿ, ಬೆಂಗಳೂರು ನಡುವೆ ಮಾರ್ಚ್ನಲ್ಲಿ ಸಂಚಾರ
ಬೆಂಗಳೂರು, ನವೆಂಬರ್ 20; ಕರ್ನಾಟಕದ 2ನೇ ವಂದೇ ಭಾರತ್ (Vande Bharat) ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಮೊದಲ ರೈಲು ಸಂಚಾರ ಆರಂಭವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಎರಡನೇ ರೈಲು ಸಂಚಾರದ ಕುರಿತು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ರಾಜ್ಯದ ರೈಲ್ವೆ ಯೋಜನೆ ಹಾಗೂ ಇತರ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
Vande Bharat Train; ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ ಕೇಳಿದ ಮಂಡಳಿ
ಈ ಸಭೆಯಲ್ಲಿ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪಹ್ಲಾದ್ ಜೋಶಿ, ಕೋಲಾರ ಸಂಸದ ಎಸ್. ಮುನಿಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮುಂತಾದವರು ಪಾಲ್ಗೊಂಡಿದ್ದರು.
ಶತಾಬ್ದಿ, ವಂದೇ ಭಾರತ್ ರೈಲು; ವೇಳಾಪಟ್ಟಿ ಬದಲಿಸಲು ಆಗ್ರಹ
ಈ ಸಭೆಯಲ್ಲಿ ಗದಗ-ವಾಡಿ, ರಾಯದುರ್ಗ-ತುಮಕೂರು, ಗಿಣಿಗೇರಾ-ರಾಯಚೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಕಡೂರು-ಚಿಕ್ಕಮಗಳೂರು-ಬೇಲೂರು, ಹಾಸನ-ಬೇಲೂರು, ಶಿವಮೊಗ್ಗ-ರಾಣೆಬೆನ್ನೂರು ಸೇರಿದಂತೆ ಇತರೆ ಹೊಸ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳು
ಮಾರ್ಚ್ನಲ್ಲಿ ವಂದೇ ಭಾರತ್ ರೈಲು ಸಂಚಾರ
ಸಭೆಯಲ್ಲಿ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, "ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಜೋಡಿಮಾರ್ಗ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಎರಡು ನಗರಗಳ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ಓಡಿಸಲು ಯೋಜಿಸಲಾಗಿದೆ" ಎಂದರು.
ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಅನುವಾಗುವಂತೆ ವಿದ್ಯುದ್ದೀಕರಣ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೆಪಿಟಿಸಿಎಲ್ಗೆ ಸೂಚಿಸಲಾಯಿತು.
ವೇಳಾಪಟ್ಟಿ ಕೇಳಿದ್ದ ರೈಲ್ವೆ ಸಚಿವಾಲಯ
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಲು ಭಾರತೀಯ ರೈಲ್ವೆ ಸಹ ಸಿದ್ಧತೆ ನಡೆಸುತ್ತಿದೆ. ರೈಲ್ವೆ ಮಂಡಳಿ ನೈಋತ್ಯ ರೈಲ್ವೆಗೆ ಪತ್ರ ಬರೆದು ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ವೇಳಾಪಟ್ಟಿ ನೀಡುವಂತೆ ಕೇಳಿತ್ತು.
ಹುಬ್ಬಳ್ಳಿಯ ನೈಋತ್ಯ ವಲಯ ಈಗಾಗಲೇ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸಹ ಇದನ್ನು ಖಚಿತಪಡಿಸಿದ್ದಾರೆ. ಉಭಯ ನಗರಗಳ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವಿನ ಸಂಚಾರಕ್ಕೆ ಸಹಾಯಕವಾಗಲಿದೆ. ಈ ರೈಲನ್ನು ಧಾರವಾಡದ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯೂ ಇದೆ.
