ಆಟೋ, ಕ್ಯಾಬ್ ಚಾಲಕರಿಗೆ ಪರಿಹಾರ; ಅರ್ಜಿ ಸಲ್ಲಿಕೆ ವಿವರಗಳು
ಬೆಂಗಳೂರು, ಮೇ 28; ಕರ್ನಾಟಕ ಸರ್ಕಾರ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಲಾಕ್ಡೌನ್ ಘೋಷಣೆ ಮಾಡಿದೆ. ಆಟೋ, ಕ್ಯಾಬ್ ಚಾಲಕರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮೇ 27ರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಅಗತ್ಯ ದಾಖಲೆಗಳನ್ನು ನೀಡಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ. ನೇರವಾಗಿ, ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿಲ್ಲ.
ಸಾರಿಗೆ ಇಲಾಖೆಗೆ ಒಟ್ಟು 63 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ರೂ. 3000 ಸಾವಿರ ರೂ. ಸಹಾಯಧನ ಸಿಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಾಲಕರು ಲೈಸೆನ್ಸ್ ಮತ್ತು ನೋಂದಣಿ ಮಾಡಿಸಿರಬೇಕು.

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಸೇವಾ ಸಿಂಧು ವೆಬ್ಸೈಟ್ಗೆ ಭೇಟಿ ನೀಡಿದಾಗ ಅರ್ಜಿ ಸಲ್ಲಿಸುವ ಲಿಂಕ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಮತ್ತೊಂದು ಪುಟ ಓಪನ್ ಆಗುತ್ತದೆ. ಅಲ್ಲಿರುವ ಅಗತ್ಯ ವಿವರಗಳನ್ನು ನೋಡಿ ಭರ್ತಿ ಮಾಡಬೇಕು. ಒಟ್ಟು 5 ಹಂತದಲ್ಲಿ ವಿವರಗಳನ್ನು ಭರ್ತಿ ಮಾಡಬೇಕಿದೆ.

ಅರ್ಜಿದಾರರ ವಿವರಗಳು
ಮೊದಲ ಹಂತದಲ್ಲಿ ಚಾಲಕರು ಆಧಾರ್ ಕಾರ್ಡ್ನಲ್ಲಿ ಇರುವ ಮಾದರಿಯಲ್ಲಿ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ವಿಳಾಸ, ಜಿಲ್ಲೆ, ತಾಲೂಕು, ವರ್ಗವನ್ನು ನಮೂದಿಸಬೇಕು.
2ನೇ ಹಂತದಲ್ಲಿ ಡ್ರೈವಿಂಗ್ ಲೈಸೆನ್ಸ್ ನಂಬರ್, ಲೈಸೆನ್ಸ್ ವ್ಯಾಲಿಡಿಟಿ ದಿನಾಂಕ, ಅದರಲ್ಲಿ ಇರುವಂತೆ ಹೆಸರು, ಬ್ಯಾಡ್ಜ್ ಸಂಖ್ಯೆ, ವಾಹನದ ವರ್ಗವನ್ನು ನಮೂದು ಮಾಡಬೇಕು.

ವಾಹನ ವಿವರಗಳನ್ನು ನೀಡಿ
ಅರ್ಜಿದಾರರು 3ನೇ ಹಂತದಲ್ಲಿ ವಾಹನದ ವಿವರಗಳನ್ನು ನೀಡಬೇಕು. ವಾಹನದ ಸಂಖ್ಯೆ, ಚಾಸಿಸ್ ಸಂಖ್ಯೆ, ಹೆಸರು, ಸಾರಿಗೆ ವಾಹನದ ವರ್ಗ, ಆಸನ ಸಾಮರ್ಥ್ಯ, ಅರ್ಹತಾ ಪತ್ರದ ಸಿಂಧುತ್ವ ದಿನಾಂಕ ನಮೂದು ಮಾಡಬೇಕು.
4ನೇ ಹಂತದಲ್ಲಿ ಅರ್ಜಿದಾರರು ಬ್ಯಾಂಕ್ ಹೆಸರು, ಶಾಖೆಯ ಜಿಲ್ಲೆ, ಶಾಖೆ ಹೆಸರು, ಖಾತೆದಾರನ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ನಮೂದು ಮಾಡಬೇಕು.
Recommended Video

ಅಂತಿಮ ಹಂತದ ವಿವರ
ಅಂತಿಮ ಹಂತದಲ್ಲಿ ಆಟೋರಿಕ್ಷಾ ಕ್ಯಾಬ್ /ಟ್ಯಾಕ್ಸಿ ಚಾಲಕನಾದ ನಾನು ಲಾಕ್ಡೌನ್ ಸಮಯದಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವುದು ಸತ್ಯವಾಗಿದೆ ಮತ್ತು ಈ ಸಮಯದಲ್ಲಿ ನನ್ನ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ ಎಂದು ದೃಢೀಕರಿಸುತ್ತೇನೆ ಎಂಬ ಘೋಷಣೆಯನ್ನು ಕ್ಲಿಕ್ ಮಾಡಿ ಪೂರ್ಣಗೊಳಿಸಬೇಕು.












Click it and Unblock the Notifications