ಮುಖ್ಯಮಂತ್ರಿಗಳು ಹೇಳಿದ್ದೇನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಕಾಲಿಕವಾಗಿ ಕಾಮಗಾರಿ ಪೂರೈಸಲು ಅನುಕೂಲವಾಗುವಂತೆ ಹೆಚ್ಚಿನ ಬೇಡಿಕೆ/ ತುರ್ತಾದ ಅಗತ್ಯ ಇರುವ ನೂತನ ಮಾರ್ಗಗಳಿಗೆ ಆದ್ಯತೆ ನೀಡಿ ಭೂಸ್ವಾಧೀನವನ್ನು ತ್ವರಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಸವರಾಜ ಬೊಮ್ಮಾಯಿ ಮತ್ತು ಅಶ್ವಿನಿ ವೈಷ್ಣವ್ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ವೆಚ್ಚ-ಹಂಚಿಕೆಯ ಆಧಾರದ ಮೇಲೆ ಕೈಗೊಂಡ ರೈಲ್ವೆ ಯೋಜನೆಗಳ ಶೀಘ್ರವಾದ ಅನುಷ್ಠಾನಕ್ಕೆ ಸಮನ್ವಯ ಸಾಧಿಸಲು ಕರ್ನಾಟಕ ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳ ಕಾರ್ಯ ತಂಡವನ್ನು (working group) ರಚಿಸಲು ತೀರ್ಮಾನಿಸಿದರು.
ಸಬ್ ಅರ್ಬನ್ ರೈಲು ಯೋಜನೆ ಪ್ರಗತಿ ಪರಿಶೀಲನೆ
ಈ ಸಭೆಯಲ್ಲಿ ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಯ ಪ್ರಗತಿ ಪರಿಶೀಲನೆ ಸಹ ನಡೆಸಲಾಯಿತು. ರೈಲ್ವೆ ಸಚಿವರು ಕೆಐಎ ಹಾಲ್ಟ್ ನಿಲ್ದಾಣವನ್ನು ಪರಿಶೀಲಿಸಿದರು ಮತ್ತು ವಿಮಾನ ನಿಲ್ದಾಣಕ್ಕೆ ಲಭ್ಯವಿರುವ ರೈಲು ಸೇವೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ರೈಲುಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲು ಯಲಹಂಕ-ದೇವನಹಳ್ಳಿ ಭಾಗದಲ್ಲಿ ಆಟೋ ಸಿಗ್ನಲಿಂಗ್ನೊಂದಿಗೆ ಜೋಡಿ ಮಾರ್ಗ ಜಾರಿಗೊಳಿಸುವ ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಹೆಚ್ಚಿನ ದಟ್ಟಣೆಯ ರೈಲು ಮಾರ್ಗಗಳ ಸಾಮರ್ಥ್ಯ ವರ್ಧನೆಯ ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ
ದಕ್ಷಿಣ ಭಾರತದ ಮೊದಲ ಮತ್ತು ದೇಶದ 5ನೇ ವಂದೇ ಭಾರತ್ ರೈಲು ಸೇವೆಗೆ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಕೈಗಾರಿಕಾ ಕೇಂದ್ರ ಚೆನ್ನೈ, ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಕೇಂದ್ರ ಬೆಂಗಳೂರು ಮತ್ತು ಪ್ರಸಿದ್ಧ ಪ್ರವಾಸಿ ನಗರವಾದ ಮೈಸೂರಿಗೆ ವಂದೇ ಭಾರತ್ ಸಂಪರ್ಕ ಕಲ್ಪಿಸುತ್ತಿದೆ.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ 2.0 ಸಂಚಾರ ನಡೆಸಲಿದೆ. ಈ ರೈಲು ವಿಮಾನ ಪ್ರಯಾಣದಂತಹ ಅನುಭವಗಳನ್ನು ನೀಡುತ್ತದೆ. ವಂದೇ ಭಾರತ್ 2.0 ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿಲೋಮೀಟರ್ಗಳ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್ಗಳವರೆಗೆ ಗರಿಷ್ಠ ವೇಗವನ್ನು ತಲುಪುವಂತಹ ಸುಧಾರಿತ ವ್ಯವಸ್ಥೆ ಹೊಂದಿದೆ.